ಈ ಬಾರಿಯ ಮೊಬೈಲ್ ಆಪ್ ಬೆಳೆ ಸಮೀಕ್ಷೆ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ: ಸಚಿವ ಬಿಸಿ ಪಾಟೀಲ್.

ಬೆಂಗಳೂರು,ಆಗಸ್ಟ್,31,2021(www.justkannada.in): ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷದಿಂದ ಕೈಗೊಂಡಿರುವ ಮೊಬೈಲ್ ಆಪ್ ಬೆಳೆ ಸಮೀಕ್ಷೆ ದೇಶದ್ಯಾಂತ ಗಮನ ಸೆಳೆದಿದ್ದು, ಕೇಂದ್ರದಿಂದ ಮೆಚ್ಚುಗೆಗೆ ಪಾತ್ರವಾಗಿರುವ  ಈ ಮೊಬೈಲ್ ಬೆಳೆ ಸಮೀಕ್ಷೆ ಈ ಬಾರಿಯೂ ಕೂಡ ಯಶಸ್ವಿಯಾಗಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದ್ದಾರೆ.

ವಿಕಾಸಸೌಧದ ಕಚೇರಿಯಲ್ಲಿ ಕೃಷಿ ಇಲಾಖಾಧಿಕಾರಿಗಳೊಂದಿಗೆ 2021-22 ನೇ ಸಾಲಿನ ಮೊಬೈಲ್ ಆಪ್ ಬೆಳೆ ಸಮೀಕ್ಷೆ ಪ್ರಗತಿ ಕುರಿತು ಬಿ.ಸಿ.ಪಾಟೀಲ್ ಸಭೆ ನಡೆಸಿದರು.

ಕಳೆದ ವರ್ಷ ರಾಜ್ಯಾದ್ಯಂತ ಬೆಳೆ ಸಮೀಕ್ಷೆ ಕ್ಷಿಪ್ರ ಗತಿಯಲ್ಲಿ ಇತರೆ ಇಲಾಖೆಗಳ ಸಹಯೋಗದಲ್ಲಿ ಕೈಗೊಂಡು ಯಶಸ್ವಿಯೂ ಆಗಿದೆ. ಇತರೆ ರಾಜ್ಯಗಳಿಗೆ ಕರ್ನಾಟಕ ಕೃಷಿ ಇಲಾಖೆಯ ಈ ಸಾಧನೆ ಮಾದರಿಯೂ ಆಗಿದೆ. ಕೇಂದ್ರದಿಂದ ಅಗ್ರಿ ಟ್ರೆಂಡ್ ಸೆಟ್ಟರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಂತಹ ಸಾಧನೆ ಇನ್ನು ಮುಂದೆಯೂ ಆಗಬೇಕು. ರೈತ ತಾನೇ ತನ್ನ ಬೆಳೆಗೆ ಪ್ರಮಾಣ ಪತ್ರ ನೀಡುವಂತಹ ಜಮೀನಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅರ್ಹನೆಂದು ಹೇಳಿಕೊಳ್ಳುವಂತಹ ಮೊಬೈಲ್ ಬೆಳೆ ಸಮೀಕ್ಷೆ ನಿರಂತರ ನಡೆಯಬೇಕು. ಕಳೆದ ಬಾರಿಯಂತೆ ಎಲ್ಲಾ ಕೃಷಿ ಅಧಿಕಾರಿಗಳು ಈ ಪ್ರಕ್ರಿಯೆ ಯಶಸ್ಸಿಗೆ ಮತ್ತೆ ಚುರುಕಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

2021-22ನೇ ಸಾಲಿನಲ್ಲಿ ಪೂರ್ವ ಮುಂಗಾರಿನಲ್ಲಿ 2.94 ಲಕ್ಷ ತಾಕುಗಳನ್ನು ರೈತರೇ ಸ್ವತಃ ರೈತರ  ಆಪ್ ನಲ್ಲಿ ಹಾಗೂ 44.77 ಲಕ್ಷ ತಾಕುಗಳನ್ನು ಖಾಸಗಿ ನಿವಾಸಿಗಳ ಆಪ್ ನಲ್ಲಿ ಬೆಳೆ ಮಾಹಿತಿಯನ್ನು ದಾಖಲು ಮಾಡಲಾಗಿರುತ್ತದೆ. 2021-22ನೇ ಸಾಲಿನಲ್ಲಿ ಮುಂಗಾರಿನಲ್ಲಿ 6.18 ಲಕ್ಷ ತಾಕುಗಳನ್ನು ರೈತರೇ ಸ್ವತಃ ರೈತರ  ಆಪ್ ನಲ್ಲಿ ಹಾಗೂ 0.66 ಲಕ್ಷ ತಾಕುಗಳನ್ನು ಖಾಸಗಿ ನಿವಾಸಿಗಳ ಆಪ್ ನಲ್ಲಿ  ಆ.30 ರವರೆಗೆ ಅಪ್ಲೋಡ್ ಮಾಡಲಾಗಿದ್ದು ಬೆಳೆ ಸಮೀಕ್ಷೆಯು ಪ್ರಗತಿಯಲ್ಲಿದೆ.

ಅಂದ್ಹಾಗೆ  ಪ್ರತಿ ವರ್ಷದಂತೆ ಈ ವರ್ಷವೂ ಸಹ ಮುಂಗಾರು ಹಂಗಾಮಿನಲ್ಲಿ ಸುಮಾರು 2.09 ಕೋಟಿ ತಾಕುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಿದ್ದು, ರೈತರಿಂದಲೇ ಅವರ ಜಮೀನಿನ ಬೆಳೆ ಮಾಹಿತಿಯನ್ನು ಆಪ್ ಮೂಲಕ ಅಪ್ಲೋಡ್ ಮಾಡಿಸುವ  ಉದ್ದೇಶವನ್ನು ಹೊಂದಿದ್ದು,  ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ರೈತರೇ ಸ್ವತಃ  ಬೆಳೆ  ಸಮೀಕ್ಷೆ ಮಾಹಿತಿಯನ್ನು  ದಾಖಲಿಸಬೇಕೆಂದು ಕೃಷಿ ಸಚಿವ ಬಿಸಿ ಪಾಟೀಲ್ ಈ ಮೂಲಕ ಮತ್ತೆ ರೈತರಲ್ಲಿ ಮನವಿ ಮಾಡಿದ್ದಾರೆ.

ಸಭೆಯಲ್ಲಿ ಕೃಷಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್ ಖತ್ರಿ, ಆಯುಕ್ತ ಬ್ರಿಜೆಶ್ ಕುಮಾರ್ ದೀಕ್ಷಿತ್, ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಮತ್ತಿತ್ತರರು ಪಾಲ್ಗೊಂಡಿದ್ದರು.

Key words: Join – success – Mobile App- Crop –Survey-Minister BC  Patil.