ಯೂಟ್ಯೂಬ್’ನಲ್ಲಿ ಹವಾ ಸೃಷ್ಟಿಸಿದ ‘ಅಳಿದು ಉಳಿದವರು’ !

ಮೈಸೂರು, ನವೆಂಬರ್ 21, 2019 (www.justkannada.in): ಭಿನ್ನ ಕಥೆಯ ಚಿತ್ರ ‘ಅಳಿದು ಉಳಿದವರು’ ಟ್ರೈಲರ್​ ರಿಲೀಸ್ ಆಗಿದ್ದು, ಯೂ ಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಟಿವಿ ಶೋವೊಂದರ ತಾಕಲಾಟಗಳನ್ನು ತೆರೆದಿಡುವ ಚಿತ್ರ ‘ಅಳಿದು ಉಳಿದವರು’. ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಫಸ್ಟ್​ ಲುಕ್​ ಬಿಡುಗಡೆ ಮಾಡಿ ಭರವಸೆ ಮೂಡಿಸಿದ್ದ ಚಿತ್ರವು ಟೀಸರ್ ಮೂಲಕ ಮತ್ತೆ ಸುದ್ದಿಯಾಗಿದೆ.

ಹೊಸ ನಿರ್ದೇಶಕರ ಪ್ರಯತ್ನದ ಚಿತ್ರ ಅಳಿದು ಉಳಿದವರು ಟ್ರೈಲರ್​ ಬುಧವಾರ, ನ.20 ರ ಸಂಜೆ ಬಿಡುಗಡೆಯಾಗಿದೆ. ನಿರ್ದೇಶಕ, ನಟ ಪವನ್​ ಕುಮಾರ್​ ತಮ್ಮ ಅಧಿಕೃತ ಯೂಟ್ಯೂಬ್​ ಚಾನೆಲ್​ ನಲ್ಲಿ ಚಿತ್ರದ ಟ್ರೈಲರ್​ ಅನಾವರಣಗೊಳಿಸಿದ್ದಾರೆ.

ನಿರ್ಮಾಪಕ ಅಶು ಬೆದ್ರ ಮೊದಲ ಬಾರಿಗೆ ನಾಯಕರಾಗಿ ಕಾಣಿಸಿಕೊಂಡಿರುವ ಅಳಿದು ಉಳಿದವರು ಚಿತ್ರವು ಒಂದು ಪ್ರಸಿದ್ಧ ಟಿವಿ ವಾಹಿನಿಯ ಕಾರ್ಯಕ್ರಮದ ಸುತ್ತ ಸುತ್ತುತ್ತದೆ. ಕಾರ್ಯಕ್ರಮದ 100ನೇ ಸಂಚಿಕೆಯನ್ನು ರೂಪಿಸಲು ಎದುರಾಗುವ ತೊಂದರೆಗಳು, ವಾಹಿನಿಯ ಟಿಆರ್​ ಪಿಗಾಗಿ ಪಡುವ ಪಾಡು ಇವುಗಳನ್ನೆಲ್ಲ ಭಾವನೆಗಳ ಏರಿಳಿತಗಳೊಂದಿಗೆ ಚಿತ್ರವು ನಿರೂಪಿತವಾಗುತ್ತದೆ.

ಅರವಿಂದ್​ ಶಾಸ್ತ್ರಿ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದು ಚಿತ್ರಕಥೆಯನ್ನೂ ರಚಿಸಿದ್ದಾರೆ. ಅಶು ಬೆದ್ರ ವೆನ್ಚರ್ಸ್​ ಮತ್ತು ಪಿವಿಆರ್​ ಪಿಕ್ಚರ್ಸ್​ ಸಂಸ್ಥೆಗಳು ಚಿತ್ರದ ನಿರ್ಮಾಣದ ಹೊಣೆಯನ್ನು ವಹಿಸಿಕೊಂಡಿವೆ. ಬೆದ್ರ ನಿರ್ಮಾಪಕರಾಗುವ ಜೊತೆಗೆ ಮೊದಲ ಬಾರಿಗೆ ಅಳಿದು ಉಳಿದವರು ಚಿತ್ರದ ನಾಯಕನಾಗಿಯೂ ನಟಿಸಿದ್ದಾರೆ. ಸಂಗೀತ ಭಟ್​ ಬೆದ್ರ ಅವರಿಗೆ ಜೋಡಿಯಾಗಿದ್ದಾರೆ. ಬೆದ್ರ ಅವರು ಈ ಹಿಂದೆ ಸಿಂಪಲ್ಲಾಗಿ ಇನ್ನೊಂದು ಲವ್​ ಸ್ಟೋರಿ ಚಿತ್ರದ ನಿರ್ಮಾಣ ಮಾಡಿದ್ದರು.

ಹಿರಿಯ ನಟ ಅತುಲ್​ ಕುಲಕರ್ಣಿ, ಲೂಸಿಯಾ ಖ್ಯಾತಿಯ ಪವನ್​ ಕುಮಾರ್​, ಬಿ ಸುರೇಶ್​, ಸಂಗೀತಾ ಭಟ್​, ಅರವಿಂದ್​ ರಾವ್​ ಮುಂತಾದವರು ತಾರಾಗಣದಲ್ಲಿದ್ದು ಚಿತ್ರದ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ. ಮಿಥುನ್​ ಮುಕುಂದ್​ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಅಳಿದು ಉಳಿದವರು ಟ್ರೈಲರ್​ ಭಿನ್ನ ಕಥೆಯನ್ನು ತೆರೆದಿಡುವ ಮೂಲಕ ಗಮನ ಸೆಳೆದಿದೆ. ಹೊಸ ನಿರ್ದೇಶಕ ಮತ್ತು ನುರಿತ ಕಲಾವಿದರನ್ನು ಹೊಂದಿರುವ ಚಿತ್ರವು ಮುಂದಿನ ತಿಂಗಳು ಡಿಸೆಂಬರ್​ 6 ರಂದು ತೆರೆಗೆ ಲಗ್ಗೆ ಇಡಲಿದೆ.