ಯಾರೇ ಏನೇ ಮಾಡಿದರೂ  ಟಿಪ್ಪು ಸುಲ್ತಾನ್ ಹೆಸರು ಕನ್ನಡ ನಾಡಿನಲ್ಲಿ ಅಜರಾಮರ- ಟಿಪ್ಪು ಹಾಡಿಹೊಗಳಿದ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್.

ಮೈಸೂರು,ನವೆಂಬರ್,10,2022(www.justkannada.in): ಟಿಪ್ಪು ಸುಲ್ತಾನ್ ಕನ್ನಡ ನಾಡಿನ ಛಲದಂಕ ಮಲ್ಲ. ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ಟಿಪ್ಪು ಸುಲ್ತಾನ್. ಯಾರೇ ಏನೇ ಮಾಡಿದರೂ ಟಿಪ್ಪು ಸುಲ್ತಾನ್ ಹೆಸರು ಕನ್ನಡ ನಾಡಿನಲ್ಲಿ ಅಜರಾಮರ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಹಾಡಿಹೊಗಳಿದರು.

ಮೈಸೂರಿನ ರಾಜೀವ್ ನಗರದಲ್ಲಿ ನಡೆದ ಟಿಪ್ಪು ಸುಲ್ತಾನ್ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್,  ಜಗತ್ತಿನಲ್ಲಿ ಶತ್ರುಗಳಿಗೆ ಮಂಡಿಯೂರದ ಜಗತ್ತಿನ ಏಕೈಕ  ನಾಯಕ ಟಿಪ್ಪು. ಯಾರೂ ಕೂಡ ಇತಿಹಾಸವನ್ನು ತಿರುಚುವ ಕೆಲಸ ಮಾಡಬಾರದು. ಕರ್ನಾಟಕದಲ್ಲಿ ಆರ್ಥಿಕ ಅಭಿವೃದ್ಧಿ ಮಾಡಿದ್ದು ಟಿಪ್ಪು. ಕನ್ನಂಬಾಡಿ ಕಟ್ಟೆಯ ಭೂಮಿ ಪೂಜೆ ಮಾಡಿದ್ದು ಟಿಪ್ಪು. ಯಾರೇ ಏನೇ ಮಾಡಿದರು  ಟಿಪ್ಪು ಸುಲ್ತಾನ್ ಹೆಸರು ಕನ್ನಡ ನಾಡಿನಲ್ಲಿ ಅಜರಾಮರ. ರೈಲಿನ ಹೆಸರು ಬದಲಾವಣೆ ಮಾಡಿದ ಕೂಡಲೇ ಅವರ ಹೆಸರಿಗೆ ಏನೂ ಚ್ಯುತಿ ಆಗಲ್ಲ ಎಂದು ಹೇಳಿದರು.

ಟಿಪ್ಪು ಸುಲ್ತಾನ್ ಆಡಳಿತ, ಧೈರ್ಯ ಶೌರ್ಯ ಯಾರು ಕೂಡ ಅಲ್ಲೆಗಳಿಯಲು ಸಾಧ್ಯವಿಲ್ಲ. ಟಿಪ್ಪು 80  ಮಂದಿ ಕೊಂದ 50 ಸಾವಿರ ಮಂದಿ ಮತಾಂತರ ಮಾಡಿದ ಅಂತಾ ಹೇಳುತ್ತಾರಲ್ಲ. ಅಂದು ಇದ್ದ ಜನಸಂಖ್ಯೆ ಎಷ್ಟಿತ್ತು ಹಾಗಾದರೆ.? ಶೃಂಗೇರಿ ಮಠಕ್ಕೂ ಟಿಪ್ಪು ಕೊಡುಗೆ ಅಪಾರ. ಸುಖಸುಮ್ಮನೆ ಕೆಲವರು ಮಾತಾಡುವುದು ಸರಿಯಲ್ಲ. ವಸ್ತ್ರ ಸಮ್ಮಿತೆಯನ್ನ ಜಾರಿ ಮಾಡಿದವನು ಟಿಪ್ಪು ಎಂದು ಗುಣಗಾನ ಮಾಡಿದರು.

ಟಿಪ್ಪುವನ್ನು ಟಿಪ್ಪು ಅಂತ ಕರೆಯಲು ಯಾವ ಪಕ್ಷವಾದರೇನು? ನಾನು ಯಾವ ಪಕ್ಷದಲ್ಲಿ ಇದ್ದಾಗಲೂ, ಟಿಪ್ಪು ಸ್ವಾಭಿಮಾನಿ ಕನ್ನಡಿಗ.  ಟಿಪ್ಪು ಸುಲ್ತಾನ್ ಮೈಸೂರು ಹುಲಿ.  ಜಾತಿ, ಧರ್ಮ, ಪಕ್ಷಗಳನ್ನು ಮೀರಿದ ವ್ಯಕ್ತಿತ್ವ ಅವರದ್ದು.  ಚರಿತ್ರೆಯನ್ನು ಯಾರೂ ಬದಲಿಸಲು ಸಾಧ್ಯವಿಲ್ಲ.  ಶೃಂಗೇರಿಯಲ್ಲಿ ಈಗಲೂ ಸಲಾಂ ಆರತಿ ನಡೆಯುತ್ತಿದೆ.  ನಂಜನಗೂಡು ಶ್ರೀಕಂಠೇಶ್ವರನಿಗೆ ಹಕೀಂ ನಂಜುಂಡ ಅಂತ ಹೆಸರಿಟ್ಟವರು ಯಾರು ? ಯಾರೋ ಏನೂ ಹೇಳುತ್ತಾರೆ ಅಂತ ಚರಿತ್ರೆ ಬದಲಾಗಿ ಬಿಡುವುದಿಲ್ಲ.

ಸಂಸದ ಪ್ರತಾಪ್ ಸಿಂಹ ಕೊಡಗಿನಲ್ಲಿ ಟಿಪ್ಪು 80 ಸಾವಿರ ಜನರ ಹತ್ಯಾಕಾಂಡ ನಡೆಸಿದವ ಅಂತಾ ಹೇಳಿದ್ದಾನೆ‌.  ಆಗ ಮೈಸೂರು ಸಾಮ್ರಾಜ್ಯದ ಜನಸಂಖ್ಯೆ ಎಷ್ಟಿತ್ತು ಅನ್ನುವ ಸಾಮಾನ್ಯ ಜ್ಞಾನ ಬೇಡವೇ ? ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅಲ್ಲ, ಅಡ್ನಾಡಿ ಕಾರ್ಯಪ್ಪ. ಅವನೇನು ಟಿಪ್ಪು ಬಗ್ಗೆ ಪುಸ್ತಕ ಬರೆಯೋದು ? ಟಿಪ್ಪು ಕಾಲದಲ್ಲಿ ಕಾರ್ಯಪ್ಪ ಹುಟ್ಟಿದ್ನಾ ? ಟಿಪ್ಪು ನಿಜ ಕನಸುಗಳು ನಾಟಕವನ್ನು ನಾನು ಖಂಡಿಸುತ್ತೇನೆ. ಎಂದು ವಿಶ್ವನಾಥ್ ಹೇಳಿದರು.

Key words: No matter – Tipu Sultan- name  – Kannada – BJP MLC- H. Vishwanath.