ಬೆಂಗಳೂರು,ಜೂನ್.27,2026 (www.justkannada.in): ಯಲಹಂಕದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಹಮ್ಮಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಮಧ್ಯೆ ವಾಗ್ಯುದ್ದ ಜೋರಾಗಿದೆ.
ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಮತ್ತು ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನಡುವೆ ತಿಕ್ಕಾಟ ತಾರಕಕ್ಕೇರಿದೆ. ಸಂಸದ ಡಾ.ಕೆ.ಸುಧಾಕರ್ ಯಲಹಂಕದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಹಮ್ಮಿಕೊಂಡಿದ್ದಕ್ಕೆ ಕಿಡಿಕಾರಿದ್ದ ಶಾಸಕ ಎಸ್.ಆರ್ ವಿಶ್ವನಾಥ್ ಅವರಿಗೆ ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ.
ವೈಯಕ್ತಿಕ ಪ್ರತಿಷ್ಟೆಗೋಸ್ಕರ ನಾಡಪ್ರಭು ಕೆಂಪೇಗೌಡರ ಜಯಂತಿ ಬೇರೆ ಕಡೆ ಮಾಡುತ್ತಿದ್ದಾರೆ. ಅವರು ಚಿಕ್ಕಬಳ್ಲಾಪುರದಲ್ಲಿ ಸ್ಪರ್ಧಿಸಿದರೇ ಸ್ವಾಗತ. ನಾನು ಯಲಹಂಕದಲ್ಲೇ ನಿಂತು ಅವರನ್ನ ಸೋಲಿಸುತ್ತೇನೆ ಯಲಹಂಕದಲ್ಲಿ ಯಾರು ಗೆಲ್ಲುತ್ತಾರೆ ನೋಡೋಣ ಎಂದು ಹರಿಹಾಯ್ದಿದ್ದಾರೆ.
ನಿನ್ನೆ ಸುದ್ದಿಗೋಷ್ಠೀ ನಡೆಸಿದ್ದ ಶಾಸಕ ಎಸ್.ಆರ್.ವಿಶ್ವನಾಥ್, 2008ರಿಂದ ನಾನು ಯಲಹಂಕ ಶಾಸಕನಾಗಿದ್ದೇನೆ. ಅಂದಿನಿಂದ ಪ್ರತಿ ವರ್ಷವೂ ಎಲ್ಲರನ್ನೂ ಸೇರಿಸಿಕೊಂಡು ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಆಚರಿಸುತ್ತಿದ್ದೇನೆ. ಆದರೆ ಈಗ ನಮ್ಮ ಪಕ್ಷದ ಸಂಸದರೇ ಆದ ಡಾ.ಕೆ.ಸುಧಾಕರ್ ನಮ್ಮನ್ನು ಹೊರಗಿಟ್ಟು ಕೆಂಪೇಗೌಡ ಅವರ ಜಯಂತಿ ಮಾಡುತ್ತಿದ್ದಾರೆ. ಒಂದೇ ಪಕ್ಷದಲ್ಲಿ ಇದ್ದರೂ ಈ ಕಾರ್ಯಕ್ರಮ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ನನ್ನ ವಿಷಯಕ್ಕೆ ಬಂದರೆ ಸುಧಾಕರ್ ಅವರ ಬುಡಕ್ಕೆ ಕೈ ಹಾಕುವೆ. ಚಿಕ್ಕಬಳ್ಳಾಪುರ ಕ್ಷೇತ್ರದ ಜನರು ಒಪ್ಪಿಕೊಂಡು ನನಗೆ ಅನುಮತಿ ಕೊಟ್ಟರೆ ನಾನೇ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬಂದು ಚುನಾವಣೆಗೆ ನಿಲ್ಲುವೆ ಎಂದು ವಾಗ್ದಾಳಿ ನಡೆಸಿದ್ದರು.
Key words: Kempegowda Jayanthi, MLA, SR Vishwanath, MP .K.Sudhakar






