ಸಿಎಂ ಖುರ್ಚಿಯಿಂದ ಸಿದ್ದರಾಮಯ್ಯರನ್ನ ಕೆಳಗಿಳಿಸುವ ಗ್ಯಾಂಗ್ ಕಾಂಗ್ರೆಸ್ ನಲ್ಲೇ ಇದೆ- ಆರ್.ಅಶೋಕ್

ಬೆಂಗಳೂರು, ಮಾರ್ಚ್​ 23,2024(www.justkannada.in):  ಸಿಎಂ ಖುರ್ಚಿಯಿಂದ ಸಿದ್ದರಾಮಯ್ಯರನ್ನ ಕೆಳಗಿಳಿಸುವ ಗ್ಯಾಂಗ್ ಕಾಂಗ್ರೆಸ್ ನಲ್ಲೇ ಇದೆ ಎಂದು ವಿಪಕ್ಷ ನಾಯಕ  ಆರ್.ಅಶೋಕ್ ಟಾಂಗ್ ನೀಡಿದರು.

ಇಂದು ಮಾತನಾಡಿದ ಆರ್.ಅಶೋಕ್, ಕರ್ನಾಟಕದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹುದ್ದೆಯಿಂದ ಕೆಳಗೆ ಇಳಿಸಲು ಸಂಚು ಹೂಡುವ ಗ್ಯಾಂಗ್ ಕಾಂಗ್ರೆಸ್ ಪಕ್ಷದಲ್ಲೇ ಇದೆ. ರಾಜ್ಯದಲ್ಲಿರುವುದು ಕಾಂಗ್ರೆಸ್ ಪಕ್ಷದ ನಾಲಾಯಕ್ ಸರ್ಕಾರ. ಇದು ಜನರಿಗೆ ದ್ರೋಹ ಮಾಡಿದಂಥ ಸರ್ಕಾರ. ಮೇಕೆದಾಟು ವಿಚಾರದಲ್ಲಿ ದ್ವಂದ್ವ ನೀಲು ಪ್ರದರ್ಶಿಸಿದ ಸರ್ಕಾರ ಇಲ್ಲಿದೆ. ಈ ಸರ್ಕಾರ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿಲ್ಲ. ಜನ ಕುಡಿಯುವ ನೀರಿಗೆ ಒದ್ದಾಡುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಈ ಭ್ರಷ್ಟ ಸರ್ಕಾರಕ್ಕೆ ಜನ ಬೆಂಬಲ ನೀಡಲ್ಲ. ಬದಲಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂದು  ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ ಕಾಂಗ್ರೆಸ್ ಪಕ್ಷದ ಸ್ಥಿತಿಯ ಬಗ್ಗೆ ಈಗಾಗಲೇ ಹೇಳಿದ್ದಾರೆ. ರಾಜ್ಯದಲ್ಲಿ ಸೂಪರ್ ಸಿಎಂ, ಶಾಡೋ ಸಿಎಂ ಬಹಳಷ್ಟು ಮಂದಿ ಇದ್ದಾರೆ. ಬಿಕೆ ಹರಿಪ್ರಸಾದ್ ಕೂಡ ಮಸಾಲತ್ತು ಮಾಡುತ್ತಿದ್ದಾರೆ. ಸಿಎಂ ಬದಲಾವಣೆ ಬಗ್ಗೆ  ಗುಬ್ಬಿ ಶಾಸಕ ಶ್ರೀನಿವಾಸ್ ನಿಜ ಹೇಳಿದ್ದಾರೆ ಎಂದು ಆರ್ ಅಶೋಕ್ ತಿಳಿಸಿದರು.

Key words:  gang – remove- Siddaramaiah – CM –post- Congress – R. Ashok