ಮೈಸೂರು ದಸರಾ: ಅಭಿಮನ್ಯು ಅಂಡ್ ಟೀಂಗೆ ಭಾರ ಹೊರಿಸಿ ತಾಲೀಮು.

ಮೈಸೂರು,ಸೆಪ್ಟಂಬರ್,20,2021(www.justkannada.in): ವಿಶ್ವ ವಿಖ್ಯಾತ  ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳಿಗೆ ಇಂದು ತಾಲೀಮು ನಡೆಸಲಾಯಿತು.

ದಸರಾ ಗಜಪಡೆಗೆ ಭಾರ ಹೊರಿಸುವ ತಾಲೀಮು ಆರಂಭವಾಗಿದ್ದು, ಅರಮನೆಯಂಗಳದಲ್ಲಿ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಬಳಿಕ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳಿಗೆ  ಮರಳಿನ ಮೂಟೆ ಹೊರಿಸಿ ಅಭ್ಯಾಸ ನಡೆಸಲಾಯಿತು.

ಅಭಿಮನ್ಯು, ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ ವಿಕ್ರಮ ಆನೆಗಳಿಗೆ ಮರಳಿನ ಮೂಟೆ ಹೊರಿಸಿ ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಯಿತು. ಡಿಸಿಎಫ್ ಕರಿಕಾಳನ್, ವೈದ್ಯ ರಮೇಶ್ ಅರಮನೆ ಎಸಿಪಿ ಚಂದ್ರಶೇಖರ್ ಸೇರಿ ಹಲವು ಅಧಿಕಾರಿಗಳು ಪೂಜೆಯಲ್ಲಿ ಭಾಗಿಯಾಗಿದ್ದರು.

ಅರಮನೆ ಆವರಣದಲ್ಲಿ ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಿ ಪೂರ್ವಾಭ್ಯಾಸಕ್ಕೆ ಚಾಲನೆ.     

ಇನ್ನು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಂಭ್ರಮ ಕಳೆಗಟ್ಟುತ್ತಿದ್ದು, ಅರಮನೆ ಆವರಣದಲ್ಲಿ ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಿ ಪೂರ್ವಾಭ್ಯಾಸಕ್ಕೆ ಚಾಲನೆ ನೀಡಲಾಯಿತು.  ಅರಮನೆಯ ಆನೆ ಬಾಗಿಲ ಬಳಿ ಫಿರಂಗಿ ಗಾಡಿಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಕೆ ಮಾಡಲಾಯಿತು. ಚಾಮುಂಡೇಶ್ವರಿ ದೇವಿಯ ಭಾವಚಿತ್ರ ಇರಿಸಿ ಅರ್ಚಕ ಪ್ರಹ್ಲಾದ್ ಪೂಜೆ ನೆರವೇರಿಸಿದರು. ಮೈಸೂರು‌ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಅರಣ್ಯಾಧಿಕಾರಿ‌‌‌ ಕರಿಕಾಳನ್ ಸೇರಿದಂತೆ ಇತರ ಅಧಿಕಾರಿಗಳು ಪೂಜೆಯಲ್ಲಿ ಭಾಗಿಯಾಗಿದ್ದರು.

ವಿಜಯದಶಮಿ ಜಂಬೂಸವಾರಿ  ಮೆರವಣಿಗೆಯ ದಿನ ಚಿನ್ನದ ಅಂಬಾರಿ ಹೊತ್ತ ಆನೆ ಹೊರಡುವ ವೇಳೆ 21 ಬಾರಿ ಕುಶಾಲತೋಪುಗಳನ್ನು ಸಿಡಿಸಲಾಗುತ್ತದೆ‌. ಆ ವೇಳೆ ಭಾರೀ ಶಬ್ದ ಹೊರಹೊಮ್ಮುತ್ತದೆ. ಹಾಗಾಗಿ ದಸರಾ ಗಜಪಡೆ ಭಾರೀ ಶಬ್ದಕ್ಕೆ ಹೊಂದಿಕೊಳ್ಳಲೆಂಬ ಉದ್ದೇಶದಿಂದ ಆನೆಗಳು, ಕುದುರೆಗಳ‌ ಸಮ್ಮುಖದಲ್ಲೂ ಕುಶಾಲತೋಪು ಸಿಡಿಸುವ ತಾಲೀಮು ನಡೆಯುತ್ತದೆ. ಅದ್ದರಿಂದ ಕುಶಾಲತೋಪುಗಳನ್ನು ಸಿಡಿಸುವ ಸಲುವಾಗಿ ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯಿಂದ ಕುಶಾಲತೋಪು‌ ತಾಲೀಮು ನಡೆಸಲಾಯಿತು.

Key words:  Mysore Dasara – Workout -Abhimanyu and Team