ಮೇಲ್ಮನೆ ಚುನಾವಣೆ; ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದ ಉಪನ್ಯಾಸಕ ಸಂಘಗಳು..

ಬೆಂಗಳೂರು,ಅಕ್ಟೋಬರ್,13,2020(www.justkannada.in): ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ ಗೆ ನಡೆಯುತ್ತಿರು ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಉಪನ್ಯಾಸಕರ ಸಂಘಗಳ ಪದಾಧಿಕಾರಿಗಳು ಒಟ್ಟಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.jk-logo-justkannada-logo

 ಬೆಂಗಳೂರಿನಲ್ಲಿ ಮಂಗಳವಾರ ಉನ್ನತ ಶಿಕ್ಷಣ ಖಾತೆ ಸಚಿವ ಹಾಗೂ ಡಿಸಿಎಂ ಅಶ್ವಥ್ ನಾರಾಯಣ್ ಅವರನ್ನ ಭೇಟಿಯಾದ ವಿವಿಧ ಸಂಘಗಳ ಪ್ರತಿನಿಧಿಗಳು, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಚಿದಾನಂದಗೌಡ, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶಿಲ್ ನಮೋಶಿ, ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಎಸ್.ವಿ.ಸಂಕನೂರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಪುಟ್ಟಣ್ಣ ಅವರುಗಳು ಬಿಜೆಪಿ ಅಭ್ಯರ್ಥಿಗಳಾಗಿ ಕಣದಲ್ಲಿದ್ದು ಇವರೆಲ್ಲರಿಗೂ ಬೆಂಬಲ ನೀಡುವುದಾಗಿ ಉಪನ್ಯಾಸಕರ ಸಂಘಗಳ ಪ್ರತಿನಿಧಿಗಳೆಲ್ಲರೂ ಉಪ ಮುಖ್ಯಮಂತ್ರಿಗೆ ಭರವಸೆ ನೀಡಿದರು.

ಸುಧಾರಣೆಗಳ ಮಾಹಿತಿ ವಿನಿಮಯ:

ಕಳೆದ ಒಂದು ವರ್ಷದಿಂದ ಶಿಕ್ಷಕ ಸಮುದಾಯಕ್ಕೆ ಸರಕಾರ ಮಾಡಿರುವ ಕೆಲಸಗಳು ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಸುಧಾರಣೆಗಳನ್ನು ಗಮನದಲ್ಲಿಟ್ಟುಕೊಂಡು ಬೆಂಬಲ ನೀಡುವ ನಿರ್ಧಾರವನ್ನು ಕೈಗೊಂಡಿದ್ದೇವೆ. ಜತೆಗೆ, ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸರಕಾರ ನಡೆಸುತ್ತಿರುವ ಎಲ್ಲ ಪ್ರಯತ್ನಗಳು ನಮಗೆ ಇಷ್ಟವಾಗಿವೆ. ಡಿಸಿಎಂ ಕೂಡ ಉಪನ್ಯಾಸಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ನಾವೆಲ್ಲರೂ ನಿರ್ಧರಿಸಿರುವುದಾಗಿ ಅವರು ಹೇಳಿದರು.

ಇದಕ್ಕೆ ಪೂರಕವಾಗಿ, ಒಂದು ವರ್ಷದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಜಾರಿಗೆ ತಂದಿರುವ ಎಲ್ಲ ಸುಧಾರಣೆಗಳ ಸಮಗ್ರ ಮಾಹಿತಿಯನ್ನು ಉಪ ಮುಖ್ಯಮಂತ್ರಿಗಳು ಎಲ್ಲ ಶಿಕ್ಷಕರ ಪ್ರತಿನಿಧಿಗಳ ಜತೆ ಹಂಚಿಕೊಂಡರು. ಆ ಪೈಕಿ, ಬಾಕಿ ವೇತನ ಪಾವತಿ, ಹೊಸ ವೇತನ ಆಯೋಗದ ಶಿಫಾರಸುಗಳ ಜಾರಿ, ವರ್ಗಾವಣೆಯಲ್ಲಿ ಪಾರದರ್ಶಕತೆ; ಅದಕ್ಕಾಗಿ ಹೊಸ ನೀತಿ ಜಾರಿ ಮುಂತಾದ ಅಂಶಗಳ ಬಗ್ಗೆ ವಿವರಣೆ ನೀಡಿದರು.

ಇವೆಲ್ಲ ಕ್ರಮಗಳ ಹಿನ್ನೆಲೆಯಲ್ಲಿ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಶಿಕ್ಷಕರು, “ಕಳೆದ ಒಂದು ವರ್ಷದಿಂದ ಶಿಕ್ಷಣ ಕ್ಷೇತ್ರವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ರಾಜ್ಯಕ್ಕೆ ಇದರಿಂದ ತುಂಬಾ ಒಳ್ಳೆಯದಾಗುತ್ತದೆ. ಎಸ್ಸೆಸೆಲ್ಸಿ, ಪಿಯುಸಿ, ಸಿಇಟಿ ಮತ್ತು ಪದವಿ ಪರೀಕ್ಷೆಗಳನ್ನು ಕೋವಿಡ್ ನಡುವೆಯೇ ಸಮರ್ಥವಾಗಿ ನಡೆಸಿದ್ದು ಉತ್ತಮ ಕೆಲಸ. ಇದರಿಂದ ಪೋಷಕರು- ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋಗವಾಗಿದೆ. ಅವರ ಭವಿಷ್ಯಕ್ಕೆ ಧಕ್ಕೆ ಉಂಟಾಗುವುದು ತಪ್ಪಿದೆ. ಹೀಗಾಗಿ ನಾವೇ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದಿದ್ದೆವು. ಕೋವಿಡ್ ಕಾರಣದಿಂದ ಆ ಕಾರ್ಯಕ್ರಮವನ್ನು ನಡೆಸಲಾಗಲಿಲ್ಲ” ಎಂದು ಶಿಕ್ಷಕರು ಡಿಸಿಎಂ ಅವರಿಗೆ ತಿಳಿಸಿದರು.

ಶಿಕ್ಷಣಕ್ಕೆ ಹೆಚ್ಚು ಒತ್ತು:

ಎಲ್ಲ ಹಂತಗಳ ಶಿಕ್ಷಣಕ್ಕೆ ಅಗ್ರಆದ್ಯತೆ ನೀಡಬೇಕು ಎಂಬುದು ಸರಕಾರ ಬದ್ಧತೆ. ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಈಗಾಗಲೇ ಆಗಿರುವ ಎಲ್ಲ ಸುಧಾರಣಾ ಕ್ರಮಗಳು ಕಣ್ಣಿಗೆ ಕಾಣುತ್ತಿವೆ. ಇನ್ನು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದರೆ ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆಯ ಸ್ವರೂಪವೇ ಬದಲಾಗಿಬಿಡುತ್ತದೆ. ಇಡೀ ದೇಶದಲ್ಲಿ ಈ ನೀತಿಯನ್ನು ಮೊದಲು ಜಾರಿ ಮಾಡಿದ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ. ಈ ದಿಕ್ಕಿನಲ್ಲಿ ಸರಕಾರ ಕಾರ್ಯಪಡೆಯನ್ನು ರಚಿಸಿ ಗಂಬೀರವಾಗಿ ಕೆಲಸ ಮಾಡುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ್ ಹೇಳಿದರು.

ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಬಿ.ಜಿ. ಭಾಸ್ಕರ್, ಸರಕಾರಿ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಟಿ.ಎಂ. ಮಂಜುನಾಥ್, ರಾಜ್ಯ ಸರಕಾರಿ ಪರಿಶಿಷ್ಟ ಜಾತಿ-ವರ್ಗದ ಶಿಕ್ಷಕರ ಸಂಘದ ಅಧ್ಯಕ್ಷ ವೈ.ರಮೇಶ್, ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಮುರಳೀಧರ್ ಮುಂತಾದವರು ಉಪ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಮುಖರು. ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ, ಎಬಿವಿಪಿ ವಲಯ ಪ್ರಭಾರಿ ಸ್ವಾಮಿ ಮಳ್ಳಾಪುರ ಮತ್ತಿತರರು ಇದ್ದರು.

Key words: Lecturers’ Unions –announcing- support -BJP candidates-MLC-Election