ನಂಜನಗೂಡು ಜನತೆ ಪರ ಸರ್ಕಾರ ಇದೆ: ಸಚಿವ ಸೋಮಶೇಖರ್ ಭರವಸೆ

ಮೈಸೂರು, ಏಪ್ರಿಲ್ 29, 2020 (www.justkannada.in): ಮೈಸೂರು ಜಿಲ್ಲೆಯಲ್ಲೇ ಅತಿಹೆಚ್ಚು ಕೊರೋನಾ ಪ್ರಕರಣ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಜನತೆಯ ಆರೋಗ್ಯದ ದೃಷ್ಟಿಯಿಂದ ಮಾನ್ಯ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ವೈಯುಕ್ತಿಕವಾಗಿ 20 ಸಾವಿರ ಮಾಸ್ಕ್ ಗಳನ್ನು ವಿತರಣೆ ಮಾಡಿದರು.

ನಂಜನಗೂಡಿನ ಮಿನಿ ವಿಧಾನಸೌಧದಲ್ಲಿ ಟಾಸ್ಕ್ ಫೋರ್ಸ್ ಅಧಿಕಾರಿಗಳ ಜೊತೆ ಸಭೆ ನಡೆದ ನಂತರ ಅಲ್ಲಿನ ಸ್ಥಳೀಯ ತಾಲೂಕು ಆಡಳಿತಕ್ಕೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರ ಮೂಲಕ 20 ಸಾವಿರ ಮಾಸ್ಕ್ ಗಳನ್ನು ಸಚಿವರು ಹಸ್ತಾಂತರಿಸಿದರು.
ಈ ವೇಳೆ ಶಾಸಕರಾದ ಹರ್ಷವರ್ಧನ್ ಇದ್ದರು.

ಈ ವೇಳೆ ಮಾತನಾಡಿದ ಸಚಿವರು, ಕೊರೋನಾ ರೋಗಕ್ಕೆ ಇನ್ನೂ ಮದ್ದು ಕಂಡುಹಿಡಿಯಲಾಗಿಲ್ಲ. ಆದರೆ, ಜನತೆ ಜಾಗ್ರತೆಯಿಂದ ಇದ್ದರೆ ಯಾವುದೇ ಸಮಸ್ಯೆ ಆಗದು. ಇದಕ್ಕೆ ಬಹುಮುಖ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವ್ಯಕ್ತಿಗಳ ಜೊತೆ ಮಾತನಾಡವಾಗ ಇಲ್ಲವೇ ಸಂಚರಿಸುವಾಗ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಕೈಗಳನ್ನು ಆಗಾಗ ಸ್ಯಾನಿಟೈಸರ್ ನಿಂದ ಶುಚಿಗೊಳಿಸಿಕೊಳ್ಳುವುದು ಇಲ್ಲವೇ ಸೋಪಿನಿಂದ ತೊಳೆದುಕೊಳ್ಳಬೇಕು ಎಂದು ಸಚಿವರು ಜನತೆಗೆ ಕರೆಕೊಟ್ಟರು.

ನಂಜನಗೂಡು ಜನತೆ ಯಾವುದೇ ಕಾರಣಕ್ಕೂ ಭಯ ಬೀಳುವುದು ಬೇಡ. ನಾನು ಈ ಹಿಂದೆಯೇ ಹೇಳಿದಂತೆ ಈ ಕ್ಷೇತ್ರದ ಜನತೆಯ ಪರ ಸರ್ಕಾರ, ಜಿಲ್ಲಾಡಳಿತ ಇದ್ದು, ಸಹಾಯಕ್ಕೆ ಬದ್ಧರಾಗಿದ್ದೇವೆ ಎಂದು ಸಚಿವರು ತಿಳಿಸಿದರು.

ಈಗಾಗಲೇ ನಂಜನಗೂಡು ಕ್ಷೇತ್ರದಲ್ಲಿ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದ್ದು, ಈಗ ಹೊಸ ಪ್ರಕರಣಗಳೂ ಪತ್ತೆಯಾಗುತ್ತಿಲ್ಲ. ಇದಕ್ಕೆ ಜಿಲ್ಲಾಧಿಕಾರಿಗಳು ಮತ್ತವರ ತಂಡದ ಶ್ರಮ ಶ್ಲಾಘನೀಯ. ನಾನು ಅಧಿಕಾರಿಗಳಂತೆ 24X7 ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಸಂದರ್ಭದಲ್ಲಿ ಶಾಸಕರು ನನ್ನನ್ನು ಸಂಪರ್ಕಿಸಬಹುದು ಎಂದು ಸಚಿವರು ಇದೇ ವೇಳೆ ಹೇಳಿದರು.