ಎಂಎಲ್ ಸಿ ಚುನಾವಣೆಗೆ ಮೂವರು ‘ಕೈ’ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ: ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ.

ಬೆಂಗಳೂರು, ಜೂನ್, 20,2023(www.justkannada.in):  ಜೂನ್ 30 ರಂದು ನಡೆಯುವ ವಿಧಾನ ಪರಿಷತ್ತಿನ ಚುನಾವಣೆಗೆ ಇಂದು ಕಾಂಗ್ರೆಸ್ ಪಕ್ಷದ  ಅಭ್ಯರ್ಥಿಗಳಾದ ಜಗದೀಶ್ ಶೆಟ್ಟರ್, ಎನ್.ಎಸ್.ಬೋಸರಾಜು, ತಿಪ್ಪಣ್ಣಪ್ಪ ಕಮಕನೂರು ನಾಮಪತ್ರ ಸಲ್ಲಿಸಿದರು. ವಿಧಾನಪರಿಷತ್ತಿನ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ,  ಇಂದು ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಪಕ್ಷದ ಈ ಮೂರು ಸದಸ್ಯರು ಚುನಾವಣೆಯಲ್ಲಿ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಇವರು ಚುನಾವಣೆಯಾದರೂ ಗೆಲ್ಲುತ್ತಾರೆ, ಆಗದಿದ್ದರೂ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೆಹಲಿ ಪ್ರವಾಸ: ರಾಷ್ಟ್ರಪತಿ ಹಾಗೂ ಕೇಂದ್ರ ಸಚಿವರೊಂದಿಗೆ ಸೌಜನ್ಯದ ಭೇಟಿ

ನಾಳೆ ದೆಹಲಿಯಲ್ಲಿ ರಾಷ್ಟ್ರಪತಿಗಳನ್ನು ಹಾಗೂ  ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ  ಮಾಡುತ್ತಿದ್ದು, ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಕೇಂದ್ರ ಆಹಾರ ಸಚಿವರನ್ನು ಭೇಟಿ ಮಾಡಿ ಅಕ್ಕಿ ನೀಡುವಂತೆ  ಮನವಿ ಮಾಡಲಿದ್ದಾರೆ ಎಂದರು.  ಮುಖ್ಯಮಂತ್ರಿಯಾದ ನಂತರ ಕೇಂದ್ರ ಸಚಿವರೊಂದಿಗೆ ಸೌಜನ್ಯದ ಭೇಟಿ ಮಾಡಲಿರುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.

ಅಕ್ಕಿ ಖರೀದಿಗೆ ಪ್ರಯತ್ನ:

ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ಛತ್ತೀಸಗಢ ರಾಜ್ಯದೊಂದಿಗೆ ಅಕ್ಕಿ ಖರೀದಿ ಬಗ್ಗೆ ಚರ್ಚಿಸಲಾಗಿದೆ. ರಾಜ್ಯಕ್ಕೆ 2,28,000 ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಬೇಕಾಗಿದೆ. ಛತ್ತೀಸಗಢದಿಂದ ಅಕ್ಕಿ ಖರೀದಿಸಿದರೆ ಸಾಗಾಣಿಕೆಯೂ ಸೇರಿ, ಎಫ್ ಸಿಐ ಗಿಂತ  ದರ ಹೆಚ್ಚಾಗುತ್ತದೆ. ತೆಲಂಗಾಣದಲ್ಲಿ ಅಕ್ಕಿ ದಾಸ್ತಾನು ಲಭ್ಯವಿಲ್ಲವೆಂದು ತಿಳಿಸಿದ್ದು, ಆಂಧ್ರಪ್ರದೇಶದೊಂದಿಗೆ ನಮ್ಮ ರಾಜ್ಯದ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ. ಭಾರತ ಸರ್ಕಾರದ ಮೂರು ಸಂಸ್ಥೆಗಳಾದ ಎನ್ ಸಿ ಸಿಎಫ್, ನಾಫೆಡ್ ಹಾಗೂ ಕೇಂದ್ರೀಯ ಭಂಡಾರಗಳಿಂದ ಅಕ್ಕಿ ಖರೀದಿಗೆ ದರಪಟ್ಟಿ ಕರೆಯಲಾಗಿದೆ.  ಅಕ್ಕಿ ಖರೀದಿ ಬಗ್ಗೆ ಎಫ್ ಸಿ ಐ ಗೆ ಜೂನ್ 9 ರಂದು ಪತ್ರ ಬರೆಯಲಾಗಿದ್ದು, ಎಫ್ ಸಿ ಐ ಅವರು ತಮ್ಮಲ್ಲಿ  7 ಲಕ್ಷ ಮೆಟ್ರಿ ಟನ್ ಅಕ್ಕಿ ದಾಸ್ತಾನು ಇದ್ದು, ರಾಜ್ಯಕ್ಕೆ ಸರಬರಾಜು ಮಾಡಲಾಗುವುದು ಎಂದು ಜೂನ್ 12 ರಂದು ತಿಳಿಸಿದ್ದಾರೆ.

ಬಡವರ ವಿರೋಧಿ  ಕ್ರಮ

ಎಫ್.ಸಿ.ಐ ಉಪ ವ್ಯವಸ್ಥಾಪಕರೊಂದಿಗೂ ಮಾತನಾಡಿದ್ದು, ಅವರೂ ಅಕ್ಕಿ ನೀಡುವುದಾಗಿ ಹೇಳಿದ್ದರು. ಇದಾದ ನಂತರ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಯವರು ಹಸ್ತಕ್ಷೇಪ ಮಾಡಿ ಜೂನ್ 13 ರಂದು  ಎಫ್.ಸಿ.ಐ ಅಧ್ಯಕ್ಷರು  ಹಾಗೂ ವ್ಯವಸ್ಥಾಪಕ ನಿರ್ದೇಶಕರು  ಪತ್ರ ಬರೆದು ರಾಜ್ಯಗಳಿಗೆ ಅಕ್ಕಿ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ನಂತರ ನಮಗೆ ಪತ್ರ ಬರೆದು ಅಕ್ಕಿ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದು ದ್ವೇಷದ ರಾಜಕಾರಣ, ಬಡವರ ವಿರೋಧಿ  ಕ್ರಮವಲ್ಲವೇ ಎಂದು ಸಿಎಂ ಸಿದ್ಧರಾಮಯ್ಯ ಪ್ರಶ್ನಿಸಿದರು.

ವಿಳಂಬವಾದರೂ ಅಕ್ಕಿ ಕೊಟ್ಟೇ ಕೊಡುತ್ತೇವೆ

ದ್ವೇಷದ ರಾಜಕಾರಣ ಮಾಡುವ ಇವರಿಗೆ ಮಾನವೀಯತೆ, ಇದೆಯೇ? ದ್ವೇಷದ  ರಾಜಕೀಯ ಮಾಡುತ್ತಾರಲ್ಲ ಎಂದು ಪ್ರಶ್ನಿಸಿದರು.  ಕೇಂದ್ರದ ಈ ನಡೆಯನ್ನು ಖಂಡಿಸಿ ನಮ್ಮ ಪಕ್ಷದ ವತಿಯಿಂದ ಎಲ್ಲೆಡೆ ಪ್ರತಿಭಟನೆ ಮಾಡಲಾಗಿದೆ. ದುರುದ್ದೇಶದಿಂದ ಈ. ಕೆಲಸ ಮಾಡಿದ್ದಾರೆ. ಹಣ ನೀಡಿ ಅಕ್ಕಿಯನ್ನು ಪಡೆಯುತ್ತೇವೆ.  ನಾವು ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಯಾವಾಗಲೂ ಹೇಳುತ್ತಾರೆ. ಇದೇ ಇವರ ಸಹಕಾರಿ ಒಕ್ಕೂಟ ವ್ಯವಸ್ಥೆಯೇ? ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರ  ಸರ್ವಾಧಿಕಾರಿಯಲ್ಲ. ಇದೊಂದು ಪ್ರಜಾಪ್ರಭುತ್ವದ ವ್ಯವಸ್ಥೆ, ಒಕ್ಕೂಟ ರಚನೆಯನ್ನು ಹೊಂದಿದ್ದೇವೆ.  ಕೇಂದ್ರ ಸರ್ಕಾರವೇ ಭತ್ತ ಬೆಳೆಯುತ್ತದೆಯೇ. ಎಲ್ಲೆಲ್ಲಿ ಭತ್ತ ಬೆಳೆಯುತ್ತಾರೋ ಅಲ್ಲಿಂದ ಅಕ್ಕಿಯನ್ನು ಪಡೆಯುತ್ತಾರೆ. ಮಾತೆತ್ತಿದರೆ ಆಹಾರ ಭದ್ರತಾ ಕಾಯ್ದೆ ಎನ್ನುವ ಕೇಂದ್ರ ಸರ್ಕಾರ, ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಯು.ಪಿ.ಎ ಸರ್ಕಾರದಲ್ಲಿ  ಮನ್ ಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ  ಎನ್ನುವುದನ್ನು ಮರೆಯುತ್ತಿದೆ ಎಂದರು. ಈ ಕಾಯ್ದೆ ಬದಿದ್ದರಿಂದ 5 ಕೆಜಿ ಅಕ್ಕಿ ಕೊಡುವುದು ಮುಂದುವರೆದಿದೆ.  ಅಕ್ಕಿ ಕೊಡಿ ಎಂದು ಕೇಳಿದ್ದೇವೆ.  ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದ್ದೇವೆ. ನಾವು ಕೊಟ್ಟೇ ಕೊಡುತ್ತೇವೆ. ಸ್ವಲ್ಪ ವಿಳಂಬವಾಗಬಹುದು ಅಷ್ಟೇ ಎಂದರು.

Key words: Nomination – three -Congress -candidates – MLC election