ಬೆಂಗಳೂರು, ಜುಲೈ,14,2026 (www.justkannada.in): 2025ರ ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ (ಸ್ಟಾಂಪೀಡ್) ಘಟನೆಗೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಹಾಗೂ ಮಾಜಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ವಿರುದ್ಧ ಆರಂಭಿಸಲಾಗಿದ್ದ ಇಲಾಖಾ ತನಿಖೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಬಿ. ದಯಾನಂದ ಅವರನ್ನು ಮೊದಲು ಅಮಾನತುಗೊಳಿಸಲಾಗಿತ್ತು. ಬಳಿಕ ಅಮಾನತು ಆದೇಶವನ್ನು ಹಿಂಪಡೆದು, ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ಅಡಿಯಲ್ಲಿ ಇಲಾಖಾ ವಿಚಾರಣೆಯನ್ನು ಆರಂಭಿಸಲಾಗಿತ್ತು.
ಸರ್ಕಾರವು ಆರೋಪ ಪತ್ರ ಹಾಗೂ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಬಿ. ದಯಾನಂದ ಅವರು 2025ರ ಸೆಪ್ಟೆಂಬರ್ 8ರಂದು ತಮ್ಮ ಲಿಖಿತ ಉತ್ತರ ಸಲ್ಲಿಸಿದ್ದರು. ತಮ್ಮ ವಿರುದ್ಧ ಹೊರಿಸಲಾದ ಆರೋಪಗಳನ್ನು ಅವರು ತಳ್ಳಿಹಾಕಿ, ತಮ್ಮನ್ನು ಆರೋಪಗಳಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದ್ದರು.
ಅಧಿಕಾರಿಯ ಉತ್ತರ ಹಾಗೂ ಆಡಳಿತ ಇಲಾಖೆಯ ಅಭಿಪ್ರಾಯವನ್ನು ಪರಿಶೀಲಿಸಿದ ನಂತರ, ಸಮರ್ಥ ಪ್ರಾಧಿಕಾರವು ಇಲಾಖಾ ವಿಚಾರಣೆಯನ್ನು ಕೈಬಿಡುವ ನಿರ್ಧಾರ ಕೈಗೊಂಡಿದೆ.
ಈ ಹಿನ್ನೆಲೆಯಲ್ಲಿ ಜುಲೈ 14, 2026ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಆದೇಶ ಹೊರಡಿಸಿದ್ದು, ಬಿ. ದಯಾನಂದ ವಿರುದ್ಧ ಆರಂಭಿಸಲಾಗಿದ್ದ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸಿ, ಅವರ ವಿರುದ್ಧದ ಎಲ್ಲಾ ಆರೋಪಗಳಿಂದ ಅವರನ್ನು ನಿರ್ದೋಷಿ (Exonerated) ಎಂದು ಘೋಷಿಸಿದೆ. ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಈ ಆದೇಶ ಹೊರಡಿಸಲಾಗಿದೆ.
Key words: Chinnaswamy Stadium, tragedy, Government, IPS officer, B. Dayanand






