ರಾಜ್ಯದ ಅಭಿವೃದ್ಧಿಗಳಿಗೆ ತಿಲಾಂಜಲಿ: ಕಾಂಗ್ರೆಸ್ ಆಡಳಿತವೇ ಭ್ರಷ್ಟಾಚಾರದ ಅವತಾರ ಎತ್ತಿದೆ- ನಳೀನ್ ಕುಮಾರ್ ಕಟೀಲ್ ಕಿಡಿ.

ಬೆಂಗಳೂರು, ಆಗಸ್ಟ್​,9,2023(www.justkannada.in): ರಾಜ್ಯದ ಅಭಿವೃದ್ಧಿಗಳಿಗೆ ಸರ್ಕಾರ ತಿಲಾಂಜಲಿ ಇಡುತ್ತಿದೆ. ಕಾಂಗ್ರೆಸ್ ಆಡಳಿತವೇ ಭ್ರಷ್ಟಾಚಾರದ ಅವತಾರ ಎತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಿಡಿಕಾರಿದರು.

ಇಂದು ಟ್ವೀಟ್ ಮಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ನಳೀನ್ ಕುಮಾರ್ ಕಟೀಲ್, ಖುದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ಗುತ್ತಿಗೆದಾರರಲ್ಲಿ ಕಮಿಷನ್ ಕೇಳುತ್ತಿದ್ದಾರೆ. ಚೆಲುವರಾಯಸ್ವಾಮಿ ಅವರು ತಮ್ಮ ಭ್ರಷ್ಟಾಚಾರದ ಕೃಷಿಗೆ ಅಧಿಕಾರಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಾಂಗ್ರೆಸ್ ಆಡಳಿತವೇ ಭ್ರಷ್ಟಾಚಾರದ ಅವತಾರ ಎತ್ತಿದೆ.‌ ಇಂತಹ ಭ್ರಷ್ಟ ಎಟಿಎಂ ಸರ್ಕಾರದ ಸಚಿವರ ರಾಜಿನಾಮೆ ಯಾವಾಗ ಸಿದ್ಧರಾಮಯ್ಯ ಅವರೇ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಅವಾಸ್ತವಿಕ ಗ್ಯಾರಂಟಿಗಳಿಂದಾಗಿ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಅವರೇ ಒಪ್ಪಿಕೊಂಡಿದ್ದಾರೆ. ಗುತ್ತಿಗೆದಾರರಿಗೆ ಬಿಲ್‌ ಗಳನ್ನು ಪಾವತಿಸಲು ಕನಿಷ್ಠ 3 ವರ್ಷ ಬೇಕು ಎಂದು ಡಿಸಿಎಂ ಹೇಳುತ್ತಿರುವುದು ರಾಜ್ಯದ ಅಭಿವೃದ್ಧಿಗಳಿಗೆ ಕಾಂಗ್ರೆಸ್ ಸರ್ಕಾರ ಸಂಪೂರ್ಣ ತಿಲಾಂಜಲಿ ಇಡುವ ಸ್ಪಷ್ಟ ಸೂಚನೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಒಂದೆಡೆ ಚೆಲುವರಾಯ ಸ್ವಾಮಿ ಅವರ ಭ್ರಷ್ಟಾಚಾರದ ಕೃಷಿ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಮತ್ತೊಂದೆಡೆ ಖುದ್ದು ಕಲೆಕ್ಷನ್‌ಗೆ ಇಳಿದಿರುವ ಡಿಸಿಎಂ ಡಿಕೆ ಶಿವಕುಮಾರ್​ ಗುತ್ತಿಗೆದಾರರ ಜೀವ ಹಿಂಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಮಾತ್ರವಲ್ಲದೇ, ಕಮಿಷನ್ ಮತ್ತು ಕಲೆಕ್ಷನ್ ಕೂಡ ಬಣಕ್ಕೆ ಇಂತಿಷ್ಟು ಎಂದು ಫಿಕ್ಸ್ ಆಗಿರುವ ಹಾಗಿದೆ ಎಂದು ಹರಿಹಾಯ್ದಿದ್ದಾರೆ.

Key words: Shame -state- Congress –administration-corruption- Naleen Kumar Kateel