ಸ್ಟಾರ್ ನಟರಿಗೆ ಪೊಲೀಸರಿಂದ ನೋಟಿಸ್.

ಬೆಂಗಳೂರು ,ಜನವರಿ,8,2024(www.justkannada.in): ಅವಧಿ ಮೀರಿ ಪಬ್ ನಲ್ಲಿ ಪಾರ್ಟಿ ಮಾಡಿದ ಆರೋಪದ ಮೇಲೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ ನಾಲ್ವರಿಗೆ ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸರು ನೋಟಿಸ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ ದರ್ಶನ್, ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ವಿ.ಹರಿಕೃಷ್ಣ ಅವರಿಗೆ ಸುಬ್ರಮಣ್ಯ ನಗರ ಠಾಣೆ ಪೊಲೀಸರು ಜಾರಿ ಮಾಡಿದ್ದಾರೆ. ನಟರಾದ ಡಾಲಿ ಧನಂಜಯ್, ಚಿಕ್ಕಣ್ಣ, ನಿನಾಸಂ ಸತೀಶ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರಿಗೂ ನೋಟಿಸ್​ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾ ರಿಲೀಸ್ ಆಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾದ ಸಕ್ಸಸ್ ಹಿನ್ನೆಲೆ ಚಿತ್ರತಂಡ ಬೆಂಗಳೂರಿನ ಜೆಟ್ ಲಾಗ್ ಪಬ್ ಅವಧಿ ಮೀರಿ ಪಾರ್ಟಿ ನಡೆಸಿತ್ತು ಎನ್ನಲಾಗಿದೆ. ತಡರಾತ್ರಿ 1 ಗಂಟೆವರೆಗೆ ಯಾರೆಲ್ಲಾ ಪಾರ್ಟಿ ಮಾಡಿದ್ದಾರೋ ಅವರಿಗೆ ನೋಟಿಸ್ ನೀಡಲಾಗಿದೆ.

ಹೊಟೇಲ್, ಬಾರ್ ಅಂಡ್ ರೆಸ್ಟೋರೆಂಟ್ ಗೆ ಅನ್ವಯವಾಗುವ ನಿಯಮ ಪ್ರಕಾರ ಮಧ್ಯರಾತ್ರಿ 1 ಗಂಟೆಗೆ ಪಬ್ ಮುಚ್ಚಬೇಕು. ಒಂದು ಗಂಟೆ ಆಗುತ್ತಿದ್ದಂತೆ ಪಾರ್ಟಿ ಪೂರ್ಣಗೊಳಿಸಬೇಕಿತ್ತು, ಅವಧಿ ಮೀರಿ ಪಾರ್ಟಿ ನಡೆಸಿದ ಹಿನ್ನೆಲೆ ಪೊಲೀಸರು ಪಬ್ ಮಾಲೀಕನ  ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.  ಇದೀಗ ನಟರಿಗೂ ನೋಟಿಸ್ ನೀಡಿದ್ದಾರೆ ಎಂದು ಹೇಳಲಾಗಿದೆ.

Key words: Party-pub -Notice – police to- star actors