‘ಬಲವಂತವಾಗಿ ಎತ್ತಾಕೊಂಡು ಬರಬೇಕಾಗುತ್ತೆ’- ಸಂಸದ ಪ್ರತಾಪ್ ಸಿಂಹ ಹೀಗೆ ಹೇಳಿದ್ದು ಯಾರಿಗೆ ಗೊತ್ತಾ?

ಮೈಸೂರು,ಮೇ,27,2021(www.justkannada.in): ಪಾಸಿಟಿವ್ ಬಂದ ಮೇಲೆ ಕಡ್ಡಾಯವಾಗಿ ಕೋವಿಡ್ ಸೆಂಟರ್ ಗೆ ಬರಬೇಕು: ಬರದೆ ಇದ್ದರೆ ಬಲವಂತವಾಗಿ ಎತ್ತಾಕೊಂಡು ಬರಬೇಕಾಗುತ್ತದೆ ಎಂದು ಮೈಸೂರು –ಕೊಡಗು ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದರು.jk

ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಂಸದ ಪ್ರತಾಪ್‌ಸಿಂಹ , ಹೋಂ ಐಸೋಲೇಷನ್ ಅನ್ನ ಕಡ್ಡಾಯವಾಗಿ ರದ್ದು ಮಾಡುತ್ತೇವೆ. ಯಾರೇ ಆಗಲಿ ಕೊರೋನಾ ಪಾಸಿಟಿವ್ ಬಂದ ಮೇಲೆ ಆಸ್ಪತ್ರೆ ಅಥವಾ ಕೋವಿಡ್ ಸೆಂಟರ್ ಬರಬೇಕು. ಇನ್ನ ಮೇಲೆ ಯಾರು ಸಬೂಬು ಹೇಳುವಂತಿಲ್ಲ ಎಂದರು.

ಕೊರೊನಾ ನಿಯಂತ್ರಣಕ್ಕಾಗಿ ಟಾಸ್ಕ್ ಫೋರ್ಸ್ ರಚನೆ ಕಾನೂನು ಬಾಹಿರ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಇದು ಜನಪ್ರತಿನಿಧಿಗಳಿಗೆ ಟಿಎಡಿಎ, ಕಾರು ಕೊಡುವಂತಹ ಹುದ್ದೆಯಲ್ಲ. ಇದು ಕೊರೊನಾ ನಿಯಂತ್ರಿಸುವ ಸಲುವಾಗಿ ನಾವೇ ಸೇವೆ ಸಲ್ಲಿಸಲು ಮಾಡಿಕೊಂಡಿರುವ ಟಾಸ್ಕ್. ಆಡಳಿತದಲ್ಲಿ ವೈಫಲ್ಯ ಕಂಡಾಗ ನಾವು ತೆಗೆದುಕೊಂಡಿರುವ ನಿರ್ಧಾರ ಇದು. ಜನ ಪ್ರತಿನಿಧಿಗಳು ಜನರಿಗಾಗಿ ದುಡಿಯುವ ಕೆಲಸ ಮಾಡಬೇಕಿದೆ. ಇದಕ್ಕೆ ಸಂಘಸಂಸ್ಥೆಗಳ ಸಹಕಾರ ಇದೆ. ಇದು ನಮ್ಮ ಜವಾಬ್ದಾರಿ ಅಷ್ಟೇ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಆ ಕಾರಣಕ್ಕೆ ನಾವೇ ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಕೊರೊನಾಗೆ ಕಡಿವಾಣ ಹಾಕಲು, ಜಿಲ್ಲಾಡಳಿತಕ್ಕೆ ಸಹಕರಿಸುತ್ತಿದ್ದೇವೆ. ಇದನ್ನ ಆರೋಪ ಮಾಡೋದಲ್ಲ, ಸಹಕಾರ ನೀಡಿ. ನಮ್ಮ ಜನರ ಉಳಿವಿಗಾಗಿ ನಾವೇ ಸೇವೆ ಸಲ್ಲಿಸಲು ಮುಂದಾಗಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಪಿಎಂ ಕೇರ್‌ನಿಂದ ಮೈಸೂರಿಗೆ ಆಕ್ಸಿಜನ್ ಜನರೇಟ್ ಯೂನಿಟ್…

ಪಿಎಂ ಕೇರ್‌ನಿಂದ ಮೈಸೂರಿಗೆ ಆಕ್ಸಿಜನ್ ಜನರೇಟ್ ಯೂನಿಟ್ ಸಿಗಲಿದೆ. ನಿಮಿಷಕ್ಕೆ 1000KL ಆಕ್ಸಿಜನ್ ಉತ್ಪಾದಿಸುವ ಯೂನಿಟ್ ಇದಾಗಿದ್ದು, ಅದನ್ನ ಕೆ.ಆರ್.ಆಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಲಾಗುವುದು. ಇದಲ್ಲದೆ ಮುಡಾದಿಂದ ತುಳಿಸಿ ದಾಸಪ್ಪ‌ ಆಸ್ಪತ್ರೆಗೂ ಆಕ್ಸಿಜನ್ ಜನರೇಟರ್ ಯೂನಿಟ್ ಸಿಗಲಿದೆ. ಇನ್ನೊಂದು ತಿಂಗಳಲ್ಲಿ ಮೈಸೂರಿನ ಎಲ್ಲ ತಾಲೂಕಿನಲ್ಲು ಆಕ್ಸಿಜನ್ ಜನರೇಟರ್ ಯೂನಿಟ್ ಅಳವಡಿಸಲಾಗುವುದು. ಹೀಗಾಗಿ ಮುಂದಿನ ತಿಂಗಳ ಹೊತ್ತಿಗೆ‌ ಮೈಸೂರಿನಲ್ಲಿ ಆಕ್ಸಿಜನ್ ಸಮಸ್ಯೆ ಇರುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಟೆಸ್ಟಿಂಗ್ ಕಡಿಮೆ ಮಾಡಿದ್ದು ಸೋಂಕು‌ ಹರಡಲು ಕಾರಣ ಆಯ್ತು.

ಕೋವಿಡ್ ಟೆಸ್ಟಿಂಗ್ ಕಡಿಮೆ ಮಾಡಿದ್ದು ಸೋಂಕು‌ ಹರಡಲು ಕಾರಣವಾಯಿತು. ಇದನ್ನ‌ ಮುಕ್ತವಾಗಿ ನಾನು‌ ಒಪ್ಪಿಕೊಳ್ಳುತ್ತೇನೆ. ನಾವು ಟೆಸ್ಟ್ ಕಡಿಮೆ ಮಾಡಬಾರದಿತ್ತು. ಇದು ಸ್ವಲ್ಪ ಸೋಂಕು ಹೆಚ್ಚಾಗಲು ಕಾರಣ  ಆಯ್ತು. ನಮ್ಮ ಹಾಗೂ ಜನರ ನಿರ್ಲಕ್ಷ್ಯದಿಂದ ಇದು ನಡೆದಿದೆ. ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಹರಡಿಬಿಟ್ಟಿದೆ. ಇದಕ್ಕೆ ಕೋವಿಡ್‌ ಮಿತ್ರ ಮೂಲಕ ಪರಿಹಾರ ಹುಡುಕಿದ್ದೇವೆ. ವಾಕ್ಸಿನೆಷನ್ ಬಗ್ಗೆ ಕೂಡ ಜನರಲ್ಲಿ‌ ಗೊಂದಲ ಇತ್ತು. ಇದೇಲ್ಲದರ ಪರಿಣಾಮ ಹಿಂದಿನ ಲಾಕ್‌ಡೌನ್‌ನಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ನಾವು ಪಂಚಸೂತ್ರ ಯೋಜನೆ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ನಿಯಂತ್ರಣ ಮಾಡಲು ಮುಂದಾಗಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

Key words: Positive-  come –covid Center – Compulsory-MP Pratap simha