ರಾಜ್ಯದ ಟ್ಯಾಬ್ಲೋಗೆ ನಿರಾಕರಣೆ: ಕೇಂದ್ರದ ನಡೆಗೆ ಸಚಿವ ಹೆಚ್.ಸಿ ಮಹದೇವಪ್ಪ ಬೇಸರ.

ಮೈಸೂರು,ಜನವರಿ,10,2024(www.justkannada.in): ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ ಗೆ ರಾಜ್ಯದ ಸ್ಥಬ್ದ ಚಿತ್ರಗಳಿಗೆ ಅನುಮತಿ ನಿರಾಕರಣೆ ಹಿನ್ನೆಲೆ ಕೇಂದ್ರ ಸರ್ಕಾರದ ನಡೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಹೆಚ್.ಸಿ ಮಹದೇವಪ್ಪ,  ಕರ್ನಾಟಕದ ಸ್ಥಬ್ದ ಚಿತ್ರಗಳಿಗೆ ಪ್ರಾತಿನಿಧ್ಯವನ್ನು ನಿರಾಕರಿಸುವ ಮೂಲಕ ಕೇಂದ್ರ ಸರ್ಕಾರವು ಗಣತಂತ್ರ ವ್ಯವಸ್ಥೆಗೆ ಅಪಚಾರ ಎಸಗಿದೆ. ಕರ್ನಾಟಕದಿಂದ ಅತಿ ಹೆಚ್ಚು ತೆರಿಗೆ ಹಣ ಸಂಗ್ರಹಿಸುವುದನ್ನು ಬಿಟ್ಟರೆ ಇವರಿಂದ ಕರ್ನಾಟಕ ರಾಜ್ಯಕ್ಕೆ ಕಿಂಚಿತ್ ಸಹಕಾರ ಇಲ್ಲ. ಇವರು ತೆರಿಗೆ ಹಣದ ಪಾಲನ್ನು ಕೇಳಿದರೆ ಕೊಡುವುದಿಲ್ಲ. ಬರ ಪರಿಹಾರ ಕೇಳಿದರೆ ಜಾಣ ಕುರುಡು ಪ್ರದರ್ಶಿಸುತ್ತಾರೆ. ಬಡವರ ಹಸಿವಿಗೆ ಬೇಕಾದ ಅನ್ನಭಾಗ್ಯ ಅಕ್ಕಿಯನ್ನು ಕೊಂಡುಕೊಳ್ಳಲು ಕೇಳಿದರೆ ಸಾರ್ವಜನಿಕರಿಗೆ ಸೇರಿದ ಕೇಂದ್ರ ಆಹಾರ ನಿಗಮವು ಇವರ ಸ್ವಯಂ ಆಸ್ತಿಯೇನೋ ಎಂಬಂತೆ ವರ್ತಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಒಟ್ಟಿನಲ್ಲಿ ಚುನಾವಣಾ ಸೋಲಿಗೆ ಸೇಡು ತೀರಿಸಿಕೊಳ್ಳುವಂತೆ. ಕೇಂದ್ರವು ವರ್ತಿಸುತ್ತಿದ್ದು ಇವರ ವರ್ತನೆಯು ನಿಜಕ್ಕೂ ಗಣತಂತ್ರ ವ್ಯವಸ್ಥೆಯ ಒಳಗೆ ತಲೆ ತಗ್ಗಿಸುವ ಸಂಗತಿಯಾಗಿದೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ಕಿಡಿಕಾರಿದ್ದಾರೆ.

Key words: Rejection – state –tableau- Minister- HC Mahadevappa – Central Govt