ಚುನಾವಣಾ ಕಾವು ಏರುತ್ತಿದೆ : ಮತದಾರರಿಗೆ ಭರವಸೆಗಳ ಮಹಾಪೂರವೇ ಹರಿಯುತ್ತಿದೆ..!

 

ಬೆಂಗಳೂರು, ಏ.30, 2023 : (www.justkannada.in news) ಕರ್ನಾಟಕದಲ್ಲಿ ಮತದಾನಕ್ಕೆ ಇನ್ನು ಕೇವಲ ಹತ್ತು ದಿನಗಳು ಬಾಕಿ ಉಳಿದಿವೆ. ರಾಜ್ಯದಲ್ಲಿ ಬಿಸಿಲಿನ ಜಳ ಮಾತ್ರ ಏರುತ್ತಿಲ್ಲಾ. ಪ್ರಚಾರದ ಕಾವು ಸಹ ಏರುಗತಿಯಲ್ಲೆ ಇದೆ

ಬಿಜೆಪಿಯ ಸ್ಟಾರ್ ಪ್ರಚಾರಕ ಪ್ರಧಾನಿ ನರೇಂದ್ರ ಮೋದಿಯವರು ಅಬ್ಬರದ ಪ್ರಚಾರ ಕ್ಕಿಳಿದಿದ್ದಾರೆ. ಈ ಬಾರಿ ಬಿಜೆಪಿಯ ಬಹುಮತದ ಸರ್ಕಾರ ಎಂಬ ಘೋಷಣೆಯೊಂದಿಗೆ, ಮತದಾರರಿಗೆ ತಮ್ಮ ಪಕ್ಷದ ಬಹುಮತದ ಸರ್ಕಾರ ಅಧಿಕಾರಕ್ಕೆ ತನ್ನಿ, ಇದುವರೆವಿಗೂ ಬಹುಮತ ನೀಡಿಲ್ಲ ಎಂದು ಮತದಾರರ ಓಲೈಸುವ ಕಾರ್ಯ ಮಾಡುತ್ತಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿ,  ಹಳೆ ಮೈಸೂರು ಭಾಗದಲ್ಲಿ, ಅದರಲ್ಲೂ ಜೆಡಿಎಸ್ನ ಭದ್ರ ನೆಲೆಯಾಗಿರುವ ಕೋಲಾರ, ಚನ್ನಪಟ್ಟಣ, ಬೇಲೂರು ಹಾಗೂ ಮೈಸೂರು ಇಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಬಿಜೆಪಿ ಗೆ ಬೆಂಬಲ ನೀಡಿ ಡಬಲ್ ಇಂಜಿನ್ ಸರ್ಕಾರ ಕ್ಕೆ ಶಕ್ತಿ ನೀಡಿ ಎಂದು ವಿನಂತಿಸಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರುದ್ದ ಚಾಟಿ ಬೀಸಿದ್ದಾರೆ.

ಕಾಂಗ್ರೆಸ್ ಪಕ್ಷ ಕ್ಕೆ ಮತ ನೀಡಿದರೆ ಅಭಿವೃದ್ಧಿಯ ರಿವರಸ್ ಗೇರ್ ಹಾಕುತ್ತಾರೆ. ಜೆಡಿಎಸ್,  ಕಾಂಗ್ರೆಸ್ ನ ಬಿ ಟೀಮ್. ದೆಹಲಿಯಲ್ಲಿ, ಸಂಸತ್ತಿನಲ್ಲಿ ಒಂದಾಗುತ್ತಾರೆ. ಎರಡೂ ಪಕ್ಷಗಳು ಕುಟುಂಬ ಕೇಂದ್ರೀಕೃತ. ಅಧಿಕಾರಕ್ಕೆ ಬಂದರೆ ಕುಟುಂಬ ದವರ ಅಭಿವೃದ್ಧಿ, ಭ್ರಷ್ಟಾಚಾರ ಮಾಡುತ್ತಾರೆ ಎಂದು ಅರೋಪಗಳ ಸುರಿಮಳೆ ಸುರಿಸಿದರು ಮೋದಿ.

 

ಬೊಂಬೆಗಳ ನಾಡು, ಚನ್ನಪಟ್ಟಣ ಸದ್ಯ ಜೆಡಿಎಸ್ನ ನಾಯಕ ಕುಮಾರಸ್ವಾಮಿ ಪ್ರತಿನಿಧಿಸುವ ಕ್ಷೇತ್ರ. ಬಿಜೆಪಿಯ ಸೈನಿಕ ಸಿ ಪಿ ಯೋಗೆಶ್ವರ್ ರವರನ್ನು ಸೋಲಿಸಲೇಂದೆ, ಕುಮಾರಸ್ವಾಮಿ, ರಾಮನಗರ ಕ್ಷೇತ್ರವನ್ನು ತಮ್ಮ ಮಡದಿ ಅನಿತಾ ರಿಗೆ ಬಿಟ್ಟು 2018 ರಲ್ಲಿ ಚನ್ನಪಟ್ಟಣದಲ್ಲಿ ಸ್ಪರ್ದಿಸಿ ಗೆದ್ದರು. ಈ ಬಾರಿ ಯೂ ಕುಮಾರಸ್ವಾಮಿ ಯೋಗೇಶ್ವರ್ ವಿರುಧ್ದ ಸೆಣಸುತ್ತಿದ್ಸಾರೆ.

ಮೋದಿಯವರು ಇಂದು ಚನ್ನಪಟ್ಟಣದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಬಿಜೆಪಿಗೆ ಬೆಂಬಲಿಸುವಂತೆ ಕೋರಿದರು.

ಕಾಂಗ್ರೆಸ್, ಮತ್ತು ಜೆಡಿಎಸ್ ವಿರುಧ್ದ ಟೀಕಾ ಪ್ರಹಾರ ಮಾಡಿದರು. ಆದರೆ ಮೋದಿ ಯವರು ಜೆಡಿಎಸ್ ವರಿಷ್ಠ ದೇವೇಗೌಡರ ರ ಹೆಸರನ್ನು ಉಲ್ಲೇಖಸಲಿಲ್ಕಾ. ಕುಮಾರಸ್ವಾಮಿ ಅಥವಾ ಯಾವುದೇ ಕಾಂಗ್ರೆಸ್ ನಾಯಕರ ಹೆಸರನ್ನು ಹೆಸರಿಸಲಿಲ್ಲಾ ಎಂಬುದು ಗಮನಾರ್ಹ.

ಎರಡೂ ರಾಷ್ಟೀಯ ಪಕ್ಷಗಳ ನಾಯಕರುಗಳು ತಮ್ಮನ್ನು ಸಂಪರ್ಕಿಸಿದ್ದರು, ಅವರಿಗೆ ಕುಮಾರಸ್ವಾಮಿ ಯ ಜೊತೆ ಮಾತಾಡಿ ಎಂದು ಹೇಳಿದ್ದೇನೆ ಎಂದು ದೇವೇಗೌಡರು ಈಗಾಗಲೇ ಹೇಳಿದ್ದಾರೆ. ಇಂದು ಮೋದಿಯವರು ಜೆಡಿಎಸ್ ಕುಟುಂಬಕ್ಕೆ ಸೀಮೀತವಾದ ಪಕ್ಷ. 25 ಸೀಟು ಬಂದರೆ ಕಿಂಗ್ ಮೇಕರ್ ಆಗಲು ತಯಾರಾಗುತ್ತಾರೆ. ಆ ಪಕ್ಷ ಕಾಂಗ್ರೆಸ್ ಬಿ ಟೀಮ್, ಜೆಡಿಎಸ್ ಕೊಡುವ ಒಂದು ವೋಟು ಕಾಂಗ್ರೆಸ್ ಗೆ ಹೋಗುತ್ತೆ. ಎಂದು ಟೀಕಿಸಿದರು.

ಇದೇ ದಿನ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಪುತ್ರ ಕುಮಾರಸ್ವಾಮಿ ಕೈ ಬಿಡಬೇಡಿ ಎಂದು ಚನ್ನಪಟ್ಟಣದಲ್ಲಿ ಪ್ರಚಾರ ಕೈ ಗೊಂಡಿದ್ದರು. ಒಂದು ಕಡೆ ಮೋದಿ ಇನ್ನೊಂದು ಕಡೆ ದೇವೇಗೌಡರ ಪ್ರಚಾರ ದ ಅಬ್ಬರ.

ಈಗಾಗಲೆ ಬೆಂಗಳೂರು ಮೈಸೂರು ದಶ ಪಥ ರಸ್ತೆ ಉದ್ಘಾಟನಾ ಸಮಾರಂಭದಲ್ಲಿ ಮಂಡ್ಯ, ಮೈಸೂರು ಬಾಗದಲ್ಲಿ ಕಮಲ ಅರಳಿಸುವಂತೆ ಮೋದಿಯವರು ಜನತೆಗೆ ಮನವಿ ಮಾಡಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಗೆ ಬೆಂಬಲ ಘೋಷಿಸಿ, ಎಲ್ಲೆಡೆ ಪ್ರಚಾರ ಸಹ ಮಾಡುತ್ತಿದ್ದಾರೆ.

ಹಳೆ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಅಸ್ತಿತ್ವ ಕಂಡುಕೊಂಡಿದೆ. ಇಲ್ಲಿ ಜೆಡಿಎಸ್ ಗೆ ಮತದಾರನ ಒಲವು ಕಡಿಮೆಯಾದರೆ, ದೇವೇಗೌಡರ ಪಕ್ಷಕ್ಕೆ ಬಾರಿ ನಷ್ಟ. ಕಳೆದ ವಿದಾನ ಸಬೆ ಯ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ 30 ಸ್ಥಾನ ಗಳಿಸಿದ್ದು. ಅ ಚುನಾವಣೆಯಲ್ಲಿ ಜೆಡಿಎಸ್ ಗೆದ್ದಿದ್ದೆ 37 ಸೀಟುಗಳು.

ಒಕ್ಕಗಲಿಗರ ಪ್ರಭಾವ ಹೊಂದಿರುವ ಮಂಡ್ಯ, ಮೈಸೂರು, ತುಮಕೂರು, ರಾಮನಗರ, ಚನ್ನಪಟ್ಟಣ, ಚಾಮರಾಜನಗರ ಜಿಲ್ಲೆಗಳಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಹ ಒಕ್ಕಲಿಗರು ಕಾಂಗ್ರೆಸ್ ಬೆಂಬಲಿಸ ತಮ್ಮನ್ನು ಮುಖ್ಯ ಮಂತ್ರಿ ಮಾಡಿ ಎಂದು ಈಗಾಗಲೇ ಒಕ್ಕಲಿಗರಿಗೆ ವಿನಂತಿಸಿದ್ದಾರೆ. ಮತದಾರ ಕಾಂಗ್ರೆಸ್ ಗೆ ಸೈ ಎನ್ನವನೊ, ದೇವೇಗೌಡರ ಪಕ್ಷಕ್ಕೆ ಬೆಂಬಲ ಮುಂದುವರೆಸುವನೊ, ಕಮಲ ಹಿಡಿವನೊ ಮೇ 13 ರವರವಿಗೂ ಕಾಯಬೇಕಾಗಿದೆ.

M.SIDDARAJU, SENIOR JOURNALIST
  • ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು.

Key words : Karnataka-election2023-congress-bjp-jds