ಸಿದ್ದರಾಮಯ್ಯ ಅವರೇ ನಿಮಗೆ ತಾಕತ್ತು, ಧಮ್ ಇದ್ದರೆ ಅಭಿವೃದ್ಧಿ ಇಟ್ಟುಕೊಂಡು ರಾಜಕಾರಣ ಮಾಡಿ- ಸಂಸದ ಪ್ರತಾಪ್ ಸಿಂಹ ಕಿಡಿ.

ಮೈಸೂರು,ಡಿಸೆಂಬರ್,26,2023(www.justkannada.in): ತಮ್ಮ ಸಹೋದರನ ಮೇಲೆ ನೂರಾರು ಮರ ಕಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿ ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಸಂಸತ್ ಘಟನೆ ನಂತರ ಕಾಂಗ್ರೆಸ್  ನನ್ನ ಮೇಲೆ ವೈಯಕ್ತಿಕ ದಾಳಿ ಜಾಸ್ತಿ ಮಾಡಿದ್ದಾರೆ. ಕಾರ್ಯಕರ್ತನಿಂದ ಹಿಡಿದು ಸಿಎಂ ಪುತ್ರನವರೆಗೂ ಎಲ್ಲರೂ ನನ್ನ ಟಾರ್ಗೆಟ್ ಮಾಡಿದ್ದಾರೆ. ನನ್ನನ್ನು ಭಯೋತ್ಪಾದಕ ಅಂತಾ ಬಿಂಬಿಸುವ ಪ್ರಯತ್ನವನ್ನು ಕಾಂಗ್ರೆಸಿಗರು ಮಾಡಿದರು. ಮುಸ್ಲಿಂರೆಲ್ಲಾ ಭಯೋತ್ಪಾದಕರು ಅನ್ನೋ ರೀತಿ ನನಗೆ ಮುಸ್ಲಿಂ ವೇಷ ತೊಡಿಸಿ ಕೈಯಲ್ಲಿ ಬಾಂಬ್ ಕೊಟ್ಟಿದ್ದರು.  ಸಿದ್ದರಾಮಯ್ಯ ಅವರೇ ನಿಮಗೆ ನಿಜವಾಗಲೂ ತಾಕತ್ತು, ಧಮ್ ಇದ್ದರೆ ಅಭಿವೃದ್ಧಿ ಇಟ್ಟುಕೊಂಡು ರಾಜಕಾರಣ ಮಾಡಿ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.

ಮೈಸೂರಿನ ಹುಣಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಂಸತ್ ವಿಚಾರದಲ್ಲಿ ನಾನು ಸ್ಪಷ್ಟನೆ ಕೊಟ್ಟ ಬೆನ್ನಲ್ಲೆ ಪ್ರತಾಪ್ ಸಿಂಹ ಸಹೋದರ ಮರಗಳ್ಳ ಅಂತಾ ಕಾಂಗ್ರೆಸ್ ನವರು ಪೋಸ್ಟ್ ಮಾಡಿದ್ದರು. ಡಿ.‌ 16 ರಂದು ಎಫ್ ಐಆರ್  ಆಗಿದೆ. ಅದನ್ನು ಮೊನ್ನೆ ನನ್ನ ತಮ್ಮನ ಹೆಸರಿನಲ್ಲಿ ತಿರುಚಿದ್ದು ಯಾಕೆ? ಪ್ರತಾಪ್ ಸಿಂಹನನ್ನು ಈ ಕ್ಷೇತ್ರದಲ್ಲಿ ಸೋಲಿಸಲು ಆಗಲ್ಲ ಅಂತಾ ಸಿದ್ದರಾಮಯ್ಯ ಅವರಿಗೆ ಗೊತ್ತು. ನನ್ನ ತಮ್ಮ‌ನ ಹೆಸರು ಎಫ್ ಐಅರ್ ನಲ್ಲಿ ಇಲ್ಲ. ಆದರೂ ಅವನ ಹೆಸರು ಯಾಕೆ ತರುತ್ತಿದ್ದಾರೆ. ನನ್ನ ತಮ್ಮಂದಿರು, ತಂಗಿ ಯಾರು ಅಂತಾನೂ ಮೈಸೂರು ಜನ ನೋಡಿಲ್ಲ. ಚುನಾವಣೆ ವೇಳೆ ನನ್ನ ತಮ್ಮಂದಿರು ಒಂದು ತಿಂಗಳು ಬಂದು ಹೋಗುತ್ತಾರೆ ಅಷ್ಟೇ. ಮೈಸೂರು ಕಡೆ ಅವರು ಮತ್ತೆ ಯಾವತ್ತೂ ತಲೆ ಹಾಕಲ್ಲ.ಯಾವ ಸಂಸದರು, ಶಾಸಕರ ಸಹೋದರರು ಕೃಷಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ ಹೇಳಿ? ನನ್ನ ಸಹೋದರರು ಕೃಷಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಮಿನೀಟ್, ಕಾಂಟ್ರಾಕ್ಟ್ , ವರ್ಗಾವಣೆ ಯಾವುದರಲ್ಲೂ ನನ್ನ ಸಹೋದರರು ಇಲ್ಲ. ಪ್ರತಾಪ್ ಸಿಂಹ ಅವಹೇಳನ ಮಾಡಬೇಕು ಅಂತಾ ಹೀಗೆ ಮಾಡುತ್ತಿದ್ದಾರೆ. ನಿಮ್ಮದೆ ಪೊಲೀಸ್ ಇಲಾಖೆ, ನಿಮ್ಮದೆ ಸರಕಾರ ಇದೆ ತನಿಖೆ ಮಾಡಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಗೆ ನನ್ನ ಮೇಲೆ ಯಾಕೆ ದ್ವೇಷ  ನಿಮಗೆ, ಬಡವರ ಮಕ್ಕಳು ರಾಜಕಾರಣ ಮಾಡಬಾರದಾ? 9 ವರ್ಷದಲ್ಲಿ ನಾನು ಏನು ಕೆಲಸ ಮಾಡಿದ್ದೇನೆ, ಸಿದ್ದರಾಮಯ್ಯ ಅವರು 40 ವರ್ಷದಲ್ಲಿ ಏನು ಮಾಡಿದ್ದಾರೆ ಹೇಳಲಿ. ನೀನು ಗೌಡ, ಕುರುಬು, ನೀನು ಲಿಂಗಾಯತ ಅಂತಾ ನಾನು ಅವರ ರೀತಿ ಜಾತಿ ರಾಜಕಾರಣ ಮಾಡಿಲ್ಲ. ಅಭಿವೃದ್ಧಿ ರಾಜಕಾರಣ ಮಾತ್ರ ನಾನು ಮಾಡುವುದು. ನಿರಂತರವಾಗಿ  ನನ್ನ ಮೇಲೆ ದಾಳಿ ನಡೆಯುತ್ತಿದೆ. ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್  ಸೋತ ಕೂಡಲೇ ಸಿದ್ದರಾಮಯ್ಯ ಕುರ್ಚಿ ಅಲ್ಲುಗಾಡುತ್ತದೆ. ಹೀಗಾಗಿ ನನ್ನ ಮೇಲೆ ಸತತ ಅಕ್ರಮಣ ಸಾಗಿದೆ. ಸಿದ್ದರಾಮಯ್ಯ ಅವರೇ ಅಭಿವೃದ್ಧಿ ಇಟ್ಟುಕೊಂಡು ರಾಜಕಾರಣ ಮಾಡಿ. ಈ ರೀತಿ ದ್ವೇಷದ ರಾಜಕಾರಣ ಮಾಡಬೇಡಿ. ಸಿದ್ದರಾಮಯ್ಯ ಅವರು ಅಭದ್ರತೆಯಿಂದ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ 28 ಜನ ಸಂಸದರು ಇದ್ದಾರೆ. ಆದರೆ ಪ್ರತಾಪ್ ಸಿಂಹನ ಮಾತ್ರ ಟಾರ್ಗೆಟ್ ಮಾಡುತ್ತಾರೆ ಏಕೆ? ನಾನು ಸೋಮಾರಿಸಿದ್ದನ ರೀತಿ ಸುಮ್ಮನೆ ಕುಳಿತುಕೊಂಡು ಜಾತಿ ರಾಜಕಾರಣ ಮಾಡಿಲ್ಲ. ಅಭಿವೃದ್ಧಿ ರಾಜಕಾರಣ ಮಾಡುತ್ತಿದ್ದೇನೆ. ಹೀಗಾಗಿ ನಾನೇ ಟಾರ್ಗೆಟ್ ಎಂದು ಪ್ರತಾಪ್ ಸಿಂಹ ಗುಡುಗಿದರು.

Key words: Siddaramaiah -politics -development – MP Pratap Simha