ಸಂಪುಟ ವಿಸ್ತರಣೆ ಕುರಿತು HDK ಹೇಳಿಕೆ ಖಂಡನೀಯ- ಎಚ್.ಎ. ವೆಂಕಟೇಶ್

ಮೈಸೂರು,ಜೂನ್,23,2026 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕುರಿತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಖಂಡನೀಯ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಕಿಡಿಕಾರಿದರು.

ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಎಚ್.ಎ ವೆಂಕಟೇಶ್, ಜವಾಬ್ದಾರಿಯುತ ಸ್ಥಾನ ಹೊಂದಿರುವ  ಓರ್ವ ಮಾಜಿ ಮುಖ್ಯಮಂತ್ರಿ ಹೀಗೆ ನಡೆದುಕೊಳ್ಳಬಾರದು ಮತ್ತು ಇಂತಹ ಹಗುರ, ಆಧಾರ ರಹಿತ ಹೇಳಿಕೆಗಳನ್ನು ನೀಡಬಾರದು. ನೈತಿಕತೆ ಬದಿಗಿಟ್ಟು ಮುಂದೆ ಬಂದಿರುವ ಕುಮಾರಸ್ವಾಮಿಯವರಿಂದ ಇಂತಹ ಹೇಳಿಕೆ ನಿರೀಕ್ಷಿತವೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಸಚಿವ ಸ್ಥಾನಕ್ಕಾಗಿ  ಆಕಾಂಕ್ಷಿಗಳಿಂದ  ಮ್ಯಾನೇಜ್ಮೆಂಟ್ ಮತ್ತು ಪೇಮೆಂಟ್ ಕೋಟಾಗಳ ವಸೂಲಿ ನಡೆಯುತ್ತಿದೆ ಎಂದು ಕುಮಾರಸ್ವಾಮಿಯವರು ಬೀಸು ಹೇಳಿಕೆ ನೀಡಿದ್ದಾರೆ. ಇವರೊಳಗೆ ತಹತಹಿಸುತ್ತಿರುವ ಹತಾಶ ಮತ್ತು ಮತ್ಸರದ ಮನಸ್ಥಿತಿಯನ್ನು ಈ ಹೇಳಿಕೆ ಬಿಂಬಿಸುತ್ತಿದೆ. ಗಾಳಿ ಬಂದಾಗ ತೂರಿಕೊಂಡಿರುವ ತನ್ನ ಅವಕಾಶವಾದಿ ವರ್ತನೆಯನ್ನೇ ಮಹಾನ್ ಸಾಧನೆ ಎಂದು ಭಾವಿಸಿರುವ ಎಚ್ಡಿಕೆ, ತಾವು ಅಧಿಕಾರದಲ್ಲಿದ್ದು ಸಚಿವಸ್ಥಾನ ಹಂಚುತ್ತಿದ್ದಾಗ ಮಾಡಿದ್ದನ್ನೇ ಬೇರೆಯವರೂ ಸಹ ಅನುಸರಿಸುತ್ತಾರೆ ಎಂದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.

ಇಷ್ಟಕ್ಕೂ ಓರ್ವ ಪ್ರಜ್ಞಾವಂತ ರಾಜಕಾರಣಿ, ತನ್ನ ರಾಜಕೀಯ ಎದುರಾಳಿಗಳನ್ನು ತನ್ನೊಳಗಿನ ಬೌದ್ಧಿಕ ಮತ್ತು ಆಡಳಿತಾತ್ಮಕ ಶಕ್ತಿ ಸಾಮರ್ಥ್ಯ ಹಾಗೂ ಆಸೀಮ ಅಭಿವೃದ್ಧಿ ಕಾರ್ಯಗಳ ಮೂಲಕ ಎದುರಿಸುತ್ತಾನೆ.  ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ತನ್ನ ಕುಟುಂಬದ ವೈರಿ ಎಂಬರ್ಥದಲ್ಲಿ ನೋಡುವ ಎಚ್ಡಿಕೆ, ಇವರ ಬಗ್ಗೆ ಹಲವು ಬಾರಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವುದುಂಟು. ಇದೇ ಹಿನ್ನೆಲೆಯನ್ನಿಟ್ಟುಕೊಂಡು ಈಗಲೂ ವರ್ತಿಸಲು ಹೊರಟಿರುವುದು ಅಕ್ಷಮ್ಯವಾದುದು ಎಂದು ಹೆಚ್ ಎ ವೆಂಕಟೇಶ್ ವಾಗ್ದಾಳಿ ನಡೆಸಿದ್ದಾರೆ.

ನಿರ್ಲಜ್ಜ ಮತ್ತು ಅನೈತಿಕ ಮೈತ್ರಿ ರಾಜಕಾರಣದ ಹೆಗ್ಗುರುತಿನಂತಿರುವ ಕುಮಾರಸ್ವಾಮಿಯವರು ಬೇರೆಯವರು ತನ್ನಂತೆಯೇ ಆಲೋಚಿಸುತ್ತಾರೆ, ರಾಜಕಾರಣವನ್ನು ಕೇವಲ ಹಣ ಮಾಡಲಷ್ಟೇ ಬಳಸಿಕೊಳ್ಳುತ್ತಾರೆ ಎಂದು ಭಾವಿಸಿರುವುದು ಆತಂಕದ ವಿಚಾರ.  ಓರ್ವ ಮಾಜಿ ಮುಖ್ಯಮಂತ್ರಿಯಾಗಿ ಮತ್ತು ಕೇಂದ್ರ ಸರ್ಕಾರದ ಸಚಿವರಾಗಿ ಕುಮಾರಸ್ವಾಮಿಯವರು ತಮ್ಮ ಆಲೋಚನೆಯ ಮಟ್ಟವನ್ನು ಮೇಲ್ದರ್ಜೆಗೇರಿಸಿಕೊಳ್ಳುವ ಮತ್ತು ಅನ್ಯಪಕ್ಷದ ರಾಜಕಾರಣಿಗಳನ್ನು ವಿಶಾಲ ದೃಷ್ಟಿಕೋನದಲ್ಲಿ ಗಮನಿಸುವ ಗುಣ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಹೆಚ್ ಎ ವೆಂಕಟೇಶ್  ಹರಿಹಾಯ್ದಿದ್ದಾರೆ.

Key words: HDK, statement, cabinet expansion, condemnable, H.A. Venkatesh,