ಒತ್ತಾಯಪೂರ್ವಕವಾಗಿ ಜೈಶ್ರೀರಾಮ್ ಹೇಳಿಸಿ ಹಲ್ಲೆ: ನಾಲ್ವರ ಬಂಧನ.

ಬೀದರ್,ಜನವರಿ,24,2024(www.justkannada.in): ರಾಮ ದೇವರಲ್ಲ, ಡಾ.ಬಿ.ಆರ್. ಅಂಬೇಡ್ಕ‌ರ್ ದೇವರು ಎಂದು ವಾಟ್ಸಪ್ ಸ್ಟೇಟಸ್ ಹಾಕಿದ್ದ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಯನ್ನು ಬಲವಂತವಾಗಿ ಹನುಮಾನ್ ದೇವಸ್ಥಾನಕ್ಕೆ ಕರೆದೊಯ್ದು ಒತ್ತಾಯಪೂರ್ವಕವಾಗಿ ‘ಜೈ ಶ್ರೀರಾಮ್’ ಎಂದು ಹೇಳಿಸಿ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವ ಆರೋಪದ ಮೇಲೆ ಹುಮನಾಬಾದ್ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಹುಮನಾಬಾದ್ ಪಟ್ಟಣದ ಅಭಿಷೇಕ್, ರಿತೇಶ ರೆಡ್ಡಿ. ಸುನೀಲ ರೆಡ್ಡಿ ಹಾಗೂ ಅಭಿಷೇಕ ತೆಲಂಗ ಬಂಧಿತರು. ಹುಮನಾಬಾದ್ ತಾಲ್ಲೂಕಿನ ಹುಣಸಗೇರಾ ಗ್ರಾಮದ ದರ್ಶನ್ ಲಕ್ಷ್ಮಣ ಕಟ್ಟಿಮನಿ ಹಲ್ಲೆಗೊಳಗಾದ ದ್ವಿತೀಯ ಪಿಯು ವಿದ್ಯಾರ್ಥಿ.

‘ದರ್ಶನ್ ಎಂಬ ವಿದ್ಯಾರ್ಥಿ ಜನವರಿ 22 ರಂದು ‘ರಾಮ ದೇವರಲ್ಲ, ಡಾ.ಬಿ.ಆರ್. ಅಂಬೇಡ್ಕ‌ರ್ ದೇವರು’ ಎಂದು ವಾಟ್ಸಪ್‌ ನಲ್ಲಿ ಸ್ಟೇಟಸ್ ಇಟ್ಟುಕೊಂಡಿದ್ದ. ಇದನ್ನು ನೋಡಿದ ಅಭಿಷೇಕ್, ರಿತೇಶ ರೆಡ್ಡಿ, ಸುನೀಲ ರೆಡ್ಡಿ ಹಾಗೂ ಅಭಿಷೇಕ ತೆಲಂಗ ಅವರು ದರ್ಶನ್ ನನ್ನು ವಾಹನದಲ್ಲಿ ಹನುಮಾನ್ ದೇವಸ್ಥಾನಕ್ಕೆ ಕರೆದೊಯ್ದು ಜೈ ಶ್ರೀರಾಮ್ ಎಂದು ಹೇಳಿಸಿ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಎಸ್ ಪಿ ತಿಳಿಸಿದ್ದಾರೆ.

Key words: Jai shreeram- statement –forcefully- assaulted-Four -arrested