ಕುರುಬರೇ ಸರ್ಕಾರ ನಡೆಸುತ್ತಿದ್ದಾರೆ ಎನ್ನುವುದು ತಪ್ಪು‌: ದಾಖಲೆಗಳ ಮೂಲಕ ಶಾಮನೂರು ಶಿವಶಂಕರಪ್ಪರಿಗೆ ಪರೋಕ್ಷ ಟಾಂಗ್ ಕೊಟ್ಟ ಎಂ.ಲಕ್ಷ್ಮಣ್

ಮೈಸೂರು,ಅಕ್ಟೋಬರ್,2,2023(www.justkannada.in): ಲಿಂಗಾಯತ ಸಮುದಾಯವನ್ನ ಕಡೆಗಣನೆ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳು  ತಮ್ಮ ಸಮುದಾಯದ ಅಧಿಕಾರಿಗಳಿಗೆ ಮಾತ್ರ ಒಳ್ಳೆಯ ಮತ್ತು ಆಯಕಟ್ಟಿನ ಸ್ಥಾನಮಾನ ನೀಡುತ್ತಾರೆ ಎಂದು ಹೇಳಿಕೆ ನೀಡಿದ್ದ ಶಾಮನೂರು ಶಿವಶಂಕರಪ್ಪ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಶಾಮನೂರು ಶಿವಶಂಕರಪ್ಪನವರ ಹೇಳಿಕೆ ಬಹಳಷ್ಟು ಸದ್ದು ಮಾಡುತ್ತಿದೆ. ಬಿಜೆಪಿ ಜೆಡಿಎಸ್ ಗೆ ಆಹಾರ ಆಗಿದೆ. ಇದಕ್ಕೆ ಸ್ಪಷ್ಟೀಕರಣ ಕೊಡುತ್ತಿದ್ದೇನೆ. ಕುರುಬರೇ ಸರ್ಕಾರ ನಡೆಸುತ್ತಿದ್ದಾರೆ ಎನ್ನುವುದು ತಪ್ಪು‌. ಪಕ್ಷ ಅಧಿಕಾರಕ್ಕೆ ಬರಲು ಲಕ್ಷಾಂತರ ಕಾರ್ಯಕರ್ತರ ಶ್ರಮ ಇದೆ. ಎಷ್ಟೊ ಜನರ ಮೇಲೆ ಕೇಸ್ ಗಳನ್ನ ಹಾಕಲಾಗಿದೆ. ಶ್ರಮ ಹಾಕಿದವರಿಗೆ ಯಾವುದೇ ಅಧಿಕಾರ ಸಿಕ್ಕಿಲ್ಲ. ಅಧಿಕಾರದಲ್ಲಿರುವವರು ತಾಳ್ಮೆಯಿಂದ ಇರಬೇಕು. ಶಾಮನೂರು ಶಿವಶಂಕರಪ್ಪನವರ ಮೇಲೆ ಸಾಕಷ್ಟು ಗೌರವ ಇದೆ. ಯಾರೋ ಅವರನ್ನ ಮಿಸ್ ಲೀಡ್ ಮಾಡುತ್ತಿದ್ದಾರೆ. ನಾನು ಸಾಕಷ್ಟು ದಾಖಲೆಗಳನ್ನ ತೆಗೆದುಕೊಂಡಿದ್ದೇನೆ. 40 ಚೀಫ್ ಇಂಜಿನಿಯರ್ ಗಳಲ್ಲಿ 10 ಲಿಂಗಾಯತರು, 9 ವಕ್ಕಲಿಗರು, 4 ಕುರುಬರು ಇದ್ದಾರೆ.  41 ವಿಶ್ವವಿದ್ಯಾಲಯಗಳಲ್ಲಿ 14 ಜನ ಕುಲಪತಿಗಳು ಲಿಂಗಾಯತರು ಇದ್ದಾರೆ,ಬ್ರಾಹ್ಮಣರು 8 ಜನ ಇದ್ದಾರೆ. ರಾಜ್ಯದಲ್ಲಿ 272 ಐಎಎಸ್ ಅಧಿಕಾರಿಗಳಿದ್ದಾರೆ. 87 ಜನ ಕರ್ನಾಟಕದ ಕೇಡರ್ ಗಳಿದ್ದಾರೆ. ಉಳಿದವರು ಬೇರೆ ರಾಜ್ಯದವರು. 87 ಜನರ ಪೈಕಿ 22ಜನರು ಲಿಂಗಾಯತರು ಇದ್ದಾರೆ. 31 ಜಿಲ್ಲಾಧಿಕಾರಿಗಳ ಪೈಕಿ 4 ಲಿಂಗಾಯತರು, 5 ಜನ ಒಕ್ಕಲಿಗರಿದ್ದಾರೆ. ಸಿಇಒಗಳು ಪೈಕಿ 10 ಜನ ಲಿಂಗಾಯತರಿದ್ದಾರೆ, 9 ಒಕ್ಕಲಿಗರಿದ್ದಾರೆ. 409 ಜನ ಕೆಎಸ್ ಅಧಿಕಾರಿಗಳಿದ್ದಾರೆ. ಇದರಲ್ಲಿ ‌102 ಜನರು ಲಿಂಗಾಯರಿದ್ದಾರೆ. ಕುರುಬರು ಮೂವರಿದ್ದಾರೆ. ಜಾತಿ ಆಧಾರದ ಮೇಲೆ ಹುದ್ದೆ ಕೊಡುವುದಲ್ಲ. ಯಾವುದೇ ಜಾತಿಯನ್ನ ಕಡೆಗಣನೆ ಮಾಡಿಲ್ಲ ಎಂದು ಹೇಳುವ ಮೂಲಕ ಕುರುಬರಿಗೆ ಎಲ್ಲಾ ಕೊಡುತ್ತಿದ್ದಾರೆ ಎಂಬ ಮಾತಿಗೆ ಉದಾಹರಣೆ ಕೊಟ್ಟರು.

ಸರ್ಕಾರದಿಂದ ನಾನು ದಾಖಲೆಗಳನ್ನ ತೆಗೆದುಕೊಂಡಿದ್ದೇನೆ. ಹೌಸಿಂಗ್ ಬೋರ್ಡ್, ಕ್ರಡೆಲ್ ಎಂಡಿ, ಅಗ್ರಿಕಲ್ಚರ್, ಚೆಸ್ಕಾಂ, ಐಟಿ ಬಿಟಿಯಲ್ಲಿ ಲಿಂಗಾಯತರಿದ್ದಾರೆ. ಪ್ರತಿಯೊಂದು ಜಾತಿಯನ್ನ ಒಟ್ಟಿಗೆ ತೆಗೆದುಕೊಂಡು ಹೋಗಿದ್ರೆ ಅದು ಕಾಂಗ್ರೆಸ್ ಮಾತ್ರ. ಕೈ ಮುಗಿದು ಕೇಳಿ ಕೊಳ್ತೇನೆ, ಚುನಾವಣೆ ಸಂದರ್ಭದಲ್ಲಿ ನೀವೆಲ್ಲಾ ಎಲ್ಲಿ ಇದ್ರಿ. ಖುಷಿ, ತೆವಲು ತೀಟೆಗೆ ಕೆಲವರು ಹೇಳಿಕೆ ಕೊಡುತ್ತಿದ್ದಾರೆ ಎಂದು  ಪರೋಕ್ಷವಾಗಿ ಶಾಮನೂರು ಶಿವಶಂಕರಪ್ಪನವರ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬೇಸರ ವ್ಯಕ್ತಪಡಿಸಿದರು.

ಶಾಮನೂರು ಶಿವಶಂಕರಪ್ಪನವರಿಗೆ ದಾಖಲೆಗಳನ್ನ ಕಳುಹಿಸಿಕೊಡುತ್ತೇನೆ. ಅವರನ್ನ ಭೇಟಿ ಮಾಡಿ ಮಾಹಿತಿ ಕೊಡುತ್ತೇನೆ. ಜಾತಿ ರಾಜಕಾರಣವನ್ನ ಸಿದ್ದರಾಮಯ್ಯ ಜೀವನದಲ್ಲಿ ಮಾಡಿಲ್ಲ. ಕುರುಬರೇ ಸರ್ಕಾರ ನಡೆಸುತ್ತಿದ್ದಾರೆ ಎನ್ನುವುದು ತಪ್ಪು‌. ಜಾತಿ ಜಾತಿಗಳ ನಡುವೆ ಜಗಳ ತರುವುದು ಬಿಜೆಪಿ ಕೆಲಸ. ಶಾಮನೂರು ಶಿವಶಂಕರಪ್ಪನವರಿಗೆ ಯಾರು ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಲಿಂಗಾಯತ ಸಮುದಾಯ ನಮ್ಮನ್ನ ಕೈಹಿಡಿದಿದೆ. ಒಕ್ಕಲಿಗರು ಸೇರಿದಂತೆ ಎಲ್ಲರೂ ಕೈ ಹಿಡಿದಿದ್ದಾರೆ. ಸರ್ಕಾರದಲ್ಲಿ 7 ಜನ ಲಿಂಗಾಯತ ಮಂತ್ರಿಗಳಿದ್ದಾರೆ ಎಂದು ಎಂ.ಲಕ್ಷ್ಮಣ್ ಸ್ಪಷ್ಟನೆ ನೀಡಿದರು.

ಸಂಕ್ರಾಂತಿ ಬಳಿಕ ಸರ್ಕಾರ ಬದಲಾಗುತ್ತೆ ಎನ್ನುವ ಸಿಪಿ ಯೋಗೇಶ್ವರ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್,  ಹೀಗೆ ಹೇಳುವವರಿಗೆ ತಲೆಕೆಟ್ಟಿದೆ.  ಮೊದಲಿಂದಲೂ ಯತ್ನಾಳ್ ಹೀಗೆ ಹೇಳ್ಕೊಂಡು ಓಡಾಡ್ತಾರೆ. ಈಗಲೂ ಕಾಂಗ್ರೆಸ್ ಸೇರೋಕೆ 25 ರಿಂದ 30 ಎಂಎಲ್ ಎಗಳು ರೆಡಿ ಇದ್ದಾರೆ. ನಮ್ಮ ಪಕ್ಷದ ಹೈಕಮಾಂಡ್ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಅವರ ಪಕ್ಷದವರು ಹೋಗುವವರನ್ನ ತಡೆಯೋದಿಕ್ಕೆ ಹೀಗೆ ಸುಳ್ಳು ಹೇಳ್ಕೊಂಡು ತಿರುಗಾಡುತ್ತಿದ್ದಾರೆ ಎಂದು ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

Key words: KPCC-Spokesperson-M. Lakshman – Shamanur Shivshankarappa -documents