ಅಕ್ಟೋಬರ್ 16ರಿಂದ ಜೆಡಿಎಸ್ ಜನತಾ ಸಂಗಮ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು,ಅಕ್ಟೋಬರ್,4,2021(www.justkannada.in):  ಜೆಡಿಎಸ್ ಪಕ್ಷದ ಜನತಾ ಪರ್ವ 1.O ಕಾರ್ಯಾಗಾರದ ಎರಡನೇ ಹಂತವಾಗಿ ಜನತಾ ಸಂಗಮ ಇದೇ 16ರಿಂದ ರಾಜ್ಯಾದ್ಯಂತ ಆರಂಭವಾಗಲಿದೆ ಎಂದು  ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬಿಡದಿ ತೋಟದಲ್ಲಿ ನಡೆಯುತ್ತಿರುವ ಕಾರ್ಯಗಾರದ ನಡುವೆ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಇದು ಪ್ರತಿ ತಾಲೂಕಿನಲ್ಲಿ ಎಲ್ಲರ ಜೊತೆಗೂಡಿ ನಡೆಯುವ  ಕಾರ್ಯಕ್ರಮ. ಕಾರ್ಯಕರ್ತರನ್ನು ನೇರವಾಗಿ ಭೇಟಿಯಾಗುವ ಹಾಗೂ ತಳಹದಿಯಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶ ಇದಕ್ಕಿದೆ ಎಂದರು.

ಜನತಾ ಸಂಗಮದ ಮೂಲಕ ಪ್ರತಿ ಹಳ್ಳಿಗಳಿಗೆ ಭೇಟಿ ನೀಡುವ ತೀರ್ಮಾನ ಮಾಡಲಾಗಿದೆ. ಜತೆಗೆ, ಕಾರ್ಯಾಗಾರಕ್ಕೆ ಹಾಜರಾಗಿರುವ ಪ್ರತಿಯೊಬ್ಬರ ಮಾಹಿತಿಯನ್ನೂ ಕಚೇರಿಗೆ ತೆಗದುಕೊಳ್ಳಲಾಗುತ್ತದೆ. ಪ್ರತಿ ಅಂಶವನ್ನು ನಮ್ಮ ತಂಡಗಳು ಪರಿಶೀಲನೆ ಮಾಡುತ್ತಿವೆ ಎಂದು ಹೆಚ್.ಡಿಕೆ ತಿಳಿಸಿದರು.

ಪಕ್ಷದ ಕಚೇರಿ ಹಾಗೂ ಕಾರ್ಯಕರ್ತರ ನಡುವೆ ಯಾವುದೇ ಸಂವಹನ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಿದ್ದೇವೆ. ಆ ನಿಟ್ಟಿನಲ್ಲಿ ತಂತ್ರಜ್ಞಾನ ಬಳಸಿಕೊಂಡು ಉತ್ತಮ ವ್ಯವಸ್ಥೆ ರೂಪಿಸಲಾಗಿದೆ ಎಂದು ಅವರು ಹೇಳಿದರು.

ನಾಳೆ ಕ್ರಿಶ್ಚಿಯನ್ ಪ್ರತಿನಿಧಿಗಳ ಕಾರ್ಯಗಾರ:

ಇಂದು ಎಸ್ ಸಿ‌, ಎಸ್ ಟಿ ವಿಭಾಗದ ಕಾರ್ಯಗಾರ ನಡೆಯಿತು. ಚಿಂತಕ ಪ್ರೊ.ಮುಕುಂದ ರಾಜು ಅವರು ಪ್ರತಿಮೆಗಳನ್ನು ಉದ್ದೇಶಿಸಿ ಮಾತನಾಡಿದರು. ನಿನ್ನೆ ಮುಸ್ಲಿಂ ಬಾಂಧವರ ಜೊತೆ ಕಾರ್ಯಗಾರ ಮಾಡಲಾಗಿತ್ತು. ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಅವರು ಪ್ರಧಾನ ಭಾಷಣ ಮಾಡಿದ್ದರು. ನಾಳೆ  ಅಂತಿಮವಾಗಿ ಕ್ರಿಶ್ಚಿಯನ್ ಬಾಂಧವರ ಜೊತೆ ಕಾರ್ಯಗಾರ ಇದೆ ಎಂದು  ಹೆಚ್.ಡಿ ಕುಮಾರಸ್ವಾಮಿ ಮಾಹಿತಿ ನೀಡಿದರು.

Key words: JDS- Janata Sangam – October 16th– Former CM-HD Kumaraswamy