ಸ್ಪರ್ಧಾತ್ಮಕ ಪರೀಕ್ಷೆಗೆ ಗುರಿಪೂರಿತ ತಯಾರಿ ಮುಖ್ಯ- ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಎ.ಸಿ ಲಕ್ಷ್ಮಣ

ಮಂಡ್ಯ,ಡಿಸೆಂಬರ್,26,2022(www.justkannada.in):  ಎಲ್ಲರೂ ಐಎಎಸ್ ಅಧಿಕಾರಿಯಾಗುತ್ತೇನೆ ಎಂಬ ಕನಸನ್ನಿಟ್ಟುಕೊಂಡೇ ಓದಿರಿ. ಹಾಗೆಂದು ಎಲ್ಲರಿಗೂ ಅವಕಾಶವೂ ಸಿಗುವುದಿಲ್ಲ. ಸಿಕ್ಕ ಉದ್ಯೋಗದಲ್ಲೇ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಅರಣ್ಯ ಇಲಾಖೆ ನಿವೃತ್ತ ‌ಕಾರ್ಯದರ್ಶಿ ಎ.ಸಿ.ಲಕ್ಷ್ಮಣ ಕಿವಿಮಾತು ಹೇಳಿದರು.

ಮಂಡ್ಯದಲ್ಲಿ ಕೃಷಿಕ್ ಸರ್ವೋದಯ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಉತ್ತೇಜನ ತುಂಬಿದರು.

ಪದವಿ ಹಂತದಲ್ಲಿ ಇರುವಾಗಲೇ ಬಹುತೇಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗುವುದು ಒಳ್ಳೆಯ ಬೆಳವಣಿಗೆ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರು ಬಹುತೇಕರು ಐಎಎಸ್ ಅಧಿಕಾರಿ ಆಗಬೇಕು ಎನ್ನುವ ಕನಸು, ಗುರಿ ಇಟ್ಟುಕೊಂಡಿರುತ್ತೀರಿ. ಇದೇ ಉತ್ಸಾಹದಲ್ಲಿ ತಯಾರಿಯನ್ನೂ ಮಾಡಿ ಐಎಎಸ್ ಅಲ್ಲದೇ ಇದ್ದೂ ಒಂದಿಲ್ಲೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತೀರಿ. ಎಲ್ಲರೂ ಐಎಎಸ್ ಅಧಿಕಾರಿಗಳು ಆಗಲು ಆಗುವುದಿಲ್ಲ. ಹಾಗೆಂದು ಸಿಕ್ಕ ಉದ್ಯೋಗದಲ್ಲಿ ಪ್ರಾಮಾಣಿಕವಾಗಿ ಜನಮುಖಿಯಾಗಿ ಕೆಲಸ ಮಾಡುವುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.

ತಯಾರಿ ಮಾಡುವಾಗಲೇ ಗುರಿ ಸ್ಪಷ್ಟವಾಗಿರಲಿ. ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಸಿಗುವುದಿಲ್ಲ ಎಂಬುದೂ ತಿಳಿದಿರಲಿ. ಹಾಗೆಂದು ನಿರಾಶರಾಗುವುದು ಬೇಡ. ಒಂದರಲ್ಲಿ ಹಿನ್ನಡೆಯಾದರೂ ಇನ್ನೂ ಒಂಬತ್ತು ಮಾರ್ಗಗಳನ್ನು ನೀವು ಯೋಜಿಸಿಕೊಂಡಿರಬೇಕು. ಈ ಆತ್ಮ ವಿಶ್ವಾಸವೇ ನಿಮ್ಮನ್ನು ಬದುಕಿನಲ್ಲಿ ಮುಂದೆ ತೆಗೆದುಕೊಂಡು ಹೋಗುತ್ತದೆ ಎಂದು ನುಡಿದರು.

60ರ ದಶಕದಲ್ಲಿ ಅಂದರೆ 62 ವರ್ಷದ ಹಿಂದೆ ನಾನೂ ನಿಮ್ಮ ಹಾಗೆಯೇ ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಯಾಗುತ್ತಿದ್ದೆ. ಐಎಫ್‌ ಎಸ್ ಅಧಿಕಾರಿಯಾಗಿ ಉತ್ತೀರ್ಣನಾಗಿ ಮೂರೂವರೆ ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡುವ ಅವಕಾಶ ಸಿಕ್ಕಿತು. ಏನೇ ಮಾಡಿದಾಗ ನಾನೂ ಕೊಡುವೆ. ನಿನ್ನ ಭಾಗವೂ ಇರಲಿ ಎಂದು ಹೇಳಿದಾಗ ಸೋರಿಕೆ ತಪ್ಪುತ್ತದೆ. ಇದರಲ್ಲಿ ನನ್ನ ಬೆವರೂ ಇದೆ ಎಂದಾಗ ಪ್ರಾಮಾಣಿಕತೆಯೂ ಬೆಳೆಯುತ್ತದೆ. ಇದನ್ನು ಪ್ರತಿಯೊಬ್ಬರೂ ಉದ್ಯೋಗ ಮಾಡುವಾಗ ರೂಢಿಸಿಕೊಳ್ಳಬೇಕು ಎಂದು ಸೂಚಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಮಂಗಲ ತಿಮ್ಮೇಗೌಡ, ನಿವೃತ್ತ ಐಎಫ್‌ಎಸ್ ಅಧಿಕಾರಿ ಎ.ಎಂ.ಅಣ್ಣಯ್ಯ, ಮಂಡ್ಯ ಜಿಲ್ಲೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು,  ಕೆನರಾ ಬ್ಯಾಂಕ್ ನಿವೃತ್ತ ಡಿಜಿಎಂ ಎಸ್.ಟಿ.ರಾಮಚಂದ್ರ, ಮೈಸೂರು ಮಹಾರಾಣಿ ಕಾಲೇಜು ಪ್ರಾಧ್ಯಾಪಕ ಡಾ.ಹೇಮಚಂದ್ರ ಮತ್ತಿತರರು ಹಾಜರಿದ್ದರು.

ಮಂಡ್ಯ ಹಾಗೂ ಸುತ್ತಮುತ್ತಲಿನ ಪ್ರದೇಶದ ವಿವಿಧ ಕಾಲೇಜುಗಳ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡರು. ತಜ್ಞರ ಉಪನ್ಯಾಸಗಳನ್ನು ಆಲಿಸಿ ಸಂವಾದದಲ್ಲೂ ಭಾಗಿಯಾದರು.

Key words: Targeted -preparation – important – competitive exams-A.C. Lakshmana-mandya