ಯಶವಂತಪುರದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ್ದು ರೌಡಿಗಳು: ಬಿ.ಕೆ ಹರಿಪ್ರಸಾದ್ ಹೇಳಿಕೆಗೆ ಸಚಿವ ಬಿ.ಸಿ ಪಾಟೀಲ್ ತಿರುಗೇಟು.

ಮೈಸೂರು,ಜನವರಿ,18,2023(www.justkannada.in): ಯಶವಂತಪುರದಲ್ಲಿ ಚಪ್ಪಲಿ, ಪೊರಕೆ ಸೇವೆ ಮಾಡಿದ್ದು ಯಾಕಂತ ಹೇಳಲಿ ಎಂದು ಹೇಳಿಕೆ ನೀಡಿದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ಯಶವಂತಪುರದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ್ದು ರೌಡಿಗಳು. ಪೊಲೀಸ್ ಇಲಾಖೆಯಲ್ಲಿದ್ದಾಗ ಹೊಡೆಯುವುದು ಹೊಡೆಸಿಕೊಳ್ಳುವುದು ಸಾಮಾನ್ಯ. ಅವತ್ತು ಕಡಿಮೆ ಜನರಿದ್ದರು ನಮ್ಮ ಮೇಲೆ ಅಟ್ಯಾಕ್ ಮಾಡಿದರು. ಆದರೆ ಬಿಕೆ ಹರಿಪ್ರಸಾದ್ ಅವರ ಹೇಳಿಕೆ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಕೆಟ್ಟ ಆಪಾದನೆ ಮಾಡಿದರೆ ಮೆಚ್ಚುತ್ತಾರೆ ಮತ ಹಾಕುತ್ತಾರೆ ಅಂದುಕೊಂಡರೆ ಮೂರ್ಖತನ. ವೇದಿಕೆ ಸಿಕ್ಕಿದೆ ಯಾರೋ ಶಿಳ್ಳೆ ಚಪ್ಪಾಳೆ ಹೊಡೆಯುತ್ತಾರೆ ಅಂತಾ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಟಾಂಗ್ ನೀಡಿದರು.

ಸ್ಕಿಲ್ ಇಂಡಿಯಾ ಅಲ್ಲ ಕಿಲ್ ಇಂಡಿಯಾ ಎಂಬ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಬಿಸಿ ಪಾಟೀಲ್,  ಅವರಿಗೆ ಟೀಕೆ. ಮಾತನಾಡುವುದೆ ಕೆಲಸವಾಗಿದೆ. ಬಿ ಕೆ ಹರಿಪ್ರಸಾದ್ ಪ್ರಧಾನಿ ಬಗ್ಗೆ ಮಾತನಾಡುವಷ್ಟು ದೊಡ್ಡವರು ಅಂತಾ ನನಗೆ ಅನಿಸಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಪ್ರಧಾನಿಯವರ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.

ಮೋದಿ ಸುಳ್ಳಿನ ಸರದಾರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿಸಿ ಪಾಟೀಲ್, ಸುಳ್ಳು ಒಮ್ಮೆ ಹೇಳಬಹುದು ಮತ್ತೆ ಮತ್ತೆ ಹೇಳಲು ಸಾಧ್ಯವಿಲ್ಲ. 2014ರಲ್ಲಿ ಬಹುಮತ ಪಡೆದರು 2019ರಲ್ಲಿ ಅದಕ್ಕಿಂತ ಜಾಸ್ತಿ ಬಂತು. ಚುನಾವಣೆ ಬರುತ್ತಿದೆ ಯಾರೇ ಆಗಲಿ ಕೆಟ್ಟ ಶಬ್ದ ಬಳಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

Key words: Rowdies- attacked – Yeshwantpur:-Minister -BC Patil – BK Hariprasad- statement.