ಮೈಸೂರು,ಮೇ,7,2026 (www.justkannada.in): ಪೋಕ್ಸೋ ಕೇಸ್ ಎದುರಿಸುತ್ತಿರುವವರಿಗೆ ಅಭಿಮಾನೋತ್ಸವ ನಡೆಸುತ್ತಿರುವುದು ಮತ್ತು ಈ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವರೇ ಬರುತ್ತಿರುವುದು ಹಾಸ್ಯಸ್ಪದ ಮತ್ತು ದುರಂತ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಕುಟುಕಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಹೆಚ್.ವಿಶ್ವನಾಥ್, ಫೋಕ್ಸೋ ಪ್ರಕರಣದಲ್ಲಿ ಸಿಲುಕಿರುವವರಿಗೆ ಅಭಿನಂದನಾ ಸಮಾರಂಭ ಮಾಡುತ್ತಿದ್ದಾರೆ. ಇದಕ್ಕೆ ಕೇಂದ್ರ ಗೃಹ ಸಚಿವರೇ ಬರುತ್ತಿದ್ದಾರೆ. ಇದು ದುರಂತ. ಅಪ್ರಾಪ್ತ ಹೆಣ್ಣುಮಕ್ಕಳ ರಕ್ಷಣೆಗಾಗಿ ಜಾರಿ ಮಾಡಿರುವ ಪೋಕ್ಸೋ ಕೇಸ್. ದೇಶದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವ ಕಾನೂನನ್ನೇ ವೀಕ್ ಮಾಡಲು ಹೊರಟಿದ್ದಾರೆ. ಇದು ಇಡೀ ಆಡಳಿತ ವ್ಯವಸ್ಥೆಗೆ ಮಸಿ ಬಳಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ನಾನು ಲಾಯರ್ ಓದಿದ್ದೇನೆ ಅಂತಾರೆ. ಫೊಕ್ಸೋ ಕೇಸ್ ಅರ್ಥವಾಗದ ನೀವು ಯಾವ ಸೀಮೆಯ ಲಾಯರ್? ಎಂದು ಕಿಡಿಕಾರಿದರು.
ರಾಮಚಂದ್ರ ರಾವ್ ಅಮಾನತು ರಿವೋಕ್ ಆಗಬೇಕಾದರೇ ಕಿಕ್ ಬ್ಯಾಕ್ ಎಷ್ಟಿರಬೇಕು?
ಕಚೇರಿಯಲ್ಲೇ ಮಹಿಳೆ ಜೊತೆ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಬಳಿಕ ಅಮಾನತಾಗಿದ್ದ ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ಅಮಾನತು ವಾಪಸ್ ಪಡೆದ ಸರ್ಕಾರದ ವಿರುದ್ದ ಹರಿಹಾಯ್ದ ಹೆಚ್.ವಿಶ್ವನಾಥ್, ರಾಜ್ಯದ ಮಾನ ಕಳೆದ ರಾಮಚಂದ್ರರಾವ್ ಅಮಾನತು ರಿವೋಕ್ ಮಾಡಿದ್ದಾರೆ. ರಿವೋಕ್ ಆಗಬೇಕಾದರೇ ಕಿಕ್ ಬ್ಯಾಕ್ ಎಷ್ಟಿರಬೇಕು ಅಲ್ಲವೇ..? ಹಣದ ವ್ಯವಹಾರವಿಲ್ಲದೇ ಇದು ಅಷ್ಟು ಸುಲಭವಾಗಿ ಆಗಿರುವುದಿಲ್ಲ .ಈ ರಾಜ್ಯವನ್ನ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಾ? ನಮಗೆ ರಕ್ಷಣೆ ಕೊಡಬೇಕಾದ ಇಲಾಖೆಯಲ್ಲೇ ಹೀಗಾದರೇ ಹೇಗೆ.? ಈಗಾಗಲೇ ಶಿಕ್ಷಣ ಆರೋಗ್ಯ ಇಲಾಖೆ ಹಾಳಾಗಿದೆ . ನೀವು ಯಾವ ಸೀಮೆಯ ಅಧಿಕಾರ ನಡೆಸುತ್ತಿದ್ದೀರಾ ಎಂದು ವಾಗ್ದಾಳಿ ನಡೆಸಿದರು.
ಇದೆಲ್ಲವನ್ನೂ ಯುವಕರು ಯೋಚಿಸಬೇಕು. ತಮಿಳುನಾಡಿನಲ್ಲಿ ಯುವಕರು ಗೆದ್ದು ಇಡೀ ರಾಜಕೀಯ ವ್ಯವಸ್ಥೆಯಲ್ಲಿ ಅಚ್ಚರಿ ಮೂಡಿಸಿದ್ದಾರೆ. ಕರ್ನಾಟಕದಲ್ಲೂ ಕೂಡ ಯುವಕರು ಎದ್ದೇಳಬೇಕು. ಕರ್ನಾಟಕದಲ್ಲೂ ಈ ಬದಲಾವಣೆ ತರಬೇಕು ಎಂದು ನುಡಿದರು.
Key words: ceremony, POCSO cases, Mysore, MLC, H Vishwanath







