ಮೈಸೂರಿನಲ್ಲಿ ಮ್ಯಾನ್ ಹೋಲ್ ಒಡೆದು ಅವಾಂತರ: ಕೊಳಚೆ ನೀರಿನಿಂದ ಸಾರ್ವಜನಿಕರಿಗೆ ಕಿರಿಕಿರಿ.

ಮೈಸೂರು,ನವೆಂಬರ್,7,2023(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನ ಜಲದರ್ಶಿನಿ ಪ್ರವಾಸಿ ಮಂದಿರ ಬಳಿ ಮ್ಯಾನ್ ಹೋಲ್ ಒಡೆದು ಅವಾಂತರ ಸೃಷ್ಠಿಯಾಗಿದ್ದು ಕೊಳಚೆ ನೀರಿನಿಂದಾಗಿ ಸಾರ್ವಜನಿಕರು ಸಂಚರಿಸಲು ಕಿರಿಕಿರಿ ಉಂಟಾಗಿದೆ.

ಮೈಸೂರು ಹುಣಸೂರು ಮುಖ್ಯ ರಸ್ತೆಯ ಜಲದರ್ಶಿನಿ ಪ್ರವಾಸಿ ಮಂದಿರ ಬಳಿ ಮ್ಯಾನ್ ಹೋಲ್ ಒಡೆದು ಮಲ ಮಿಶ್ರಿತ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಡಿ.ಸಿ ನಿವಾಸದ ಕೂಗಳತೆ ದೂರದಲ್ಲಿ ಈ ದುಸ್ಥಿತಿ ಉಂಟಾಗಿದೆ.

ರಸ್ತೆಯಲ್ಲಿ ಸಂಚರಿಸುತ್ತಿರುವ ದ್ವಿ ಚಕ್ರ ವಾಹನ ಸವಾರರಿಗೆ ಭಾರಿ ವಾಹನಗಳು ಕೊಳಚೆ ನೀರು ಸಿಂಪಡಣೆ ಮಾಡುತ್ತಿವೆ. ದೊಡ್ಡ ದೊಡ್ಡ ವಾಹನಗಳ ಪಕ್ಕದಲ್ಲಿ ದ್ವಿಚಕ್ರ ವಾಹನಗಳು ಸಂಚರಿಸಿದರೆ ದ್ವಿಚಕ್ರ ವಾಹನ ಸವಾರರ ಮೈಗೆಲ್ಲ ಕೊಳ್ಳಚೆ ನೀರಿನ ಪ್ರೋಕ್ಷಣೆಯಾಗುತ್ತಿದೆ.

ಸಿ ಎಫ್ ಟಿ ಆರ್ ಐ ವಸತಿ ಗೃಹಗಳ ಕೊಳಚೆ ನೀರು ಮುಖ್ಯ ರಸ್ತೆಗೆ ಹರಿದು ಬರುತ್ತಿದ್ದು, ಮಳೆ ಬಂದಾಗ ಪದೆ ಪದೆ ಈ ಸಮಸ್ಯೆ ಮರುಕಳಿಸುತ್ತಿದ್ದು, ಪಾಲಿಕೆ ಸಿಬ್ಬಂದಿಗಳ ನಿರ್ಲಕ್ಷ್ಯ, ಪಾಲಿಕೆ ಅಧಿಕಾರಿಗಳು ಕಣ್ಣಿದ್ದು ಕುರುಡಾಗಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಲಿ ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

Key words: Manhole -burst -Mysore- public – dirty -water.