Mysore Traffic Signal: ಅಳವಡಿಕೆ ಬಗ್ಗೆ ಮಾಹಿತಿ ಇಲ್ಲ ಎಂದ ಪಾಲಿಕೆ..!

ಮೈಸೂರು, ಜೂನ್ 30,2026 (www.justkannada.in): ನಗರದ ವಿವಿಧ ರಸ್ತೆಗಳಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅಳವಡಿಸಲಾಗಿರುವ ಟ್ರಾಫಿಕ್ ಸಿಗ್ನಲ್‌ಗಳಿಗೆ ಮೈಸೂರು ಮಹಾನಗರ ಪಾಲಿಕೆಯ ಅನುಮತಿ ಇದೆಯೇ ಎಂಬುದನ್ನು ಪ್ರಶ್ನಿಸಿ ಹಿರಿಯ ವಕೀಲ ಅ.ಮ. ಭಾಸ್ಕರ್ ಅವರು ಸಲ್ಲಿಸಿದ್ದ ಮಾಹಿತಿ ಹಕ್ಕು (RTI) ಅರ್ಜಿಗೆ ಮಹಾನಗರ ಪಾಲಿಕೆ ಮಹತ್ವದ ಉತ್ತರ ನೀಡಿದೆ.

ಹಿರಿಯ ವಕೀಲ ಅ.ಮ. ಭಾಸ್ಕರ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ, ಮೈಸೂರು ನಗರ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಳವಡಿಸಲಾದ ಟ್ರಾಫಿಕ್ ಸಿಗ್ನಲ್‌ ಗಳಿಗೆ ಪಾಲಿಕೆಯಿಂದ ನೀಡಲಾದ ಆಡಳಿತಾತ್ಮಕ ಅನುಮೋದನೆ, ತಾಂತ್ರಿಕ ಮಂಜೂರು, ಅಂದಾಜು ವೆಚ್ಚ, ಪೊಲೀಸ್ ಇಲಾಖೆಯಿಂದ ಬಂದ ಪ್ರಸ್ತಾವನೆಗಳು, ಸಿವಿಲ್ ಕಾಮಗಾರಿಗಳ ವಿವರ, ಕಡತ ಟಿಪ್ಪಣಿಗಳು ಹಾಗೂ ಆಂತರಿಕ ಪತ್ರ ವ್ಯವಹಾರಗಳ ದಾಖಲೆಗಳನ್ನು ಒದಗಿಸುವಂತೆ ಕೋರಿದ್ದರು.

ಇದಲ್ಲದೆ, ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಸಂಬಂಧಿಸಿದಂತೆ ಪಾಲಿಕೆಯಿಂದ ಯಾವುದೇ ಆಕ್ಷೇಪಣೆ ವ್ಯಕ್ತವಾಗಿತ್ತೇ, ಅನುಮತಿ ನೀಡಿದ ಅಧಿಕಾರಿಗಳ ಹೆಸರು ಮತ್ತು ಹುದ್ದೆಗಳು, ಅನಧಿಕೃತ ಅಳವಡಿಕೆಗಳಿದ್ದರೆ ಕೈಗೊಂಡ ಕ್ರಮ, ಪೊಲೀಸ್ ಇಲಾಖೆ ಮತ್ತು ಪಾಲಿಕೆ ನಡುವಿನ ಸಮನ್ವಯ ಸಭೆಗಳ ವಿವರಗಳು ಹಾಗೂ ಪಾಲಿಕೆಯ ಅನುಮತಿ ಇಲ್ಲದೆ ಸಿಗ್ನಲ್ ಅಳವಡಿಸಿದ್ದರೆ ಅದರ ಕಾನೂನುಬದ್ಧ ಅಧಿಕಾರದ ಮಾಹಿತಿಯನ್ನೂ ಕೇಳಲಾಗಿತ್ತು.

ಈ ಅರ್ಜಿಗೆ ಉತ್ತರಿಸಿರುವ ಮೈಸೂರು ಮಹಾನಗರ ಪಾಲಿಕೆಯ ಸಾರ್ವಜನಿಕ ಮಾಹಿತಿ ಅಧಿಕಾರಿ, “ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ದಾಖಲೆಗಳು ಲಭ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಪಾಲಿಕೆಯ ಈ ಉತ್ತರ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ನಗರದಲ್ಲಿ ಅಳವಡಿಸಲಾಗಿರುವ ಟ್ರಾಫಿಕ್ ಸಿಗ್ನಲ್‌ ಗಳಿಗೆ ಸಂಬಂಧಿಸಿದ ಅನುಮತಿ ಪ್ರಕ್ರಿಯೆ, ದಾಖಲೆ ನಿರ್ವಹಣೆ ಹಾಗೂ ಸಂಬಂಧಿತ ಇಲಾಖೆಗಳ ಪಾತ್ರದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಆರ್‌ ಟಿಐ ಅರ್ಜಿದಾರ ಹಿರಿಯ ವಕೀಲ ಅ.ಮ. ಭಾಸ್ಕರ್ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಹಾಗೂ ಇತರ ಸಂಬಂಧಿತ ಪ್ರಾಧಿಕಾರಗಳಿಂದಲೂ ಮಾಹಿತಿ ಪಡೆಯಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.

#RTI #AMBhaskar #Mysuru #MysuruCityCorporation #TrafficSignal #MCC #RightToInformation #JustKannada

Key words: RTI, AM Bhaskar, Mysuru City Corporation, Traffic Signal