‘ಹಳ್ಳಿಹಕ್ಕಿ’ಗೆ ಪರೋಕ್ಷ ಟಾಂಗ್: ಡಿ.ಕೆ ಶಿವಕುಮಾರ್ ಬಂಧನ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಚಿವ ಸಾ.ರಾ ಮಹೇಶ್…

ಮೈಸೂರು,ಸೆ,4,2019(www.justkannada.in): ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು ಕಾಂಗ್ರೆಸ್  ನಾಯಕರು ಕೇಂದ್ರ ಸರ್ಕಾರದ ವಿರುದ್ದ ಮುಗಿಬಿದ್ದಿದ್ದಾರೆ. ಈ ನಡುವೆ ಮಾಜಿ ಸಚಿವ ಜೆಡಿಎಸ್ ಮುಖಂಡ ಸಾ.ರಾ ಮಹೇಶ್ ಸಹ ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನ ತೀವ್ರ ಟೀಕೆ ಮಾಡಿದ್ದಾರೆ.

ಇಡೀ ದೇಶದಲ್ಲಿ ಎಲ್ಲಾ ವಿರೋಧ ಪಕ್ಷಗಳನ್ನು ದಮನ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದಕ್ಕಾಗಿ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಹೆಸರು ಮಾಡಿರುವ ನಾಯಕನನ್ನು ಮಾನಸಿಕವಾಗಿ ದುರ್ಬಲ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಮಾಜಿ ಸಚಿವ ಸಾ.ರಾ ಮಹೇಶ್ ಕಿಡಿಕಾರಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾ.ರಾ ಮಹೇಶ್,  ಕಾಂಗ್ರೆಸ್ ನ ಪ್ರಭಾವಿ ನಾಯಕ ಡಿಕೆಶಿ ಈ ಹಿಂದೆ ಗುಜರಾತ್ ನ ಶಾಸಕರನ್ನು ಹಿಡಿದಿಟ್ಟುಕೊಂಡಿದ್ದಕ್ಕೆ ಹೀಗಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ರಾಜಕಾರಣ ದಲ್ಲಿ ವಿರೋಧ ಪಕ್ಷ ಆಡಳಿತ ಪಕ್ಷ ಸಹಜ. ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಂತಹ ನಂತರ ಇಡೀ ದೇಶದಲ್ಲಿ ಯಾವುದೇ ವಿರೋಧ ಪಕ್ಷ ಇರಬಾರದು ಎಂದು ಸಾಂವಿಧಾನಿಕ ಸಂಸ್ಥೆಗಳನ್ನ  ಬಳಸಿಕೊಂಡು ಕೆಲಸ ಮಾಡುತ್ತಿದೆ.  ಎಲ್ಲರಿಗೂ ಧಾರ್ಮಿಕ ಭಾವನೆಗಳಿರುತ್ತದೆ. ದೇಶದಲ್ಲಿ ಚಿದಂಬರಂ ನಂತರ ರಾಜ್ಯದ ಪ್ರಭಾವಿ ರಾಜಕಾರಣಿಯನ್ನ ಮಟ್ಟ ಹಾಕುವ ಕೆಲಸ ಮಾಡ್ತಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ  ಗೌರಿ ಗಣೇಶ ಹಬ್ಬಕ್ಕೆ  ಒಬ್ಬ ರಾಜಕೀಯ ಪಕ್ಷದ ನಾಯಕನನ್ನ  ಬಿಡದೆ ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದರು.

ಅನರ್ಹ ಶಾಸಕ ಹೆಚ್.ವಿಶ್ವನಾಥ್ ಗೆ ಪರೋಕ್ಷ ಟಾಂಗ್…

ಪ್ರಧಾನಿಗಳು ಭ್ರಷ್ಟಾಚಾರವನ್ನ  ನಿರ್ನಾಮ ಮಾಡುವ ಗುರಿ ಇದ್ರೆ ಸ್ವಾಗತ ಆದರೆ ಇತ್ತೀಚಿನ  ದಿನಗಳಲ್ಲಿ ನಿಮ್ಮ  ಪಕ್ಷದ ನಾಯಕ್ರು ನಮ್ಮ ಶಾಸಕನ್ನ  ಕರೆದೊಯ್ದಿದ್ದಾಗ ನಿಮ್ಮ ಇಡಿ ಅಧಿಕಾರಿಗಳು  ಎಲ್ಲಿ ಹೋಗಿದ್ರು. ಆಗ ಇಡಿ ಅಧಿಕಾರಿಗಳು ದೇಶದಲ್ಲಿ ಇರಲಿಲ್ವಾ..??  ಎಂದು ಸಾ.ರಾ ಮಹೇಶ್ ಪ್ರಶ್ನಿಸಿದರು.

ಆಪರೇಷನ್  ಕಮಲಕ್ಕೆ  ಬಂದಂತಹ  ಹಣ ಯಾವುದು. ಮೂಲ ಹಣ ಯಾವುದು  ತನಿಖೆ ನಡೆಸಲಿ. ನಾವು  ಸೇಡಿನ ರಾಜಕಾರಣ ಮಾಡಬಾರದು. ನೀವು ಭ್ರಷ್ಟಾಚಾರ  ಪೋಷಿಸುತ್ತಿರೋ ಅಥವಾ ಭ್ರಷ್ಟಾಚಾರ ನಿಗ್ರಹ ಮಾಡ್ತೀರೋ ..? ಆಪರೇಷನ್ ಕಮಲ  ಕುರಿತು ಪ್ರಾರಂಭದಿಂದಲೂ ತನಿಖೆ ಆಗ್ಬೇಕು. ಹುಣಸೂರು, ಕೆ. ಆರ್ ನಗರ  ಬೆಳಗಾವಿ, ಶಿವಮೊಗ್ಗ,  ಮುಂಬೈ ಬೆಂಗಳೂರು ಇಲ್ಲೆಲ್ಲೆ ನಡೆದ ಫೋನ್  ಸಂಭಾಷಣೆ ಗಳೆಲ್ಲದರ ಬಗ್ಗೆ ತನಿಖೆ ಮಾಡಲಿ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಗೆ ಸಾ.ರಾ ಮಹೇಶ್ ಪರೋಕ್ಷ ಟಾಂಗ್ ನೀಡಿದರು.

ರಾಜ್ಯದಲ್ಲಿ ಉಪಯೋಗವಾದ ಹಣ. ಎಲ್ಲಿಂದ ಬಂತು ಯಾರಿಂದ ಬಂತು ತನಿಖೆ ಮಾಡಬಹುದಿತ್ತು. ಕುಮಾರಸ್ವಾಮಿ ಅವಧಿಯಲ್ಲಿ  ಟೆಲಿಫೋನ್ ಕದ್ದಾಲಿಕೆ ಕುರಿತು ಸಿಬಿಐ  ವಹಿಸಿದ್ರಿ. ಆದರೆ  ಟೆಲಿಫೋನ್ ನಲ್ಲಿರುವ ವಿಷಯದ ಬಗ್ಗೆಯೂ ತನಿಖೆ ಆಗಬೇಕಿದೆ. ಈ ಪ್ರಕರಣವನ್ನು ಸಿಬಿಐಗೆ ನೀಡಿ.ಆಪರೇಷನ್ ಕಮಲ ಯಾರ್ ಯಾರು  ಎಷ್ಟು ಕೊಟ್ಟಿದ್ದಾರೆ ಎಲ್ಲವು ಹೊರ ಬರಲಿ. ಹೀಗಾಗಿ  ಕೇಂದ್ರ ಸರ್ಕಾರ ಈ ವಿಷಯ ಕುರಿತು ತನಿಖೆ ಮಾಡಿಸಲಿ ಎಂದು ಸಾ.ರಾ ಮಹೇಶ್ ಆಗ್ರಹಿಸಿದರು.

ಡಿ.ಕೆ ಶಿವಕುಮಾರ್ ಅವರನ್ನ ಬೆಂಬಲಿಸುತ್ತೇವೆ. ಪಕ್ಷ ಬೇರೆ ಇದ್ದರೂ  ಬೆಂಬಲಿಸುತ್ತೇವೆ. ಡಿಕೆಶಿ ವಿಚಾರದಲ್ಲಿ ಸಹಕಾರ ನೀಡಲು ಮುಂದಾಗಿದ್ದೇವೆ. ವಿರೋಧ ಪಕ್ಷದಲ್ಲಿ ಕುಳಿತು ಹೊರಟ ಮಾಡ್ತೇವೆ ಎಂದು ಸಾ,ರಾ ಮಹೇಶ್ ತಿಳಿಸಿದರು.

ದಸರಾ ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಸ್ಪಷ್ಟನೆ ನೀಡಿದ ಸಾ.ರಾ ಮಹೇಶ್…

ದಸರಾ ಸಭೆಗಳಿಗೆ ಪಾಲ್ಗೊಳ್ಳುವಂತೆ ವಿ. ಸೋಮಣ್ಣ  ನನಗೂ ಫೋನ್ ಮಾಡಿದ್ರು. ಇದು ನಾಡ ಹಬ್ಬ  ನಮ್ಮೆಲ್ಲರ ಸಹಕಾರ ಇದೆ.ಜನರ ಸಂಪೂರ್ಣ ಆಶೀರ್ವಾದದಿಂದ ಆಡಳಿತಕ್ಕೆ ಬಂದು  ದಸರಾ ಆಚರಣೆ ಮಾಡಿದ್ರೆ  ಖಂಡಿತ ಬೆಂಬಲ ನೀಡ್ತಿದ್ವಿ. ಇಂದು ನಾವು ಕುಳಿತು ದಸರಾ ಮಾಡಬೇಕಿತ್ತು ಅಂತದರಲ್ಲಿ  ನಮ್ಮ ಶಾಸಕರನ್ನ ಸೆಳೆದು ಸರ್ಕಾರ ರಚಿಸಿದವರು ದಸರಾ  ಮಾಡ್ತಿದ್ದಾರೆ,  ಅಂತವರ  ಪಕ್ಕ ಹೇಗೆ ಕುಳಿತುಕೊಳ್ಳೋದು..? ಎಂದು ಸಾ.ರಾ ಮಹೇಶ್ ಪ್ರಶ್ನಿಸಿದರು.

ಇದೊಂದೇ ವಿಷಯಕ್ಕೆ  ನಾವು ಪಾಲ್ಗೊಳ್ಳುತ್ತಿಲ್ಲ. ನಿಮ್ಮ ಜೊತಗೆ ಹೇಗೆ ಕುಳಿತು ಸಭೆ ನಡೆಸೋದು ಎಂದು ಬಿಜೆಪಿ ನಾಯಕರಿಗೆ ಪ್ರಶ್ನಿಸಿದ ಅವರು, ದಸರಾಗೆ  ನಮ್ಮಿಂದ ಏನು ತೊಂದರೆ ಆಗಲ್ಲ,  ನಾಡ ಹಬ್ಬ ಸುತುತ್ರವಾಗಿ ನಡೆಯಬೇಕು. ನಾವು ಯಾವುದೇ ಅಡ್ಡಿ ಪಡಿಸಲ್ಲ. ಇದು ಮೈಸೂರು ಭಾಗದಲ್ಲಿ  ನಾನು ತೆಗೆದುಕೊಂಡಿರೋ ತೀರ್ಮಾನ ಅಷ್ಟೇ ಎಂದರು.

ಮಾಜಿ ಸಚಿವ ಜಿ.ಟಿ ದೇವೇಗೌಡರು  ದಸರಾ ಸಭೆ,  ಕಾರ್ಯಕ್ರಮದಲ್ಲಿ  ಪಾಲ್ಗೊಳ್ಳುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ಜಿಟಿಡಿ ನಮ್ಮೆಲ್ಲರ ನಾಯಕ,  ಸದ್ಯ ಈ ವಿಚಾರದಲ್ಲಿ ಅವರ ಜೊತೆ ನಾನು  ಮಾತನಾಡಿಲ್ಲ. ಕಳೆದ ನಾಲ್ಕೈದು ದಿನಗಳಿಂದ ನಂಗೆ ಕರೆ ಮಾಡಲು  ಸಾಧ್ಯವಾಗಿಲ್ಲ. ಈ ಬಗ್ಗೆ  ಅವರನ್ನೇ ಕೇಳಿ ನಿಮಗೆ  ಹೇಳ್ತೀನಿ. ಇದು ಕೇವಲ ನನ್ನ ಅಭಿಪ್ರಾಯ ಅಷ್ಟೇ ಎಂದರು.

Key words: mysore-Former minister- Sa rA Mahesh – Center – state government – arrest – DK Sivakumar.