ಲೋಕಸಭೆ ಚುನಾವಣೆ ಮಂಡ್ಯಕ್ಕೆ ಸೀಮಿತವಲ್ಲ: ವರಿಷ್ಠರು ಹೇಳಿದ ಕಡೆ ಪ್ರಚಾರ- ಸುಮಲತಾ ಅಂಬರೀಶ್.

ಬೆಂಗಳೂರು,ಏಪ್ರಿಲ್, 5,2024 (www.justkannada.in): ಲೋಕಸಭಾ ಚುನಾವಣೆ ಕೇವಲ ಮಂಡ್ಯ ಕ್ಷೇತ್ರದಲ್ಲಿ ಮಾತ್ರ ನಡೆಯುತ್ತಿಲ್ಲ. ಪಕ್ಷದ ವರಿಷ್ಠರು  ಸೂಚಿಸಿದ ಎಲ್ಲಾ ಕಡೆಗಳಲ್ಲಿ ಪ್ರಚಾರ ಮಾಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಸುಮಲತಾ ಅಂಬರೀಶ್, ಲೋಕಸಭಾ ಚುನಾವಣೆ ಕೇವಲ ಮಂಡ್ಯಕ್ಕೆ ಸೀಮಿತವಲ್ಲ. ಪಕ್ಷದ ವರಿಷ್ಠರು ಯಾವುದೇ ಕ್ಷೇತ್ರದಲ್ಲಿ ಪ್ರಚಾರ ಮಾಡುವಂತೆ ಹೇಳಿದರೂ ಅದನ್ನು ಮಾಡುತ್ತೇನೆ, ಬರೀ ಮಂಡ್ಯ ಮಾತ್ರವಲ್ಲ ಎಂದರು.

ನನಗೆ ನನ್ನ ಭವಿಷ್ಯಕ್ಕಿಂತ ನನ್ನ ಮಂಡ್ಯ ಜಿಲ್ಲೆ ನಮ್ಮ ರಾಜ್ಯ ನಮ್ಮ ದೇಶದ ಭವಿಷ್ಯ ಮುಖ್ಯವಾಗಿದೆ.ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಗಳನ್ನು ಮೆಚ್ಚಿಕೊಂಡು ಇಂದು ನಾನು ಬಿಜೆಪಿ ಪಕ್ಷಕ್ಕೆ ಸೇರುತ್ತಿದ್ದೇನೆ. ಮೋದಿ ನನಗೆ ಸ್ಪೂರ್ತಿ. ಮೈಸೂರಿನಲ್ಲಿ ಮೋದಿ ನನ್ನ ಪರವಾಗಿ ಮತ ಕೇಳಿದ್ದನ್ನ ಮರೆಯಲ್ಲ ಎಂದರು.

ಮಂಡ್ಯ ಜಿಲ್ಲೆಯ ಬೆಂಬಲಿಗರೇ ನನ್ನ ಹೈಕಮಂಡ್. ನನಗೆ ಕಾರ್ಯಕರ್ತರ ಆಶೀರ್ವಾದ ಇರುತ್ತದೆ. ಮೈಶುಗರ್ ಫ್ಯಾಕ್ಟರಿ ಪೂರ್ಣ ಕ್ರೆಡಿಟ್ ಬಿಜೆಪಿಯವರಿಗೆ ಸಲ್ಲುತ್ತೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು.

Key words: Mandya, campaign, Sumalata Ambarish