ಐಐಟಿ ಮಾದರಿಯಲ್ಲಿ ಯುವಿಸಿಇ ಅಭಿವದ್ಧಿ – ಡಿಸಿಎಂ ಡಾ. ಅಶ್ವತ್ಥನಾರಾಯಣ್ ಹೇಳಿಕೆ…

ಬೆಂಗಳೂರು,ಫೆ,7,2020(www.justkannada.in):  ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಹೆಸರಿಗೆ ಗೌರವ ತರುವ ರೀತಿಯಲ್ಲಿ ಅವರ ಹೆಸರಿರುವ ತಾಂತ್ರಿಕ ವಿಶ್ವವಿದ್ಯಾಲಯವನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ್  ತಿಳಿಸಿದ್ದಾರೆ.

ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜನಿಯರಿಂಗ್‌ ಕಾಲೇಜು (ಯುವಿಸಿಇ) ಕ್ಕೆ ಭೇಟಿ ನೀಡಿದ ನಂತರ  ಮಾತನಾಡಿದ ಡಿಸಿಎಂ ಡಾ. ಅಶ್ವತ್ಥನಾರಾಯಣ್, “ನಾಡಿಗೆ ಶ್ರೇಷ್ಠ ಎಂಜನಿಯರ್‌ಗಳನ್ನು ಕೊಟ್ಟಿರುವ 107 ವರ್ಷಗಳ ಇತಿಹಾಸ ಇರುವ ಯುವಿಸಿಇಯ ಪುನಾರಚನೆಗೆ ಸರ್ಕಾರ  25 ಕೋಟಿ ರೂ. ಹಂಚಿಕೆ ಮಾಡಿದ್ದು, ಈಗಾಗಲೇ 15 ಕೋಟಿ ರೂ. ಬಿಡುಗಡೆ ಮಾಡಿದೆ. ಉಳಿದ 10 ಕೋಟಿ ರೂ.ಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು. ಇದಲ್ಲದೇ,  ಏರೋನಾಟಿಕಲ್ ಹಾಗೂ ಸ್ಪೇಸ್ ಎಂಜಿನಿಯರಿಂಗ್ ಕಾರ್ಯಕ್ರಮಗಳನ್ನು ಆರಂಭಿಸಲು ಸಂಸ್ಥೆ ಉದ್ದೇಶಿಸಿದೆ,”ಎಂದು ಸಚಿವರು ತಿಳಿಸಿದರು.

“ವಿಶ್ವೇಶ್ವರಯ್ಯಅವರ ಹೆಸರಿಗೆ ಗೌರವ ತರುವ ರೀತಿಯಲ್ಲಿ  ಸಂಸ್ಥೆಯ ಗುಣಮಟ್ಟ ಹೆಚ್ಚಿಸಿ, ಮೇಲ್ದರ್ಜೆಗೆ ಏರಿಸಬೇಕು. ಈ  ಮೂಲಕ ನಾಡಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುವುದು ನಮ್ಮ ಗುರಿ.  ಬೆಂಗಳೂರಿನಲ್ಲಿ ಐಐಟಿ ಮಾದರಿಯ ಸಂಸ್ಥೆಯ ಕೊರೆತೆಯನ್ನು ನೀಗಿಸಲು ಅದಕ್ಕಿಂತಲೂ ಶ್ರೇಷ್ಠ ಗುಣಮಟ್ಟದ  ಸಂಸ್ಥೆಯನ್ನು ರೂಪಿಸಲಾಗುವುದು,”ಎಂದು ತಿಳಿಸಿದರು.

“ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜನಿಯರಿಂಗ್‌ ಕಾಲೇಜು (ಯುವಿಸಿಇ)ಯನ್ನು ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ನಡುವೆ ವಿಭಜಿಸಿದ ನಂತರ ಉದ್ಭವವಾಗಿದ್ದ ಸಮಸ್ಯೆಗೆ ರಂಗನಾಥ ಸಮಿತಿಯ ವರದಿ ಪರಿಹಾರ ಸೂಚಿಸಿದೆ.  ಈ ಸಮಿತಿಯ ಶಿಫಾರಸು ಹಾಗೂ  ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಲಹೆಯನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.  ವಿಶ್ವವಿದ್ಯಾಲಯದ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಸಹಕಾರ ನೀಡಲು ಹಳೆ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದಾರೆ,”ಎಂದು  ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

“ತಾಂತ್ರಿಕ ವಿಶ್ವವಿದ್ಯಾಲಯಗಳ ಹಲವು ಮಾದರಿಗಳು ನಮ್ಮ ಮುಂದಿವೆ. ಎಲ್ಲ ಮಾದರಿಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲೂ ತಪ್ಪಾಗದಂತೆ ಸರಿಯಾದ ನಿರ್ಧಾರ ಕೈಗೊಂಡು ಯುವಿಸಿಇಯನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಐಐಟಿ ಪ್ರಚಲಿತವಾಗಿರುವ ಕಾರಣಕ್ಕೆ ಅದರ ಉದಾಹರಣೆ ನೀಡಲಾಗಿದೆ ಅಷ್ಟೇ.  ಐಐಟಿಗಿಂತಲೂ ಉತ್ತಮವಾದ ಸಂಸ್ಥೆ ಕಟ್ಟುವುದು ನಮ್ಮ ಉದ್ದೇಶ. ಪ್ರಪಂಚಕ್ಕೆ ಮಾದರಿಯಾಗಬಲ್ಲ ಜ್ಞಾನಿಗಳು ನಮ್ಮ ನಾಡಿನಲ್ಲಿದ್ದಾರೆ, ಅವರ ಜತೆ ಸಮಾಲೋಚನೆ ನಡೆಸಿ ಉತ್ತಮ ನಿರ್ಣಯ ಕೈಗೊಳ್ಳಲಾಗುವುದು,”ಎಂದು ಡಿಸಿಎಂ ಅಶ್ವಥ್ ನಾರಾಯಣ್ ವಿವರಿಸಿದರು.

Key words: UVCE- development – IIT –model-DCM- Dr. Ashwath narayan.