Thursday, August 6, 2026

BDA Apartments

Home Front Page ರಾಜ್ಯಸಭಾ ಚುನಾವಣೆಯಲ್ಲಿ ಸಿದ್ಧರಾಮಯ್ಯ ತಂತ್ರಗಾರಿಕೆಗೆ ಜಯ: ಜೆಡಿಎಸ್ ಗೆ ಮರ್ಮಾಘಾತ.

ರಾಜ್ಯಸಭಾ ಚುನಾವಣೆಯಲ್ಲಿ ಸಿದ್ಧರಾಮಯ್ಯ ತಂತ್ರಗಾರಿಕೆಗೆ ಜಯ: ಜೆಡಿಎಸ್ ಗೆ ಮರ್ಮಾಘಾತ.

ಬೆಂಗಳೂರು,ಜೂ,11,2022(www.justkannada.in): ನಿನ್ನೆ ನಡೆದ ರಾಜ್ಯದಿಂದ ರಾಜ್ಯಸಭೆಗೆ ನಾಲ್ಕು ಸ್ಥಾನಗಳ  ಚುನಾವಣೆ ಭಾರಿ ಕುತೂಹಲವನ್ನುಂಟು ಮಾಡಿತ್ತು.  ಚುನಾವಣೆಯಲ್ಲಿ ಮೂವರು ಬಿಜೆಪಿ ಅಭ್ಯರ್ಥಿಗಳು ಒಬ್ಬರು ಕಾಂಗ್ರೆಸ್ ಅಭ್ಯರ್ಥಿ ವಿಜಯದ ಮಾಲೆ ಧರಿಸಿದ್ದಾರೆ.

ಆದರೆ ಜೆಡಿಎಸ್ ಕಣಕ್ಕಿಳಿಸಿದ್ದ ಕುಪೇಂದ್ರ ರೆಡ್ಡಿ ಅವರಿಗೆ ಸೋಲಾಗಿದ್ದು, ಇದಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೂಡಿದ್ಧ ತಂತ್ರಗಾರಿಕೆಯ ಗೆಲುವು ಕಾರಣ ಎನ್ನಬಹುದು.  ಹೌದು,  ಕಾಂಗ್ರೆಸ್‌ ನ ಎರಡನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳುವಲ್ಲಿ ವಿಫಲವಾಗಿದ್ದರೂ ಸಹ ಸಿದ್ದರಾಮಯ್ಯ ಪ್ರಯೋಗಿಸಿದ ತಂತ್ರಗಾರಿಕೆಗೆ ಫಲ ಸಿಕ್ಕಿದೆ.

ರಾಜ್ಯ ರಾಜಕಾರಣದಲ್ಲಿ ಸಂದಿಗ್ಧ ಪರಿಸ್ಥಿತಿ ಉಂಟಾದಾಗ ಪ್ರತಿಬಾರಿಯೂ ಆ ಪರಿಸ್ಥಿತಿಯ ಲಾಭ ಪಡೆಯುತ್ತಿದ್ದ ಜೆಡಿಎಸ್ ಗೆ ಈ ಬಾರಿ ರಾಜ್ಯಸಭೆ ಚುನಾವಣೆಯಲ್ಲಿ ಮರ್ಮಾಘಾತವಾಯಿತು.  ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಮೇಲೆ ಜೆಡಿಎಸ್ ವರಿಷ್ಠರು, ನಾಯಕರು ಒತ್ತಡ ಹಾಕಿದ್ದರು.ಸ್ವತಃ ಹೆಚ್.ಡಿ ದೇವೇಗೌಡರೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಮಾತನಾಡಿದ್ದರು. ಜತೆಗೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕವೂ ಒತ್ತಡ ಹಾಕಿ ತಮ್ಮ ಅಭ್ಯರ್ಥಿ ಬೆಂಬಲಿಸುವಂತೆ ಕೋರಿದ್ದರು. ಆದರೆ ಈ ಹಂತದಲ್ಲಿ ಕಾಂಗ್ರೆಸ್‌ 2ನೇ ಅಭ್ಯರ್ಥಿ ಅದೂ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದು ಸಾಧಿಸಿದರು. ಈ ಮೂಲಕ ಕಾಂಗ್ರೆಸ್‌ ಪಕ್ಷದೊಳಗೂ ತಮ್ಮ ಮಾತೇ ಅಂತಿಮ ಎಂಬ ಸ್ಪಷ್ಟಸಂದೇಶ ರವಾನೆಯಾಗುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು.

ಇನ್ನು ನಿನ್ನೆ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಟ  ಜಗ್ಗೇಶ್​ ಮತ್ತು ಲೆಹರ್ ಸಿಂಗ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಜೈರಾಮ್ ರಮೇಶ್ ಸಹ  ವಿಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ​ 2ನೇ ಅಭ್ಯರ್ಥಿ ಮನ್ಸೂರ್​ ಅಲಿ ಖಾನ್  ಮತ್ತು ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಕುಪೇಂದ್ರ ರೆಡ್ಡಿ ಅವರು ಸೋಲನ್ನಪ್ಪಿದ್ದಾರೆ. ಈ ಮೂಲಕ ಜೆಡಿಎಸ್ ಗೆ

ಒಟ್ಟು 224 ಶಾಸಕರು ಮತ ಚಲಾಯಿಸಿದ್ದರು. ಮೊದಲ ಪ್ರಾಶಸ್ತ್ಯದ ಮತ ಎಣಿಕೆ ರಾತ್ರಿ 8.15ರ ವೇಳೆಗೆ ಮುಕ್ತಾಯವಾಯಿತು. ಬಿಜೆಪಿಯ ನಿರ್ಮಲಾ ಸೀತಾರಾಮನ್ ಅವರಿಗೆ 46, ಕಾಂಗ್ರೆಸ್‌ನ ಜಯರಾಮ್ ರಮೇಶ್ ಅವರಿಗೆ 46, ಬಿಜೆಪಿ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಅವರಿಗೆ 33, ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ 30 ಮತ್ತು ಕಾಂಗ್ರೆಸ್ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರಿಗೆ 25 ಮತ ಪಡೆದಿದ್ದರು.

Key words: Rajya Sabha-elections-Nirmala Sitharaman- Jaggesh-Lehar Singh -Jairam Ramesh.