ಸರ್ಕಾರ ವರ್ಗಾವಣೆಗೆ ತೋರಿಸುತ್ತಿರುವ ಆಸಕ್ತಿಯನ್ನು ಅಭಿವೃದ್ಧಿ ವಿಷಯಕ್ಕೆ ತೋರುತ್ತಿಲ್ಲ: ಸಿದ್ದರಾಮಯ್ಯ ಟೀಕೆ

ಬೆಂಗಳೂರು, ಡಿಸೆಂಬರ್ 18, 2022 (www.justkannada.in): ಉನ್ನತ ಶಿಕ್ಷಣ ಇಲಾಖೆಯಲ್ಲಿ ಮಧ್ಯಂತರ ಅವಧಿಯ ವರ್ಗಾವಣೆ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಸಹಾಯಕ ಪ್ರಾಧ್ಯಾಪಕರು ವರ್ಗಾವಣೆಯನ್ನು ಮಧ್ಯಂತರ ಅವಧಿಯ ಡಿಸೆಂಬರ್‌ ಮಾಹೆಯಲ್ಲಿ ನಡೆಸಲು ಆದೇಶ ಹೊರಡಿಸಿರುವ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ‌ರ್ಕಾರವು ವರ್ಗಾವಣೆಗಳಿಗೆ ತೋರಿಸುತ್ತಿರುವ ಆಸಕ್ತಿ, ಅಭಿವೃದ್ಧಿ ವಿಷಯಗಳಿಗೆ ಹಾಗೂ ನೇಮಕಾತಿಗಳಿಗೆ ತೋರಿಸುತ್ತಿಲ್ಲಎಂದು ಟೀಕಿಸಿದ್ದಾರೆ.

ವರ್ಗಾವಣೆ ಎನ್ನುವುದು ಆಡಳಿತಾತ್ಮಕ ಮತ್ತು ಸಾರ್ವಜನಿಕ ಅನುಕೂಲಕ್ಕೆ ಮಾಡಬೇಕಾದ ಚಟುವಟಿಕೆಯೆ ಹೊರತು, ಇಲಾಖೆಗಳ ಸಚಿವರಿಗೆ, ಸರ್ಕಾರಕ್ಕೆ ಅದೊಂದು ಚಟವಾಗಬಾರದು ಎಂದು ಹೇಳಿದ್ದಾರೆ.