ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಒಕ್ಕೂಟದಿಂದ ಮುಷ್ಕರ: ಖಾಸಗಿ ಬಸ್​, ಆಟೋ, ಓಲಾ, ಊಬರ್​​​ ಸೇವೆ ಸ್ತಬ್ಧ.

ಬೆಂಗಳೂರು,ಸೆಪ್ಟಂಬರ್,11,2023(www.justkannada.in):  ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿಯೋಜನೆಯಿಂದ ಸಂಕಷ್ಟ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಒಕ್ಕೂಟ  ಮುಷ್ಕರ ಹೂಡಿದ್ದು, ನಗರದಾದ್ಯಂತ ಖಾಸಗಿ ಬಸ್​, ಆಟೋ, ಓಲಾ, ಊಬರ್​​​ ಸೇವೆಗಳು ಸ್ತಬ್ಧವಾಗಿದೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿಯೋಜನೆಯಿಂದ ಖಾಸಗಿ ಸಾರಿಗೆಗಳಿಗೆ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ವಾಹನ ಚಾಲಕರು ಮತ್ತು ಮಾಲಿಕರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿವೆ. ಆದರೆ ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್​​ಗೆ ಕರೆ ನೀಡಿವೆ.  40ಕ್ಕೂ ಹೆಚ್ಚು ಖಾಸಗಿ ಸಾರಿಗೆ ಸಂಘಟನೆಗಳು ಬೆಂಗಳೂರು ಬಂದ್​ಗೆ ಕರೆ ಕೊಟ್ಟಿದ್ದು ರಾತ್ರಿ 12ರಿಂದ ಇಂದು ರಾತ್ರಿ 12ರ ವರೆಗೂ ನಗರದಲ್ಲಿ ಆಟೋ, ಕ್ಯಾಬ್, ವ್ಯಾನ್, ಗೂಡ್ಸ್ ವಾಹನ ಸೇರಿದಂತೆ ಸೇವೆಗಳು ಸ್ಥಗಿತವಾಗಿದೆ.

ಖಾಸಗಿ ಸಾರಿಗೆ ಮುಷ್ಕರಕ್ಕೆ ಮೆಜೆಸ್ಟಿಕ್​ ಆಟೋ ಸಂಘ ಬೆಂಬಲ ಸೂಚಿಸಿದೆ. ಹೀಗಾಗಿ ಮೆಜೆಸ್ಟಿಕ್​ನ ಕೆಎಸ್​ಆರ್​ಟಿಸಿ ಆಟೋ ನಿಲ್ದಾಣದಲ್ಲಿ ಒಂದು ಆಟೋ ಕೂಡ ಕಂಡು ಬಂದಿಲ್ಲ. ಮುಂಜಾನೆಯೇ ಬೇರೆ, ಬೇರೆ ಊರುಗಳಿಂದ ಮೆಜೆಸ್ಟಿಕ್​ ಗೆ ಆಗಮಿಸುತ್ತಿರುವ ಜನರು ಆಟೋಗಳು ಇಲ್ಲದೆ ಬಿಎಂಟಿಸಿ ಬಸ್ ಗಳತ್ತ ಮುಖ ಮಾಡಿದ್ದಾರೆ. ಲಗೇಜ್ ಹೆಚ್ಚಿದೆ ಬಸ್​ ನಲ್ಲಿ ಹೋಗಲು ಆಗದು, ಆಟೋನೇ ಬೇಕು ಎನ್ನುವವರಿಗೆ ಭಾರಿ ಸಮಸ್ಯೆ ಉಂಟಾಗಿದೆ.

ಆಟೋ ಚಾಲಕರ ಪ್ರತಿಭಟನೆಗೆ ಪೊಲೀಸರು ಅಡ್ಡಿಪಡಿಸಿದ್ದಾರೆ. ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಮಾಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಜಾಲಹಳ್ಳಿ ಕ್ರಾಸ್​ನಲ್ಲಿ ಸಂಚಾರಕ್ಕೆ ಅಡ್ಡಿ ಪಡಿಸಿದಂತೆ ಅಟೋ ಚಾಲಕರಿಗೆ ಎಚ್ಚರಿಕೆ ನೀಡಿದರು.

ಖಾಸಗಿ ಸಾರಿಗೆ ವಾಹನ ಬಂದ್​ ಇದ್ದರೂ  ಸಂಚರಿಸುತ್ತಿದ್ದ ಆಟೋ, ಕ್ಯಾಬ್ ​​ಗಳನ್ನು ತಡೆದು ಚಾಲಕರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯುತ್ತಿದೆ. ಆಟೋ ಕ್ಯಾಬ್ ಸೇವೆ ಸ್ಥಗಿತ ಹಿನ್ನೆಲೆ ಜನರಿಗೆ ತೊಂದರೆಯುಂಟಾಗಿದೆ.

Key words: Strike -private transport -union – Bengaluru