ರಾಜ್ಯಪಾಲರಿಗೆ ದೂರಿನ ಬಗ್ಗೆ ಸಿದ್ಧರಾಮಯ್ಯ ವಿರುದ್ದ ಕಿಡಿ: ಅನರ್ಹ ಶಾಸಕರಿಗೆ ಟಿಕೆಟ್ ಕೊಡುತ್ತೇನೆ ಎಂದು ನಾನು ಹೇಳಿಲ್ಲ – ಸಿಎಂ ಬಿಎಸ್ ಯಡಿಯೂರಪ್ಪ…

ಬೆಂಗಳೂರು,ನ,3,2019(www.justkannada.in): ನಮಗೂ ಅನರ್ಹ ಶಾಸಕರಿಗೂ ಸಂಬಂಧ ಇಲ್ಲ. ನಾನು ಹೇಳಿರೋದನ್ನ ತಿರುಚಿದ್ದಾರೆ. ಅನರ್ಹ ಶಾಸಕರಿಗೆ ಟಿಕೆಟ್ ನೀಡುತ್ತೇನೆ ಎಂದು ನಾನು ಹೇಳಿಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಅಪರೇಷನ್ ಕಮಲದ ಬಗೆಗಿನ ಆಡಿಯೋ ಲೀಕ್ ಬಗ್ಗೆ ಕಾಂಗ್ರೆಸ್ ರಾಜ್ಯಪಾಲರಿಗೆ ದೂರು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ,  ಸಿದ್ಧರಾಮಯ್ಯಗೆ ಕಾಮನ್ ಸೆನ್ಸ್ ಇದೆಯಾ..ಅವರಿಗೆ ವಾಸ್ತವಿಕ ಪ್ರಜ್ಞೆ ಇಲ್ಲ. ಅನರ್ಹ ಶಾಸಕರ ಬಗ್ಗೆ ಮಾತನಾಡಿದ್ದು ನಿಜ. ಅನರ್ಹ ಶಾಸಕರು ಮುಂಬೈ ಸುತ್ತಿದ್ದು ದೇಶಕ್ಕೆ ಗೊತ್ತಿದೆ. ಅದಕ್ಕೂ ಅಮಿತ್ ಶಾಗೂ ಏನು ಸಂಬಂಧ. ಅಮಿತ್ ಶಾ ಏಕೆ ರಾಜೀನಾಮೆ ಕೊಡಬೇಕು. ಸಿದ್ಧರಾಮಯ್ಯ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಹರಿಹಾಯ್ದರು.

ಅನರ್ಹ ಶಾಸಕರು ತಮ್ಮದೇ ಆದ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮುಂದೆ ಏನು ಮಾಡಬೇಕು ಅಂತಾ ಅವರೇ ನಿರ್ಧಾರ ಮಾಡ್ತಾರೆ. ನಾನು ಅನರ್ಹ ಶಾಸಕರಿಗೆ ಟಿಕೆಟ್ ಕೊಡ್ತೀನಿ ಎಂದು ಎಲ್ಲೂ ಹೇಳಿಲ್ಲ. ಕಾಂಗ್ರೆಸ್ ನವರದ್ದು ಹುಚ್ಚುತನದ ಪರಮಾವಧಿ ಎಂದು ಸಿಎಂ ಬಿಎಸ್ ವೈ ಕಿಡಿಕಾರಿದರು.

Key words: Siddaramaiah -tickets –disqualified MLA-CM BS Yeddyurappa – Complaint