ಗಾರೆ ಕೆಲಸ ಮಾಡಿಕೊಂಡು ಓದಿದ ಮಹದೇವಸ್ವಾಮಿಗೆ 14 ಚಿನ್ನದ ಪದಕ.

ಮೈಸೂರು,ಮಾರ್ಚ್,22,2022(www.justkannada.in):  ಬದುಕು ನೂರು ಸವಾಲು ಕೊಟ್ಟರೂ ಧೃತಿಗೆಡದೆ ಗಾರೆ ಕೆಲಸ, ಪೇಟಿಂಗ್ ಮಾಡಿಕೊಂಡೆ 14 ಚಿನ್ನದ ಪದಕ ಹಾಗೂ 3 ನಗದು ಬಹುಮಾನವನ್ನು 102ನೇ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಈ ವಿದ್ಯಾರ್ಥಿ ಪಡೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ ದಿ.ಪುಟ್ಟಬಸವಯ್ಯ ಮತ್ತು ನಾಗಮ್ಮ ಅವರ ಪುತ್ರ, ಡಾ.ಬಿ.ಆರ್.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ವಿದ್ಯಾರ್ಥಿ ಪಿ. ಮಹದೇವಸ್ವಾಮಿ.

ಬಡತನದಲ್ಲಿ ಅರಳಿದ ಅಪರೂಪದ ಪ್ರತಿಭೆ. ತಂದೆ ನಿಧನರಾದ ನಂತರ ತಾಯಿ ಹಾಗೂ ಅಣ್ಣ ಕುಟುಂಬದ ಜವಾಬ್ದಾರಿ ಹೊತ್ತುಕೊಂಡರು. ಈ ಸಮಯದಲ್ಲಿ ಕಾಲೇಜಿಗೆ ಸೇರಿದ ಮಹದೇವಸ್ವಾಮಿ ರಜೆ ದಿನಗಳಲ್ಲಿ ಗಾರೆ ಕೆಲಸ, ಕೂಲಿ ಕೆಲಸ ಮಾಡುತ್ತಿದ್ದರು. ಅಲ್ಲದೆ, ಚಿತ್ರಕಲೆಯಲ್ಲೂ ಆಸಕ್ತಿ ಇತ್ತು. ಎಂಎ ಕನ್ನಡದಲ್ಲಿ ಇವರಿಗೆ 2200 ಅಂಕಗಳಿಗೆ 1963 ಅಂಕ ದೊರೆತಿದೆ. ಮಹದೇವಸ್ವಾಮಿ ಮಳವಳ್ಳಿಯ ಭಗವಾನ್ ಬುದ್ಧ ಬಿಇಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಓದುತ್ತಿದ್ದಾಗ ಮೊದಲ ‌ರ್ಯಾಂಕ್ ನೊಂದಿಗೆ 2 ಚಿನ್ನದ ಪದಕ, 2 ನಗದು ಬಹುಮಾನ ಪಡೆದಿದ್ದರು.

“ಓದುವಾಗಲೇ ನಾನೀಗ ಕೆ-ಸೆಟ್ ಪರೀಕ್ಷೆ ಪಾಸು ಮಾಡಿಕೊಂಡಿದ್ದೇನೆ. ಮುಂದೆ ಯುಪಿಎಸ್ಸಿ ಅಥವಾ ಕೆಪಿಎಸ್ಸಿ ಮಾಡುವ ಆಸೆ ಇದೆ. ಐಎಎಸ್ ಹಾಗೂ‌ ಕೆಎಎಸ್ ಗೆ ಉಚಿತ ತರಬೇತಿ ಸಿಕ್ಕರೆ ತುಂಬಾ ಅನುಕೂಲ ಆಗುತ್ತದೆ,’ ಎಂದು ಮಹದೇವಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.

Key words: mysore university- Gold Medal-student