ಶ್ರೀರಂಗಪಟ್ಟಣ: ವಿಶ್ವೇಶ್ವರಯ್ಯ ನಾಲೆಗೆ ಉರುಳಿದ ಕಾರು, ಒಂದೇ ಕುಟುಂಬದ ನಾಲ್ವರು ಬಲಿ

ಮಂಡ್ಯ, ಜುಲೈ 30, 2023 (www.justkannada.in): ಚಾಲಕನ ನಿಯಂತ್ರಣ ತಪ್ಪಿ ಕಾರು ನಾಲೆಗೆ ಉರುಳಿದ ಘಟನೆ ನಡೆದಿದ್ದು, ಒಂದೇ ಕುಟುಂಬದ ನಾಲ್ವರು ಜಲಸಮಾಧಿಯಾಗಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಕಾಡುಕೊತ್ತನಹಳ್ಳಿ ಮತ್ತು ದೊಡ್ಡಮುಲಗೂಡು ಮಾರ್ಗ ಮಧ್ಯೆ ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿ ಈ ಅವಘಡ ನಡೆದಿದೆ.

ರೇಖಾ(28),ಸಂಜು(15),ಮಮತಾ(30) ಮೃತ ದುರ್ದೈವಿಗಳು. ನರಸೀಪುರ ತಾಲ್ಲೂಕಿನ ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ನಿವಾಸಿಗಳು. ಮತ್ತೊರ್ವ ಮಹಿಳೆ ಮಹದೇವಮ್ಮ (40)ವರ್ಷ ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿ ಗ್ರಾಮದ ನಿವಾಸಿ. ಮೃತ ನಾಲ್ವರು ಕೂಡ ಒಂದೇ ಕುಟುಂಬ ಸದಸ್ಯರಾಗಿದ್ದಾರೆ.

ಆದಿಚುಂಚನಗಿರಿ ದೇವಸ್ಥಾನಕ್ಕೆ ತೆರಳುವ ವೇಳೆ ಘಟನೆ ನಡೆದಿದೆ. ಮೃತ ಮಹಿಳೆ ಮಮತಾರ ಮಗ ಮನೋಜ್ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ. ಕಾರು ಚಾಲಕ ಮನೋಜ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅರಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.