ನಮ್ಮ ಹಿಂದೆ ಓಡಾಡಿದವರೆಲ್ಲ ಮಂತ್ರಿಯಾಗಿದ್ದಾರೆ : ನಮ್ಮ ಮುಂದೆ ಧಿಮಾಕು ತೋರಿಸಿಕೊಂಡು ಓಡಾಡುತ್ತಾರೆ- ಶಾಸಕ ಬಸವರಾಜ ರಾಯರೆಡ್ಡಿ.

ಕೊಪ್ಪಳ,ಆಗಸ್ಟ್,2,2023(www.justkannada.in): ಸಚಿವ ಸ್ಥಾನ ಸಿಗದಿದ್ದಕ್ಕೆ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ನಮ್ಮ ಹಿಂದೆ ಓಡಾಡಿದವರೆಲ್ಲ ಮಂತ್ರಿಯಾಗಿದ್ದಾರೆ. ಅವರಪ್ಪಂದಿರ ಜೊತೆ ನಾನು ಕೆಲಸ‌ ಮಾಡಿದವನು. ಇವರು ನಮ್ಮ ಮುಂದೆ ಧಿಮಾಕು ತೋರಿಸಿಕೊಂಡು ಓಡಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ ಜನಸಂರ್ಪಕ ಸಭೆಯಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ, ನೀವು ದುಃಖ ಪಡುವ ಅಗತ್ಯವಿಲ್ಲ. ಒಮ್ಮೊಮ್ಮೆ ಮಂತ್ರಿಯಾಗಲು ಸಾಧ್ಯವಾಗುವುದಿಲ್ಲ. ಅದಕ್ಕೆ ಹಣೆಬರಹ ಬೇಕು ಎಂದರು.

ನಮ್ಮ ಸಿದ್ದರಾಮಯ್ಯ ಅವರನ್ನು ನೋಡಿ, ಕಾಂಗ್ರೆಸ್​​ಗೆ ಬಂದು ಎರಡು ಬಾರಿ ಮುಖ್ಯಮಂತ್ರಿ ಆದರು. ಕಾಂಗ್ರೆಸ್​​ನ ಹಳೇ ಮಂದಿ ಈಗ ಏನು ಹೇಳುತ್ತಿರಬಹುದು? ಇವೆಲ್ಲಾ ಮನುಷ್ಯನ ಅದೃಷ್ಟ. ನಾನು ಹೆಚ್.ಡಿ ದೇವೆಗೌಡರ ಕ್ಯಾಬಿನೆಟ್ ​​​ನಲ್ಲಿ ಸಚಿವ ಆಗಿದ್ದೆ. ಈ ಕುಮಾರಸ್ವಾಮಿ ನನ್ನ ಪಕ್ಕ ನಿಲ್ಲಲು ಹೆದರುತ್ತಿದ್ದರು. ಏನ್ ಮಾಡುವುದು, ಅವರ ಹಣೆಬರಹದಲ್ಲಿ ಬರೆದಿತ್ತು. ಪಾಪ ಎಲ್ ​ಕೆ ಅಡ್ವಾಣಿ ಅವರು ಬಿಜೆಪಿ ಕಟ್ಟಿಕಟ್ಟಿದರು. ಆದರೆ ನರೇಂದ್ರ ಮೋದಿ ಬಂದು ಪ್ರಧಾನಿಯಾದರು ಎಂದು ಬಸವರಾಜ ರಾಯರೆಡ್ಡಿ ಟೀಕಿಸಿದರು.

Key words: minister-post- MLA -Basavaraja Rayareddy