ಆದಾಯ ಮೀರಿದ ಆಸ್ತಿ ಪ್ರಕರಣ: ಜೆಸ್ಕಾಂ AEE ಮನೆ, ಕಚೇರಿ ಸೇರಿ 6 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ

ಕಲಬುರಗಿ, ಜುಲೈ,8,2026 (www.justkannada.in): ಆದಾಯ ಮೀರಿದ ಆಸ್ತಿ (Disproportionate Assets) ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಜೆಸ್ಕಾಂ)ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಅಮೃತ್ ರಾವ್ ಯಲಾಲ್ ಅವರಿಗೆ ಸಂಬಂಧಿಸಿದ ಆರು ಸ್ಥಳಗಳ ಮೇಲೆ ಕರ್ನಾಟಕ ಲೋಕಾಯುಕ್ತ ಪೊಲೀಸರು ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿದರು.

ಕರ್ನಾಟಕ ಲೋಕಾಯುಕ್ತ ಕಲಬುರಗಿ ಪೊಲೀಸ್ ಅಧೀಕ್ಷಕ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ಆರು ತಂಡಗಳು ಕಾರ್ಯಾಚರಣೆ ನಡೆಸಿದ್ದು, ಕಲಬುರಗಿಯ ಜಾಗೃತಿ ಕಾಲೋನಿಯಲ್ಲಿರುವ ನಿವಾಸ, ಮೂಲ ಊರಾದ ಸುಲೇಪೇಟೆಯ ಮನೆ, ಬಸವ ಅಪಾರ್ಟ್‌ಮೆಂಟ್‌ ನಲ್ಲಿರುವ ಸುಮಾರು 40 ಫ್ಲ್ಯಾಟ್‌ಗಳು, ಕೊತ್ತಂಬರಿ ಲೇಔಟ್‌ ನ ಜೆಸ್ಕಾಂ ಕಚೇರಿ, ಮಾವನ ಮನೆ ಹಾಗೂ ಸೇಡಂ ರಸ್ತೆಯ ಜಾಗೃತಿ ಕಾಲೋನಿಯಲ್ಲಿರುವ ಫೇಬರ್ ಪ್ಲಾಟಿನಂ ಸ್ಟುಡಿಯೋ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ.

ಪರಿಶೀಲನೆ ವೇಳೆ ಕಲಬುರಗಿ ನಗರದ ಹಲವು ಫ್ಲ್ಯಾಟ್‌ ಗಳು, ವಾಣಿಜ್ಯ ಮಳಿಗೆಗಳು ಹಾಗೂ ಸುಲೇಪೇಟೆ ಭಾಗದಲ್ಲಿ ಅಂದಾಜು 15 ಎಕರೆ ಭೂಮಿ ಹೊಂದಿರುವ ಮಾಹಿತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಎಲ್ಲಾ ಸ್ಥಳಗಳಲ್ಲಿ ದಾಖಲೆಗಳು, ಆಸ್ತಿ ವಿವರಗಳು ಮತ್ತು ಹಣಕಾಸು ವ್ಯವಹಾರಗಳ ಕುರಿತು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ತನಿಖೆ ಪೂರ್ಣಗೊಂಡ ಬಳಿಕ ಲಭ್ಯವಾಗಲಿದೆ.

Key words: Kalaburagi, Lokayukta, raids , AEE