ಮೈಸೂರು ವಿವಿ ಬಜೆಟ್ ಮಂಡನೆ,  ಅನುಮೋದನೆ

ಮೈಸೂರು,ಮಾರ್ಚ್,27,2026 (www.justkannada.in):   ಮೈಸೂರು ವಿಶ್ವ-ವಿದ್ಯಾಲಯದ 2026-27 ನೇ ಸಾಲಿನ ಬಜೆಟ್ ಮಂಡಿಸಿ ಅನುಮೋದನೆ ನೀಡಲಾಯಿತು.

ಕ್ರಾಫರ್ಡ್‌ ಭವನದಲ್ಲಿ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಅಧ್ಯಕ್ಷತೆಯಲ್ಲಿ  ನಡೆದ ಶಿಕ್ಷಣ ಮಂಡಳಿಯ ವಿಶೇಷ ಸಭೆಯಲ್ಲಿ ಪ್ರಭಾರ ಹಣಕಾಸು ಅಧಿಕಾರಿ ಪ್ರೊ.ಮಂಜುನಾಥ್  2026-27 ನೇ ಬಜೆಟ್ ಮಂಡಿಸಿದ್ದು ಬಜೆಟ್ ಗೆ ಅನುಮೋದನೆ ದೊರೆಯಿತು. ಈ ಬಾರಿಯ ಬಜೆಟ್ 71.45 ಕೋಟಿ ರೂ.  ಕೊರತೆ ಬಜೆಟ್‌ಗೆ ಅನುಮೋದನೆ ನೀಡಲಾಯಿತು. ‘అంದಾಜು 384.28 ಕೋಟಿ  ರೂ.ಆದಾಯ(ದತ್ತಿ ನಿಧಿ ಹೊರತುಪಡಿಸಿ) ನಿರೀಕ್ಷಿಸಲಾಗಿದೆ. 438 ಕೋಟಿ ರೂ. ವೆಚ್ಚವಾಗಲಿದೆ ಎಂದು ಬಜೆಟ್ ನಲ್ಲಿ ಅಂದಾಜಿಸಲಾಗಿದೆ.

‘ರಾಜ್ಯ ಸರ್ಕಾರದಿಂದ ಕಾಯಂ ಸಿಬ್ಬಂದಿ ವೇತನ ಹಾಗೂ ಪಿಂಚಣಿಗೆ  ₹ 222.48  ಕೋಟಿ ಮಂಜೂರಾಗಿದೆ. ಅಭಿವೃದ್ಧಿ ಅನುದಾನ  10 ಕೋಟಿ ರೂ., ಪರಿಶಿಷ್ಟ ಜಾತಿ ಹಾಗೂ ವರ್ಗದ ವಿದ್ಯಾರ್ಥಿಗಳಿಗೆ  6 ಕೋಟಿ ರೂ. ಅನುದಾನ ಮಂಜೂರಾತಿಯನ್ನು ರಾಜ್ಯ ಸರ್ಕಾರದಿಂದ ನಿರೀಕ್ಷಿಸಿ, ಒಟ್ಟು  238.57 ಕೋಟಿ ಆದಾಯವಾಗಿ ಪರಿಗಣಿಸಲಾಗಿದೆ.  ವಿವಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾಯಂ ಉದ್ಯೋಗಿಗಳ (ಬೋಧಕ-200 ಹಾಗೂ ಬೋಧಕೇತರ 400) ವೇತನಕ್ಕಾಗಿ  122.48 ಕೋಟಿ ರೂ. ಇದನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ 1,864 ಪಿಂಚಣಿ/ಕುಟುಂಬ ಪಿಂಚಣಿದಾರರು ಮಾಸಿಕ ಪಿಂಚಣಿ ಪಡೆಯುತ್ತಿದ್ದಾರೆ. 2026-27ನೇ ಸಾಲಿಗೆ ಪಿಂಚಣಿದಾರರ ಸಂಖ್ಯೆ 1,906 ಆಗಲಿದ್ದು, ಪ್ರಸ್ತುತ ಸಾಲಿನಲ್ಲಿ 42 ಉದ್ಯೋಗಿಗಳು (18 ಬೋಧಕರು, 24 ಬೋಧಕೇತರರು) ನಿವೃತ್ತರಾಗುತ್ತಿದ್ದಾರೆ. ಹೀಗಾಗಿ, ಪಿಂಚಣಿಗಾಗಿ 171.45 ಕೋಟಿ ನಿಗದಿಪಡಿಸಲಾಗಿದೆ. 2026-27ನೇ ಸಾಲಿನಲ್ಲಿ ವಿವಿಯಿಂದ ನಿವೃತ್ತರಾಗುವ ನೌಕರರ ಪಿಂಚಣಿಗಾಗಿ 171.45 ಕೋಟಿ ರೂ. ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸರ್ಕಾರವು  100 ಕೋಟಿ  ರೂ. ಬಿಡುಗಡೆ ಮಾಡಿದೆ. ಇದರಿಂದಾಗಿ ಪಿಂಚಣಿ ಸೌಲಭ್ಯಗಳಿಗಾಗಿ 71.45 ಕೋಟಿ ರೂ. ಕೊರತೆ ಎದುರಿಸುವಂತಾಗಿದೆ’ ಎಂದು ಪ್ರೊ.ಮಂಜುನಾಥ್  ಹೇಳಿದರು.

‘ಪ್ರವೇಶ, ನೋಂದಣಿ, ಸಂಯೋಜನೆ, ಪರೀಕ್ಷಾ ಚಟುವಟಿಕೆಗಳು ಮೊದಲಾದ . ವಿಶ್ವವಿದ್ಯಾಲಯದ ವಿವಿಧ ಅಸ್ತಿಗಳಿಂದ ಹಾಗೂ ಇತರ ಮೂಲಗಳಿಂದ ಒಟ್ಟು  108.75 ಕೋಟಿ ಆಂತರಿಕ ಆದಾಯ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಬಜೆಟ್ ಮಂಡನೆ ವೇಳೆ ಕುಲಸಚಿವರಾದ ಎಂ.ಕೆ ಸವಿತಾ ಹಾಗೂ ಪ್ರೊ.ನಾಗರಾಜ್ ಉಪಸ್ಥಿತರಿದ್ದರು.

‘ಯಾವುದೇ ವಿಭಾಗ, ಕೋರ್ಸ್ ಮುಚ್ಚಿಲ್ಲ, ಆರೋಪಗಳು ಸತ್ಯಕ್ಕೆ ದೂರವಾದವು- ಕುಲಪತಿ ಪ್ರೊ.ಎನ್.ಕೆ. ಲೋಕನಾಥ್

ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ,  ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಲವೇ ಕೆಲವು ವಿಭಾಗಗಳಿಗೆ ಹಲವು ವರ್ಷಗಳಿಂದಲೂ ಪ್ರವೇಶಾತಿ ಕಡಿಮೆ ಇದೆ. ಆದರೆ, ಯಾವುದೇ ಕೋರ್ಸ್ ಅಥವಾ ವಿಭಾಗವನ್ನು ಮುಚ್ಚಿಲ್ಲ. ಕೆಲವರು ಇಲ್ಲಸಲ್ಲದ ಹಾಗೂ ಮಾಹಿತಿ ಕೊರತೆಯಿಂದ ಆರೋಪಗಳನ್ನು ಮಾಡುತ್ತಿದ್ದಾರೆ. ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟಪಡಿಸಿದರು.

ಮೈಸೂರಿನ ಯುವರಾಜ ಕಾಲೇಜಿನ ಸ್ವಾಯತ್ತ ಸ್ಥಾನಮಾನ ಹಿಂಪಡೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಆ ಕಾಲೇಜಿನವರ ಕೋರಿಕೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಆ ಕಾಲೇಜಿನವರು ₹ 1.06 ಕೋಟಿ ಅನುದಾನಕ್ಕೆ ಮೂರು ವರ್ಷ ಗಳಾದರೂ ಬಳಕೆ ಪ್ರಮಾಣಪತ್ರ (ಯುಸಿ) ಸಲ್ಲಿಸಿಲ್ಲ. ಇದಕ್ಕೆ ಆಕ್ಷೇಪಣೆ ಇದೆ. ವಿಚಾರಣೆಯೂ ನಡೆಯಬೇಕಾಗಿದೆ. ಈ ನಡುವೆ, ಅಲ್ಲಿನ ಕ್ಲರ್ಕ್ ಹಾಗೂ ಎಸ್‌ಡಿಎ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2009ರಿಂದ 2025 ರವರೆಗೆ ಆ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ಇರಲಿಲ್ಲ. ನಾನು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದಾಗಿ ಯುಜಿಸಿಯೊಂದಿಗೆ ವ್ಯವಹರಿಸಿ ಸ್ಥಾನಮಾನ ಕೊಡಿಸಿದ್ದೆ. ಆರ್ಥಿಕ ಅಶಿಸ್ತಿನ ಕಾರಣದಿಂದ ಎಲ್ಲವೂ ಸಮಸ್ಯೆಯಾಗಿದೆ’ ಎಂದು ತಿಳಿಸಿದರು.

Key words: Mysore University, budget, approved