ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ: ಒಂಬತ್ತು ಜೀವ ಉಳಿಸಿದ ಮೈಸೂರಿನ ಮದನ್ ಕುಮಾರ್

ಮೈಸೂರು, ಅಕ್ಟೋಬರ್ 9, 2022 (www.justkannada.in): ರಸ್ತೆ ಅಪಘಾತದಲ್ಲಿ  ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮರೆಯಲಾಗಿದೆ.

ಮೈಸೂರಿನ ಮುನೇಶ್ವರ ನಗರದ ನಿವಾಸಿ ಮದನ್ ಕುಮಾರ್(೨೫) ರಸ್ತೆ ಅಪಘಾತದಲ್ಲಿ  ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿತ್ತು. ಅವರ ಕುಟುಂಬದವರ ಒಪ್ಪಿಗೆ ಮೇರೆಗೆ ಪಡೆದ ಹೃದಯ, ಶ್ವಾಸಕೋಶಗಳು, ೨ ಮೂತ್ರಪಿಂಡಗಳು, ಯಕೃತ್ತು ಮತ್ತು ಕಾರ್ನಿಯಾಗಳಿಂದ 9 ಮಂದಿಯ ಜೀವವನ್ನು ಆಸ್ಪತ್ರೆಯ ವೈದ್ಯರು ಉಳಿಸಿದ್ದಾರೆ.

ಅ.5 ರಂದು ಸಿದ್ದಾರ್ಥ ಬಡಾವಣೆಯಲ್ಲಿ  ರಸ್ತೆ ಅಪಘಾತದಿಂದ ಗಾಯಗೊಂಡು ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದ ಮದನ್ ಕುಮಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮದನ್ ಕುಮಾರ್‌ನನ್ನು ಎರಡು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಮೆದುಳು ನಿಷ್ಕ್ರಿಯವಾಗಿರುವುದನ್ನು ಗಮನಿಸಿದ ಆಸ್ಪತ್ರೆ ವೈದ್ಯರು, ಬ್ರೈನ್ ಡೆಡ್ ಎಂದು ಘೋಷಿಸಿದ್ದರು.

ಅಂಗಾಂಗದ ದಾನದ ಬಗ್ಗೆ ಮದನ್ ಪತ್ನಿಗೆ ಮಾಹಿತಿ ನೀಡಿ ಅವರ ಒಪ್ಪಿಗೆ ನೀಡಿದ ಬಳಿಕ ಒಂಬತ್ತು ರೋಗಿಗಳಿಗೆ ಅಂಗಾಂಗವನ್ನು ರವಾನಿಸಿ ಅಳವಡಿಸಲಾಗಿದೆ.