ರಿಯಾಲಿಟಿ ಶೋನಲ್ಲಿ ಮ್ಯಾಕಾನಿಕ್ ವೃತ್ತಿಗೆ ಅವಮಾನ ಆರೋಪ: ಕ್ಷಮೆ ಕೇಳುವಂತೆ ಆಗ್ರಹ.

ಮೈಸೂರು,ಮೇ,2,2024 (www.justkannada.in): ಕನ್ನಡ ZEE ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ  ಮಹಾನಟಿ ರಿಯಾಲಿಟಿ ಶೋನಲ್ಲಿ ಮ್ಯಾಕಾನಿಕ್ ವೃತ್ತಿಗೆ ಅವಮಾನ ಮಾಡಿದ ಆರೋಪ ಕೇಳಿ ಬಂದಿದ್ದು ಈ ಹಿನ್ನೆಲೆಯಲ್ಲಿ ಕೂಡಲೇ ಕ್ಷಮೆ ಕೇಳುವಂತೆ ಮೈಸೂರು ನಗರ ಜಿಲ್ಲಾ ದ್ವಿಚಕ್ರ ವಾಹನಗಳ ದುರಸ್ತಿಗಾರರ ಒಕ್ಕೂಟ ಆಗ್ರಹಿಸಿದೆ.

ಇಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ಮೈಸೂರು ನಗರ ಜಿಲ್ಲಾ ದ್ವಿಚಕ್ರ ವಾಹನಗಳ ದುರಸ್ತಿಗಾರರ ಒಕ್ಕೂಟದ ಗೌರವಾಧ್ಯಕ್ಷ ಶಿವಕುಮಾರ್ ಆರ್. ಉಪಾಧ್ಯಕ್ಷ ಲಿಂಗಾರಾಜು ಮತ್ತಿತರರು ಸುದ್ದಿಗೋಷ್ಠಿ ನಡೆಸಿ ಮ್ಯಾಕಾನಿಕ್ ವೃತ್ತಿಗೆ ಅಪಮಾನ ಮಾಡಿದ್ದನ್ನ ಖಂಡಿಸಿದರು.

ಈ ವೇಳೆ ಮಾತನಾಡಿದ ಉಪಾಧ್ಯಕ್ಷ ಲಿಂಗಾರಾಜು, ಮೆಕ್ಯಾನಿಕ್ ಗಳು ಸ್ವಾವಲಂಬನೆ ಜೀವನ ನಡೆಸುತ್ತಿದ್ದೇವೆ. ನಾವು ಮೆಕ್ಯಾನಿಕ್ ಗಳಾಗಿದ್ದರೂ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಒಳ್ಳೆಯ ಭವಿಷ್ಯ ರೂಪಿಸಿದ್ದೇವೆ. ಮಹಾನಟಿ ರಿಯಾಲಿಟಿ ಶೋನಲ್ಲಿ ಗಗನ ಅನ್ನೋ ನಟಿ ಮೆಕ್ಯಾನಿಕ್ ಗಳ ಭಾವನೆಗೆ ದಕ್ಕೆ ಬರುವ ಹೇಳಿಕೆಯನ್ನ ನೀಡಿದ್ದಾರೆ. ಮೆಕ್ಯಾನಿಕ್ ಗಳನ್ನ ಮದುವೆಯಾದರೆ ಗ್ರೀಸ್ ತಿಂದು ಬದುಕಬೇಕಾಗುತ್ತದೆ ಎಂದಿದ್ದಾರೆ. ಇದು ಇಡಿ ಮೆಕ್ಯಾನಿಕ್ ಗಳ ಮನಸ್ಸಿಗೆ ನೋವುಂಟು ಮಾಡಿದೆ. ಕೂಡಲೇ ಆಕೆ ಮೆಕ್ಯಾನಿಕ್ ಗಳ ಕ್ಷಮೆ ಕೇಳಬೇಕು. ಇಲ್ಲ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗೌರವಾಧ್ಯಕ್ಷ ಶಿವಕುಮಾರ್ ಆರ್ ಮಾತನಾಡಿ ZEE  ಟಿವಿಯ  ಮಹಾನಟಿ ಎಂಬ ರಿಯಾಲಿಟಿ ಶೋನಲ್ಲಿ ” ಮೆಕಾನಿಕ್ ಗಳನ್ನು ಮದುವೆಯಾದರೆ ಗ್ರೀಸ್ ತಿಂದು ಬದುಕಬೇಕಾಗುತ್ತದೆ ಎಂಬುದಾಗಿ ಪ್ರಸಾರ ಮಾಡಿ ಸ್ವಾಭಿಮಾನದಿಂದ ದುಡಿದು ಬದುಕುತ್ತಿರುವ ನಮ್ಮನ್ನು ಅವಮಾನಿಸಿದ್ದಾರೆ. ಇದು ಅಪಮಾನಕರ ವಿಷಯವಾಗಿದ್ದು, ಟಿವಿ ಮಾಧ್ಯಮದವರು,  ಕಲಾವಿದರು ಎಲ್ಲರೂ ಸಹ ನಮ್ಮಂತೆಯೇ ಹೊಟ್ಟೆ ಪಾಡಿಗಾಗಿ ದುಡಿಯುತ್ತಿರುವವರೇ ಹೊರತು  ಯಾರನ್ನು ಅವಮಾನಿಸಿ ಬದುಕುತ್ತಿಲ್ಲ. ಈ ರೀತಿ ಮ್ಯಾಕಾನಿಕ್ ಗಳನ್ನ ಅವಮಾನ ಮಾಡಿದ್ದು ಸರಿಯಲ್ಲ. ಇದನ್ನು ಮೈಸೂರಿನ ದ್ವಿಚಕ್ರ ವಾಹನಗಳ ದುರಸ್ತಿಗಾರರು ಖಂಡಿಸಿದ್ದು, ಕೊಡಲಿ ಕ್ಷಮೆ ಕೇಳಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಇರುವ ಮೆಕಾನಿಕ್ ಗಳು ರಸ್ತೆಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Key words: Insulting, mechanic, Apology, mysore