ಹಿಜಾಬ್ ವಿವಾದ: ಗೈರಾದ ವಿದ್ಯಾರ್ಥಿಗಳಿಗೆ ಮೈಸೂರಲ್ಲಿ ಆನ್ ಲೈನ್ ಕ್ಲಾಸ್

ಸಾಂದರ್ಭಿಕ ಚಿತ್ರ

ಮೈಸೂರು, ಫೆಬ್ರವರಿ 20, 2022 (www.justkannaa.in): ಹಿಜಾಬ್ ವಿವಾದ ಪ್ರಕರಣ ಹಿನ್ನೆಲೆಯಲ್ಲಿ ಶಾಲಾ ಕಾಲೇಜಿಗೆ ಗೈರಾದ ವಿದ್ಯಾರ್ಥಿಗಳಿಗೂ ಪಾಠ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ.

ಹಿಜಾಬ್ ಗೆ ಪಟ್ಟು ಹಿಡಿದು 194 ವಿದ್ಯಾರ್ಥಿಗಳು ತರಗತಿಗೆ ಗೈರಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಮಾಡಲು ಸಿದ್ಧತೆ ಮಾಡಲಾಗಿದೆ. ಸೋಮವಾರದಿಂದ ಆನ್ ಲೈನ್ ತರಗತಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಮೈಸೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ನಿರ್ಧಾರ ಮಾಡಿದ್ದಾರೆ.

ರಾಜೀವ್ ನಗರದ ಸರ್ಕಾರಿ ಪಿಯು ಕಾಲೇಜಿನ 191 ವಿದ್ಯಾರ್ಥಿಗಳು ತರಗತಿಗೆ ಗೈರಾಗಿದ್ದರು. ಸೆಂಟ್ ಫಿಲೋಮಿನಾ ಕಾಲೇಜಿನ 4 ವಿದ್ಯಾರ್ಥಿಗಳು ಹಿಜಾಬ್ ಗೆ ಬಿಗಿ ಪಟ್ಟು ಹಿಡಿದಿದ್ದಾರೆ. ಕೋರ್ಟ್ ತೀರ್ಪು ಪ್ರಕಟವಾಗುವತನಕ ಕಾಲೇಜಿಗೆ ಬರಲ್ಲ ಎಂದು ವಿದ್ಯಾರ್ಥಿಗಳು ಹಠ ಹಿಡಿದಿದ್ದಾರೆ.

ಶಿಕ್ಷಕರು, ಶಿಕ್ಷಣ ಇಲಾಖೆ ಮನವೊಲಿಕೆಗೂ ವಿದ್ಯಾರ್ಥಿಗಳು ಜಗ್ಗಿಲ್ಲ. ಹೀಗಾಗಿ ಡಿಡಿಪಿಯು ಡಿ.ಕೆ‌.ಶ್ರೀನಿವಾಸ್ ಅವರು ಆನ್ ಲೈನ್ ತರಗತಿ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ.