ಹೆಚ್.ಡಿ ದೇವೇಗೌಡರ ಬಗ್ಗೆ ಹೆಚ್.ವಿಶ್ವನಾಥ್ ಹೇಳಿಕೆಗೆ ಜೆಡಿಎಸ್ ರಾಜ್ಯ ವಕ್ತಾರ ರವಿಚಂದ್ರೇಗೌಡ ಆಕ್ರೋಶ.

ಮೈಸೂರು,ಫೆಬ್ರವರಿ,22,2024(www.justkannada.in): ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರು ಪ್ರಧಾನಿ ಮೋದಿ ಬಳಿ ಚಮಚಗಿರಿ ರಾಜಕೀಯ ಮಾಡುತ್ತಿದ್ದಾರೆ. ಎಂಬ  ಎಂಎಲ್ ಸಿ ಎಚ್ ವಿಶ್ವನಾಥ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್  ರಾಜ್ಯ ವಕ್ತಾರ ರವಿಚಂದ್ರೇಗೌಡ, ಒಬ್ಬ ದೇಶದ ಮಾಜಿ ಪ್ರಧಾನಿ ಬಗ್ಗೆ ಇಷ್ಟೊಂದು ಚ್ಯುತ್ತವಾಗಿ ಮಾತನಾಡುವ   ವಿಶ್ವನಾಥ್ ಒಬ್ಬ ಗೋಮುಖ ವ್ಯಾಘ್ರ, ಒಬ್ಬ ನೀಚ  ಎಂದು ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಜೆಡಿಎಸ್  ರಾಜ್ಯ ವಕ್ತಾರ ರವಿಚಂದ್ರೇಗೌಡ, 2014ರ ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿ ತಮಿಳುನಾಡಿನ‌ ವೆಲ್ಲೂರು ಆಸ್ಪತ್ರೆ ಸೇರಿದ್ದ ನಿಮ್ಮನ್ನ ದೇವೇಗೌಡರು ಕರೆದುಕೊಂಡು ಬಂದು 2018 ವಿಧಾನಸಭಾ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದು ನಿಮ್ಮನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರು. ಆಗ ದೇವೇಗೌಡರು ನನಗೆ ಪುನರ್ ಜನ್ಮ ಕೊಟ್ಟರು, ಅವರ ಖುಣ ಮರೆಯೊಲ್ಲ ಅಂತ ಹೇಳುತ್ತಿದ್ದ ನೀವು ಈಗ ಚಮಚಗಿರಿ ಮಾಡ್ತಾರೆ ಅಂತೀರಾ.? ಎಂದು ಗುಡುಗಿದರು.

ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗೆ ದ್ರೋಹ ಮಾಡಿದ್ರಿ. 2018 ಗೆಲ್ಲಿಸಿ ಕಳಿಸಿದ ಹುಣಸೂರು ಜನರಿಗೆ ದ್ರೋಹ ಮಾಡಿ ಬಾಂಬೆ ಬಾಯ್ಸ್ ಜೊತೆ ಸೇರಿ ಸರ್ಕಾರ ಕೆಡವಿದ್ರಿ. ಈ ವಯಸ್ಸಿನಲ್ಲಿ ನಿಮ್ಮನ್ನ ಬಾಂಬೆ ಬಾಯ್ಸ್ ಅಂತ ಕರೀಬೇಕಾ.? ಎಂದು ರವಿಚಂದ್ರೇಗೌಡ ಕಿಡಿಕಾರಿದರು.

ಬೇರೆಯವರ ಹುಳುಕು ಕಂಡು ಹಿಡಿಯುವ ನಿಮಗೆ ನಿಮ್ಮ ಹುಳುಕು ನಿಮಗೆ ಗೊತ್ತಾಗಲ್ವಾ.? ದೇವೇಗೌಡರ ಬಗ್ಗೆ ಮಾತಾನಾಡಲಿಕ್ಕೆ ನಿಮಗ್ಯಾವ ನೈತಿಕತೆ ಇದೆ ಎಂದು ಎಂಎಲ್ಸಿ ಎಚ್ ವಿಶ್ವನಾಥ್ ವಿರುದ್ಧ ರವಿಚಂದ್ರೇಗೌಡ  ಹರಿಹಾಯ್ದರು.

Key words: JDS – Ravichandre Gowda – H. Vishwanath- statement -about -HD Deve Gowda.