ಶಾಸಕ ಎಂ.ಪಿ ರೇಣುಕಾಚಾರ್ಯಗೆ ಸಿಡಿ ಭೀತಿ…? : ಸಿಡಿ ಪ್ರಸಾರಕ್ಕೆ ಮಧ್ಯಂತರ ತಡೆ.

 

ಬೆಂಗಳೂರು,ಜುಲೈ,30,2021(www.justkannada.in): ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯಗೆ ಸಿಡಿ ಭೀತಿ  ಉಂಟಾಗಿದ್ದು, ಸಿಡಿ ಪ್ರಸಾರ ಮಾಡದಂತೆ ಮಧ್ಯಂತರ ತಡೆ ತಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಯಾರೋ ಪುಣ್ಯಾತ್ಮ ಬ್ಲಾಕ್ ಮೇಲ್ ಮಾಡ್ತಿದ್ದಾರೆ. ಹೀಗಾಗಿ ನಾನು ತಡೆಯಾಜ್ಞೆ ತರುವುದಕ್ಕೆ ನೋಡುತ್ತಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನನ್ನು ಯಾರೂ ಬ್ಲ್ಯಾಕ್ ಮೇಲ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಯಾವುದನ್ನ ಬೇಕಾದರೂ ಎಡಿಟ್ ಮಾಡಬಹುದು. ಯಾರ ಮುಖ ಯಾವುದಕ್ಕೂ ಜೋಡಿಸಬಹುದು. ಯಾರದ್ದೋ ಕಾಲು, ಯಾರದ್ದೋ ದೇಹ ಗ್ರಾಫಿಕ್ಸ್ ಮಾಡಿಸಬಹುದು. ರೇಣುಕಾಚಾರ್ಯ ವಿಡಿಯೋ ಇದೆ ಎಂದು ಯಾರೋ ಪುಣ್ಯಾತ್ಮ ಬ್ಲಾಕ್ ಮೇಲೆ ಮಾಡಿದ್ದಾರೆ. ನನ್ನನ್ನು ಯಾರೂ ಸಹ ಬ್ಲ್ಯಾಕ್​​ಮೇಲ್ ಮಾಡಲು ಸಾಧ್ಯವಿಲ್ಲ. ಬ್ಲ್ಯಾಕ್​​ಮೇಲ್ ಖೆಡ್ಡಾಗೆ ಬೀಳಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ಎಂ.ಪಿ ರೇಣುಕಾಚಾರ್ಯ, ಯತ್ನಾಳ್​ಗೆ ಯಡಿಯೂರಪ್ಪ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಯಡಿಯೂರಪ್ಪ ಸಾಮರ್ಥ್ಯ, ನಾಯಕತ್ವ, ಹೋರಾಟ ದೊಡ್ಡದು. ನೂರಾರು ಪಾದಯಾತ್ರೆ, ಸಾವಿರಾರು ಹೋರಾಟ ಮಾಡಿದ್ದಾರೆ. ಜೆಡಿಎಸ್​ಗೆ ಹೋದಾಗ ಯತ್ನಾಳ್​ ರ ಹಿಂದುತ್ವ ಎಲ್ಲಿ ಹೋಗಿತ್ತು? ಜೆಡಿಎಸ್ ​ನಲ್ಲಿ ಇದ್ದಾಗ ಯತ್ನಾಳ್​ ಅಲ್ಪಸಂಖ್ಯಾತರ ಓಲೈಕೆ ಮಾಡಿಲ್ವಾ..? ಬಿಎಸ್ ವೈ ಮೋಜು ಮಸ್ತಿಗಾಗಿ ಅಧಿಕಾರ ಮಾಡಲಿಲ್ಲ. ಸಂಘಪರಿವಾರದವರು ಬಿಎಸ್ ವೈರನ್ನ ಹೊಗಳಿದ್ಧಾರೆ ಎಂದು ಟಾಂಗ್ ನೀಡಿದರು.

Key words: MP- Renukacharya-fears- CD