ಸಚಿವ ಉಮೇಶ್ ಕತ್ತಿ ನಿಧನಕ್ಕೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ, ಸಿದ್ಧರಾಮಯ್ಯ ಸಂತಾಪ.

ಬೆಂಗಳೂರು,ಸೆಪ್ಟಂಬರ್,7,2022(www.justkannada.in):   ಆಹಾರ ಸಚಿವ ಉಮೇಶ್ ಕತ್ತಿ  ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ಮೂಲಕ ಕಂಬನಿ ಮಿಡಿದ ಪ್ರಧಾನಿ ಮೋದಿ, ಸಚಿವ ಉಮೇಶ್ ಕತ್ತಿ ನಿಧನದಿಂದ ಬಹಳ ನೋವಾಗಿದೆ. ಕತ್ತಿ ಕರ್ನಾಟಕದ ಅಭಿವೃದ್ದಿಗೆ ಉತ್ತಮ ಕೊಡುಗೆ ನೀಡಿದ್ರು.  ಸಚಿವ ಕತ್ತಿ ಅನುಭವಿ ನಾಯಕರಾಗಿದ್ದರು. ಅವರ ಕುಟುಂಬಕ್ಕೆ ದುಃಖ ಭರಸುವ ಶಕ್ತಿ ನೀಡಲಿ ಎಂದಿದ್ದಾರೆ.

ಕತ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಅರಣ್ಯ ಸಚಿವ, ನನ್ನ ಆಪ್ತ ಸಹೋದ್ಯೋಗಿ ಉಮೇಶ್ ಅವರ ಅಕಾಲಿಕ ನಿಧನದಿಂದ  ತೀವ್ರ ದುಃಖಿತನಾಗಿದ್ದೇನೆ. ಅವರ ನಿಧನದಿಂದ ರಾಜ್ಯ ಓರ್ವ ನುರಿತ ಮುತ್ಸದ್ಧಿ,ಕ್ರಿಯಾಶೀಲ ಮುಖಂಡ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಮಾಜಿ ಸಿಎಂ ಸಿದ್ಧರಾಮಯ್ಯ ಸಹ ಸಂತಾಪ ಸೂಚಿಸಿದ್ದು,  ಉಮೇಶ್ ಕತ್ತಿ ನೇರವಾಗಿ ಮಾತನಾಡುವ ವ್ಯಕ್ತಿ ಉತ್ತಮ ಸ್ನೇಹಜೀವಿ.  ಕತ್ತಿ ನನ್ನ ಜತೆ ಬಹಳ ಆತ್ಮೀಯರಾಗಿದ್ದರು.ಅವರಿಗೆ ಸಾಯುವ ವಯಸ್ಸಾಗಿರಲಿಲ್ಲ ನಾನೂ ಕೂಡ ಬೆಳಗಾವಿಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ, ಉಮೇಶ್ ಕತ್ತಿ ನಿಧನ  ನನಗೆ ಆಘಾತವನ್ನುಂಟು ಮಾಡಿದೆ. ಉತ್ತರ ಕರ್ನಾಟಕ ಪ್ರತ್ಯೇಕ ಕರ್ನಾಟಕ ಬೇಕು ಅಂತಿದ್ರು ಯಾಕೆ ಅಂತ ಕೇಳಿದ್ರೆ. ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ ಅಂತಿದ್ದರು. ಅವರು ಬಹಳ ಸರಳ ಸಜ್ಜನಿಕೆ ಸ್ನೇಹಜೀವಿಯಾಗಿದ್ದರು.  ಇಂಥ ವ್ಯಕ್ತಿಯನ್ನ ಕಳೆದುಕೊಂಡ ನಮಗೆ ತುಂಬಾ ನೋವಾಗಿದೆ ಎಂದರು.

Key words: Prime Minister- Modi-CM Bommai-condole – Minister- Umesh Katthi- death