ಮೈಸೂರು,ಏಪ್ರಿಲ್,24,2026 (www.justkannada.in): ಗೃಹ ಸಚಿವರಾದ ಡಾ. ಜಿ ಪರಮೇಶ್ವರ ವಿರುದ್ಧ ರಾಜಕೀಯ ಸೇಡು ಅಥವಾ ಇನ್ಯಾವುದೋ ಕಾರಣದಿಂದ ದೂರು ದಾಖಲಿಸಿ ಏನೋ ಒಂದು ದೊಡ್ಡ ತಪ್ಪು ನಡೆದಿದೆ ಎಂಬಂತೆ ಬಿಂಬಿಸಲು ಹೊರಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತಡೆಯಾಜ್ಞೆ ಮೂಲಕ ದೂರುದಾರನಿಗೆ ಕಪಾಳ ಮೋಕ್ಷ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ಕಬಡ್ಡಿ ಆಟವೊಂದರಲ್ಲಿ ಕ್ರೀಡಾ ಸ್ಫೂರ್ತಿ ತುಂಬಲು ಡಾ.ಜಿ.ಪರಮೇಶ್ವರ್ ಅವರ ಬೆಟ್ಟಿಂಗ್ ಕುರಿತ ಹೇಳಿಕೆಯನ್ನು ರಾಜಕೀಯ ಹಗೆತನಕ್ಕೆ ಬಳಸಿಕೊಳ್ಳಲು, ಸಚಿವರು ಏನೋ ಮಹಾ ತಪ್ಪು ಮಾತನಾಡಿದ್ದಾರೆ ಎಂಬಂತೆ ಬಿಂಬಿಸುವ ಯತ್ನಕ್ಕೆ ಹೈಕೋರ್ಟ್ ತನ್ನ ಸ್ಪಷ್ಟ ಅಭಿಪ್ರಾಯಗಳಿಂದ ತಣ್ಣೀರೆರಚಿದೆ.
ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರು ಸೇರಿದಂತೆ ಗಣ್ಯ ವ್ಯಕ್ತಿಗಳ ಮೇಲೆ ಯಾವುದೋ ಹೇಳಿಕೆ, ಸಂದರ್ಭಗಳನ್ನು ಮುಂದು ಮಾಡಿಕೊಂಡು ಆಪಾದನೆ ಮಾಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಟ್ರೆಂಡ್ ಹೆಚ್ಚುತ್ತಲೇ ಇದೆ. ಅಲ್ಲದೆ ಸ್ವಹಿತ ಸಾಧಿಸಲು ಜನರ ದಿಕ್ಕು ತಪ್ಪಿಸುವ ಇಂತಹ ವ್ಯಕ್ತಿಗಳು ತಮ್ಮ ಇಂತಹ ಪ್ರಚಾರ ತಂತ್ರಗಳಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಸಹ ಹೆಚ್ಚುತ್ತಿದೆ. ಈ ಬೆಳವಣಿಗೆಗೆ ಸಮಾಜಕ್ಕೆ ಕಂಟಕವಾಗಿವೆ ಎಂದು ಹೆಚ್ ಎ ವೆಂಕಟೇಶ್ ಕಿಡಿಕಾರಿದ್ದಾರೆ.
ಬಹುತೇಕ ವೇಳೆ ಇಂತಹ ಕೆಲಸವಿಲ್ಲದ ದೂರುದಾರರಿಗೂ ಆ ಪ್ರಕರಣಗಳಿಗೂ ಯಾವುದೇ ಸಂಬಂಧವಿರುವುದಿಲ್ಲ. ಜತೆಗೆ ಯಾವುದೇ ಸಾರ್ವಜನಿಕ ಹಿತಾಸಕ್ತಿಯೂ ಇರುವುದಿಲ್ಲ. ಆದರೂ ಪ್ರಚಾರದ ಹುಚ್ಚಿಗೆ ಬಿದ್ದು ನೆಮ್ಮದಿಯಿಂದ ಬದುಕುವ ಜನರ ದಿಕ್ಕು ತಪ್ಪಿಸುತ್ತಾ ನಾಗರಿಕ ಸಮಾಜದ ಕಂಟಕವಾಗಿದ್ದಾರೆ. ಇಂಥವರ ಕೆಲಸ, ಕಾರ್ಯಗಳ ಮೇಲೆ ಸರ್ಕಾರ ಕಣ್ಣಿಡಬೇಕು. ಸಮಾಜದ ಸ್ವಾಸ್ಥ್ಯ ಕೆಡಿಸಲು ಯತ್ನಿಸುವವರ ವಿರುದ್ಧ ಬಿಗಿ ಕ್ರಮ ಕೈಗೊಳ್ಳಲು ಸರ್ಕಾರ ವಿಶೇಷ ಘಟಕವನ್ನು ಸ್ಥಾಪಿಸಬೇಕಿದೆ. ಪ್ರಸ್ತುತ ಇದು ಅತಿ ಜರೂರಾಗಿ ಆಗಬೇಕಿದೆ ಎಂದು ಸರ್ಕಾರಕ್ಕೆ ಹೆಚ್.ಎ ವೆಂಕಟೇಶ್ ಸಲಹೆ ನೀಡಿದ್ದಾರೆ.
Key words: High Court, stay, complainant, against, Parameshwar – H.A Venkatesh







