Sunday, August 23, 2026

BDA Apartments

Home Front Page 2024ರ ಅಂತ್ಯಕ್ಕೆ ಮೈಸೂರು-ಕುಶಾಲನಗರ ಹೆದ್ದಾರಿ ಕಾಮಗಾರಿ ಪೂರ್ಣ- ಸಂಸದ ಪ್ರತಾಪ್ ಸಿಂಹ

2024ರ ಅಂತ್ಯಕ್ಕೆ ಮೈಸೂರು-ಕುಶಾಲನಗರ ಹೆದ್ದಾರಿ ಕಾಮಗಾರಿ ಪೂರ್ಣ- ಸಂಸದ ಪ್ರತಾಪ್ ಸಿಂಹ

ಮೈಸೂರು,ಜುಲೈ,17,2023(www.justkannada.in): ಮೈಸೂರು-ಕುಶಾಲನಗರದ ನಡುವೆ 4,130 ಕೋಟಿ ವೆಚ್ಚದಲ್ಲಿ 93 ಕಿಲೋ ಮೀಟರ್ NH-275 ಹೆದ್ದಾರಿ ಕಾಮಗಾರಿಯನ್ನು ಕೈಗೊಂಡಿದ್ದು ಪೂರ್ಣಕಾಮಗಾರಿಯು 2024ರ ಡಿಸೆಂಬರ್‌ ಅಂತ್ಯಕ್ಕೆ ಮುಗಿಯಲಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮೈಸೂರು-ಕುಶಾಲನಗರ ಹೆದ್ದಾರಿ ವಿಭಾಗದ NH-275 ಯೋಜನೆಗೆ ಸಂಬoಧಿಸಿದ ಸಭೆಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಹೆದ್ದಾರಿ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಕೈಗೆತ್ತಿಕೊಂಡಿದ್ದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ವಿವಿಧ ರೀತಿಯ ಪ್ಯಾಕೇಜ್‌ ಗಳಾಗಿ ವಿಂಗಡಿಸಲಾಗಿದೆ. ಶ್ರೀರಂಗಪಟ್ಟಣದ ಪಾಲಹಳ್ಳಿಯ ಪಿ.ಅಗ್ರಹಾರದಿಂದ ಹುಣಸೂರಿನವೆರೆಗೆ ಪ್ಯಾಕೇಜ್-4 ಮತ್ತು 5, ಹುಣಸೂರಿನಿಂದ- ಪಿರಿಯಾಪಟ್ಟಣದವರೆಗೆ ಪ್ಯಾಕೇಜ್-3, ಪಿರಿಯಾಪಟ್ಟಣದಿಂದ ಕುಶಾಲನಗರದವರೆಗೆ ಪ್ಯಾಕೇಜ್- 2 ಎಂದು ವಿಭಾಗಿಸಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಕಾವೇರಿ ನೀರಾವರಿ ನಿಗಮ, ರೈಲ್ವೆ ಮತ್ತು ಚೆಸ್ಕಾಂ ಅಧಿಕಾರಿಗಳಿಗೆ ಹೆದ್ದಾರಿಯ ಬ್ಲೂಪ್ರಿಂಟ್ ನೀಡಿ ಜುಲೈ 30 ರೊಳಗೆ ಅನುಮತಿಯನ್ನು ಪಡೆದು ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.

ಹೆದ್ದಾರಿ ನಿರ್ಮಾಣಕ್ಕೆ ಸಂಬoಧಿಸಿದಂತೆ ಹುಣಸೂರು ಪಿರಿಯಾಪಟ್ಟಣ ಮತ್ತು ಕುಶಾಲನಗರ ತಾಲೂಕಿನ ತಹಸಿಲ್ದಾರ್‌ ಗಳಿಗೆ ನಿರ್ದೇಶನವನ್ನು ನೀಡಲಾಗಿದೆ. ಹೆದ್ದಾರಿ ನಿರ್ಮಾಣವಾಗುವ ಜಮೀನು ದುರಸ್ತಿ ಮಾಡುವುದರಿಂದ ಪ್ರಸ್ತುತ ಬೆಳೆದಿರುವ ಬೆಳೆಗಳಿಗೆ ಪರಿಹಾರವನ್ನು ನೀಡಲಾಗಿದ್ದು ಮತ್ತೊಂದು ಅವಧಿಯ ಬೆಳೆಗಳಿಗೆ ಯಾವುದೇ ರೀತಿ ಪರಿಹಾರ ದೊರೆಯುವುದಿಲ್ಲ ಎಂದು ಮುಂಚಿತವಾಗಿ ತಿಳಿಸಲಾಗಿದೆ. ಒಟ್ಟು 600 ಕೋಟಿಯಲ್ಲಿ 300 ಕೋಟಿ ರೂಗಳನ್ನು ಬಿಡುಗಡೆ ಮಾಡಲಾಗಿದೆ. ಈ ತಿಂಗಳ ಅಂತ್ಯದೊಳಗೆ ಉಳಿದ 300 ಕೋಟಿ ಪರಿಹಾರದ ಹಣವನ್ನು ನೀಡಲಾಗುವುದು ಒಟ್ಟು 1200 ಎಕರೆ ಭೂಮಿಯನ್ನು ಹೆದ್ದಾರಿ ನಿರ್ಮಾಣಕ್ಕೆ ರೈತರಿಂದ ಪಡೆಯಲಾಗಿದ್ದು ಅವರಿಗೆ ಪರಿಹಾರವನ್ನು ಈ ತಿಂಗಳ 30 ರೊಳಗೆ ನೀಡಲಾಗುವುದು ಎಂದು ತಿಳಿಸಿದರು.

ಕಾಮಗಾರಿ ಆರಂಭಿಸಲು ಬೇಕಿರುವ ಪೂರ್ವ ತಯಾರಿಯು ನಡೆದಿದೆ. ಕ್ರಷರ್, ಕ್ವಾರೆಗಳ ಕಾರ್ಯರಂಭವಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆಯಲ್ಲಿದೇವೆ, ಕಾಮಗಾರಿ ಪೂರ್ಣಗೊಳಿಸಲು 24 ತಿಂಗಳು ಅವಕಾಶವಿದ್ದು, 2024ರ ದಸರಾ ಮುಂಚಿತವಾಗಿ ಪೂರ್ಣಕಾಮಗಾರಿ ಪೂರ್ಣಗೊಳಿಸುವ ಗುರಿಯಿದೆ. ಕಾಮಗಾರಿಯನ್ನು ಸವಾಲಾಗಿ ಸ್ಪೀಕರಿಸಿ 12 ರಿಂದ 14 ತಿಂಗಳ ಅವಧಿಯಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ 2024 ಡಿಸೆಂಬರ್‌ ಗೆ ಮೈಸೂರು ಕುಶಾಲನಗರ ಹೆದ್ದಾರಿ ಲೋಕಾರ್ಪಣೆ ಗುರಿಯನ್ನು ಹೊಂದಿದ್ದೇವೆ. ಮೈಸೂರು-ಕುಶಾಲನಗರ ಹೆದ್ದಾರಿ ನಿರ್ಮಾಣದಿಂದಾಗಿ ಮೈಸೂರು ನಗರದಲ್ಲಿನ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುವುದು. ಮಡಿಕೇರಿ ಮಾರ್ಗವಾಗಿ ಕೇರಳ ಕಡೆ ಸಂಚರಿಸುವ ವಾಹನಗಳಿಗೆ ಉಪಯುಕ್ತವಾಗುವುದು ಎಂದರು.

ಮೈಸೂರು ಹೊರವರ್ತುಲ ರಸ್ತೆಗೆ ಸಂಬoಧಿಸಿದoತೆ ಮಾತನಾಡಿದ ಪ್ರತಾಪ್ ಸಿಂಹ, ರಸ್ತೆ ಅಭಿವೃದ್ಧಿಗೆ 10 ಕೋಟಿ ಬಿಡುಗಡೆಯಾಗಿದ್ದು ಬ್ಲೂ ಪ್ರಿಂಟ್ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ನಂಜನಗೂಡು, ಊಟಿ, ಟಿ ನರಸೀಪುರ, ಕ್ಯಾಲಿಕೇಟ್, ಚಾಮರಾಜನಗರ, ಬಂಡೀಪುರ, ನಾಗರಹೊಳೆ ಮಾರ್ಗವಾಗಿ ಚಲಿಸುವವವರು ಕಳಸವಾಡಿಯಿಂದ ರಿಂಗ್‌ ರೋಡ್ ಮೂಲಕ ಸಂಚರಿಸಲು ಅವಕಾಶವನ್ನು ಕಲ್ಪಿಸಲಾಗುವುದು. ಅರಮನೆ ನಗರಿ ಮೈಸೂರನ್ನು ಸುರಕ್ಷವಾಗಿ ಕಾಯ್ದುಕೊಳುವುದು, ನಗರದಲ್ಲಿ ಹೆಚ್ಚಿನ ವಾಹನ ದಟ್ಟಣೆಯಾಗದಂತೆ ನೋಡಿಕೊಳ್ಳುವುದು ನಮ್ಮ ನಿಲುವಾಗಿದೆ ಎಂದು ತಿಳಿಸಿದರು.

ಮಡಿಕೇರಿ ಮೂಲಕ ಮಂಗಳೂರಿಗೆ ಸಂಚರಿಸಲು ಅವಕಾಶವಾಗುವಂತೆ ಬೆಂಗಳೂರು- ಮಂಗಳೂರು ಹೆದ್ದಾರಿಗಿಂತ ಉತ್ತಮವಾದ ರಸ್ತೆಯನ್ನು ನಿರ್ಮಿಸಲಾಗುವುದು, ಹುಣಸೂರು ಪಿರಿಯಾಪಟ್ಟಣದಲ್ಲಿ ಕೈಗಾರಿಕೆಗಳು ನಿರ್ಮಾಣವಾಗುವ ಸಾಧ್ಯತೆಯಿದ್ದು ಯುವಕರಿಗೆ ಉದ್ಯೋಗ ಕಲ್ಪಿಸುವ ಯೋಜನೆಯು ಇದಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಹೆದ್ದಾರಿ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

Key words: Mysore-Kushalanagar- highway -work – complete – end of 2024- MP Pratap Simha