ಬೆಂಗಳೂರು,ಜುಲೈ,25,2026 (www.justkannada.in): ಕಾವೇರಿ ನೀರಿನ ವಿಚಾರ ಮೇಕೆದಾಟು ನಿರ್ಮಾಣ ಸೌಹಾರ್ದ ಮಾತುಕತೆಗಾಗಿ ಆಗಸ್ಟ್ 3 ರಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಅವರು ಕರ್ನಾಟಕಕ್ಕೆ ಆಗಮಿಸುತ್ತಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕೆಲ ಸಲಹೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಕುರುಬೂರು ಶಾಂತ ಕುಮಾರ್, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮತ್ತು ಅವರ ತಮಿಳುನಾಡು ನಿಯೋಗವು ಆಗಸ್ಟ್ 3ರಂದು ಕರ್ನಾಟಕಕ್ಕೆ ಸೌಹಾರ್ದಯುತ ಮಾತುಕತೆಗೆ ಆಗಮಿಸುತ್ತಿರುವುದು ಸ್ವಾಗತಾರ್ಹ. ದಶಕಗಳ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಘರ್ಷದ ಹಾದಿಗಿಂತ ಸೌಹಾರ್ದಯುತ ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳುವುದು ಉಭಯ ರಾಜ್ಯಗಳ ಹಿತದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ. ಈ ಐತಿಹಾಸಿಕ ಭೇಟಿಯ ಸಂದರ್ಭದಲ್ಲಿ, ಚರ್ಚೆಯು ಯಶಸ್ವಿಯಾಗಲು ಹಾಗೂ ಎರಡೂ ರಾಜ್ಯಗಳ ರೈತರು ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಯಲು ಕೆಲ ಸಲಹೆ ನೀಡಲು ಬಯಸುತ್ತೇನೆ ಎಂದಿದ್ದಾರೆ.
ಕುರುಬೂರು ಶಾಂತಕುಮಾರ್ ಅವರ ಪ್ರಮುಖ ಸಲಹೆಗಳು ಮತ್ತು ಮನವಿ ಅಂಶಗಳು ಹೀಗಿವೆ..
ನೈಜ ಪರಿಸ್ಥಿತಿಯ ಪರಾಮರ್ಶೆ ಮತ್ತು ಅಭಾವದ ಹಂಚಿಕೆ (Distress Sharing Formula).
ಮಳೆಯ ಅಭಾವ ಉಂಟಾಗುವ ವರ್ಷಗಳಲ್ಲಿ ಕಾವೇರಿ ಜಲಾಶಯಗಳಲ್ಲಿನ ನೀರಿನ ನೈಜ ಸಂಗ್ರಹಣೆಯನ್ನು ಆಧರಿಸಿ, ವೈಜ್ಞಾನಿಕ ಹಾಗೂ ನ್ಯಾಯಸಮ್ಮತ ‘ಅಭಾವ ಹಂಚಿಕೆ ಸೂತ್ರ’ವನ್ನು ರೂಪಿಸಲು ಒತ್ತು ನೀಡಬೇಕು.
ಕುಡಿಯುವ ನೀರಿನ ಅಗತ್ಯತೆಗೆ ಆದ್ಯತೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳ ಕುಡಿಯುವ ನೀರಿನ ಭದ್ರತೆ ಮತ್ತು ತಮಿಳುನಾಡಿನ ಕಾವೇರಿ ಅಚ್ಚುಕಟ್ಟು ಪ್ರದೇಶದ ಕುಡಿಯುವ ನೀರಿನ ಅಗತ್ಯತೆಗಳನ್ನು ರಾಜಕೀಯದಿಂದ ಹೊರತಾಗಿ ಮೊದಲ ಆದ್ಯತೆಯಾಗಿ ಪರಿಗಣಿಸಬೇಕು.
ಜಂಟಿ ತಾಂತ್ರಿಕ ಸಮಿತಿ ರಚನೆ.
ಉಭಯ ರಾಜ್ಯಗಳ ನೀರಾವರಿ ತಜ್ಞರು, ಹವಾಮಾನ ತಜ್ಞರು ಕಾನೂನು ಪರಾಣಿತರು ಮತ್ತು ಅಧಿಕಾರಿಗಳನ್ನೊಳಗೊಂಡ ಸಕ್ರಿಯ ‘ಜಂಟಿ ತಾಂತ್ರಿಕ ಸಮಿತಿ’ಯನ್ನು ರಚಿಸಿ, ಉಪಗ್ರಹ ಆಧಾರಿತ ಮಾಹಿತಿ ಹಾಗೂ ಜಲಾಶಯಗಳ ನೈಜ ಸ್ಥಿತಿಗತಿಯನ್ನು ಆಧರಿಸಿ ನಿರ್ಧಾರ ಕೈಗೊಳ್ಳುವ ವ್ಯವಸ್ಥೆ ಜಾರಿಯಾಗಬೇಕು.
ಕಳೆದ ವರ್ಷ ಹೆಚ್ಚು ಮಳೆ ಬಂದಾಗ ಸುಮಾರು 250 ಟಿಎಂಸಿ ನೀರು ಸಮುದ್ರ ಹರಿದಿದೆ . ಈ ವರ್ಷ ಬರಗಾಲ ಬಂದಿದೆ ಮಳೆ ಕಡಿಮೆಯಾಗಿದೆ ಇಂತಹ ಸಂದರ್ಭದಲ್ಲಿ ಸಮುದ್ರಕ್ಕೆ ಹರಿದು ಹೋಗುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಮೇಕೆದಾಟು ಯೋಜನೆ ಕುರಿತು ಸೌಹಾರ್ದ ಮಾತುಕತೆ ಅವಶ್ಯಕ.
ಮೇಕೆದಾಟು ಸಮತೋಲನ ಜಲಾಶಯ ಯೋಜನೆಯು ಮಳೆಯ ಅಭಾವದ ಸಂದರ್ಭದಲ್ಲಿ ತಮಿಳುನಾಡಿಗೂ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿಕೊಳ್ಳಲು ನಿಯಂತ್ರಿತವಾಗಿ ಹರಿಸಲು ಸಹಕಾರಿಯಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟು, ಯೋಜನೆಯ ಅನುಷ್ಠಾನಕ್ಕೆ ಸಕಾರಾತ್ಮಕ ಬೆಂಬಲ ಪಡೆಯುವುದು.
ರೈತರ ಹಿತರಕ್ಷಣೆ ಮತ್ತು ಬೆಳೆ ಪದ್ಧತಿ:
ಎರಡೂ ರಾಜ್ಯಗಳಲ್ಲಿ ಲಭ್ಯವಿರುವ ನೀರಿಗೆ ತಕ್ಕಂತೆ ಕಡಿಮೆ ನೀರು ಬಳಸುವ ಆಧುನಿಕ ಕೃಷಿ ಪದ್ಧತಿ ಹಾಗೂ ಕೃಷಿ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡಲು ಜಂಟಿ ಯೋಜನೆಗಳನ್ನು ರೂಪಿಸುವುದು.
”ಕಾವೇರಿ ಜೀವನದಿಯು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳನ್ನು ಬೆಸೆಯುವ ಸೌಹಾರ್ದದ ಸಂಕೇತವಾಗಬೇಕು. ಕೋರ್ಟ್-ಕಚೇರಿಗಳ ಸುದೀರ್ಘ ವ್ಯಾಜ್ಯಗಳಿಗಿಂತ, ಎರಡು ರಾಜ್ಯಗಳ ನಾಯಕರು ಪರಸ್ಪರ ಗೌರವ ಮತ್ತು ಸೌಹಾರ್ದತೆಯಿಂದ ಕೈಗೊಳ್ಳುವ ನಿರ್ಧಾರಗಳು ಕೋಟಿಗಟ್ಟಲೆ ರೈತರ ಮತ್ತು ನಾಗರಿಕರ ಜೀವನದಲ್ಲಿ ನೆಮ್ಮದಿ ತರಬಲ್ಲವು.” ಎಂಬುದನ್ನು ಗಂಭೀರವಾಗಿ ಅರಿತುಕೊಂಡು ಆಗಸ್ಟ್ 3ರ ಸೌಹಾರ್ದ ಸಭೆಯು ಕೇವಲ ಔಪಚಾರಿಕ ಭೇಟಿಯಾಗದೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಹೊಸ ಪರಸ್ಪರ ಸಹಕಾರದ ಅಧ್ಯಾಯಕ್ಕೆ ಮುನ್ನುಡಿಯಾಗಲಿ ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
Key words: Meeting, Cauvery dispute, Kuruburu Shanthakumar, suggestion, Tamil Nadu, CM






