ನಾವು ಅಧಿಕಾರಕ್ಕೆ ಬಂದರೇ ಕಲ್ಯಾಣ ಕರ್ನಾಟಕ ಭಾಗದ ಪ್ರತಿ ಕ್ಷೇತ್ರದ ಎಲ್ಲಾ ಪಂಚಾಯಿತಿಗೂ 1ಕೋಟಿ ರೂ. ಅನುದಾನ- ಸಿದ್ಧರಾಮಯ್ಯ

ಬೀದರ್,ಫೆಬ್ರವರಿ,3,2023(www.justkannada.in): ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಕಲ್ಯಾಣ ಕರ್ನಾಟಕ ಭಾಗದ ಪ್ರತಿ ಕ್ಷೇತ್ರದ ಎಲ್ಲಾ ಪಂಚಾಯಿತಿಗೂ 1ಕೋಟಿ ರೂ. ಅನುದಾನ ನೀಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಭರವಸೆ ನೀಡಿದರು.

ಬೀದರ್ ನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ‍್ಧರಾಮಯ್ಯ, ಮೋದಿ ಅವರು ಪ್ರತಿದಿನ ಕರ್ನಾಟಕದಲ್ಲಿದ್ದರೂ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ 41 ಕ್ಷೇತ್ರಗಳಿವೆ. ಪ್ರತಿ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಗೂ 1ಕೋಟಿ ಅನುದಾನ ನೀಡುತ್ತೇವೆ. 5 ವರ್ಷದಲ್ಲಿ 5 ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 31 ಸಾವಿರ ಹುದ್ದೆ ಭರ್ತಿ ಮಾಡಿದ್ದೇವೆ. ಆದರೆ ಈಗಿನ ಬಿಜೆಪಿ ಸರ್ಕಾರ  ಒಂದೇ ಒಂದು ಹುದ್ದೆಯನ್ನ ತುಂಬಿಲ್ಲ. ಬಿಜೆಪಿ  3 ಸಾವಿರ ಕೋಟಿ ರೂ. ಕೊಡುವುದಾಗಿ ಹೇಳಿ ಏನೂ ಮಾಡಿಲ್ಲ. ಪ್ರಜಾಧ್ವನಿ ಮೂಲಕ ಸರ್ಕಾರದ ಭ್ರಷ್ಟಾಚಾರ ಜನರ ಮುಂದಿಟ್ಟಿದ್ದೇವೆ . ಬಿಜೆಪಿ ಸರ್ಕಾರದ ಪಾಪ ಕರ್ಮದ ಕಾಂಡ ಜನರ ಮುಂದಿಟ್ಟಿದ್ದೇವೆ.  ಲೂಟಿ ಹೊಡೆಯುವುದು ಬಿಟ್ಟರೇ ಬಿಜೆಪಿಗೆ ಬೇರೆನೂ ಗೊತ್ತಿಲ್ಲ  ಎಂದು ಕಿಡಿಕಾರಿದರು.

ವಿಧಾನಸೌಧದ ಪ್ರತಿಗೋಡೆಗಳು ಲಂಚದ ಬಗ್ಗೆ ಪಿಸುಗುಡುತ್ತಿವೆ. ಬಿಜೆಪಿ ಕಮಿಷನ್ ದಂಧೆಗೆ ಆನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .  ರಾಜ್ಯ ಸರ್ಕಾರದ ಪ್ರತಿ ಕಚೇರಿಯಲ್ಲೂ ಲಂಚ ತಾಂಡವಾಡುತ್ತಿದೆ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

Key words: Rs.1 crore -panchayats – every -constituency – Kalyan Karnataka-Siddaramaiah