ಇಂತಹ ಶತ ದಡ್ಡನಿಗೆ ಏನ್ ಉತ್ತರ ಕೊಡಲಿ-ಸಿದ್ದರಾಮಯ್ಯ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಚಿವ ಕೆ,ಎಸ್ ಈಶ್ವರಪ್ಪ…

ಬೆಂಗಳೂರು,ಆ,29,2019(www.justkannada.in): ಈಶ್ವರಪ್ಪ ದಡ್ಡ ಅಂತಾರೆ. ಸಿದ್ದರಾಮಯ್ಯ ಶತ ದಡ್ಡ. ಆಗಲೇ ಪಕ್ಷ ದ್ರೋಹ ಕೆಲಸ ಮಾಡಿದ್ದಾರೆ. ಅದಕ್ಕೆ ಅವ್ರನ್ನ ಜೆಡಿಎಸ್ ಪಕ್ಷದಿಂದ ಕಿತ್ತು ಹಾಕಿದ್ರು. ಇಂತಹ ಶತ ದಡ್ಡನಿಗೆ ಏನ್ ಉತ್ತರ ಕೊಡಲಿ ಎಂದು ಸಿದ್ಧರಾಮಯ್ಯ ವಿರುದ್ದ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಆಪರೇಶನ್ ಕಮಲ ರೂವಾರಿಯೇ ಸಿದ್ದರಾಮಯ್ಯ. ಸಿದ್ದರಾಮಯ್ಯ ಪಕ್ಷ ದ್ರೋಹ  ಮಾಡಿದ್ದರಿಂದಲೇ ಅವ್ರನ್ನ ಜೆಡಿಎಸ್ ಪಕ್ಷದಿಂದ  ಹೊರಹಾಕಿದ್ರು. ಇಂಥ ಶತ ದಡ್ಡನಿಗೆ ಏನ್ ಉತ್ತರ ಕೊಡಲಿ. ಬಿಜೆಪಿ ಕೆಜೆಪಿ ಓಟ್ ಡಿವೈಡ್ ಆಗಿ ಸೋತಿದ್ದೆ. ಈಗ ಗೆದ್ದಿದ್ದೇನೆ. ಬಾದಾಮಿಯಲ್ಲಿ ಸಾವಿರ ಓಟ್ ಲೀಡ್ ನಲ್ಲಿ ಸಿದ್ದರಾಮಯ್ಯ ಗೆದ್ದಿದ್ದಾರೆ. ಒಂದು ಪಕ್ಷದಲ್ಲಿ ಇರೋದನ್ನ ಕಲಿತುಕೋ ನೀನು ಎಂದು ಸಿದ್ದರಾಮಯ್ಯ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರದ ಮೇಲೂ ಫೋನ್ ಟ್ಯಾಪಿಂಗ್  ಆರೋಪ ಮಾಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಯಾವ್ಯಾನ್ಯಾವನೋ ಇದ್ದಾನೋ ಎಲ್ರೂ ಜೈಲಿಗೆ ಹೋಗ್ಬೇಕು. ಇದ್ರಲ್ಲಿ ಯಾರನ್ನೂ ಸಮರ್ಥನೆ ಮಾಡಿಕೊಳ್ಳಲ್ಲ ಎಂದು ಸ್ಪಷ್ಟನೆ ನೀಡಿದರು.

ಮೈತ್ರಿ ಸರ್ಕಾರದಲ್ಲಿ ಸಿಎಂ, ಹಾಗೂ ಉಸ್ತುವಾರಿ ಸಚಿವರೇ ಪ್ರವಾಸ ಮಾಡಿಲ್ಲ

ನೆರೆ ಪ್ರವಾಹ ನಿರ್ವಹಣೆ ಮಾಡುವಲ್ಲಿ ಬಿಜೆಪಿ ಸರ್ಕಾರ ವಿಫಲ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಸತ್ಯಾಗ್ರಹ ವಿಚಾರ ಕುರಿತು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಮೈತ್ರಿ ಸರ್ಕಾರ ಇದ್ದಾಗ ಬರಗಾಲಕ್ಕೆ ಹಣ ಕೊಡಿ ಅಂತ ಕೇಳಿದ್ದವು. ಸಿಎಂ, ಹಾಗೂ ಉಸ್ತುವಾರಿ ಸಚಿವರೇ ಪ್ರವಾಸ ಮಾಡಿಲ್ಲ. ವಿರೋಧ ಪಕ್ಷದವರು ಟೀಕೆ ಮಾಡಲೇಬೇಕು. ನೆರೆ ಪ್ರದೇಶಗಳಿಗೆ ಏನ್ ಮಾಡ್ಬೇಕೋ ಅದನ್ನ ಮಾಡ್ತಿದ್ದೇವೆ. ನಿರ್ಮಲಾ ಸೀತಾರಾಮನ್, ಅಮಿತ್ ಶಾ ಬಂದು ಸರ್ವೇ ಮಾಡಿದ್ರು. ಈಗ ಪಿಎಂ ಕರೆದುಕೊಂಡು ಬನ್ನಿ ಅಂತಿದ್ದಾರೆ. ಇವ್ರ ಅವಧಿಯಲ್ಲಿ ಇಷ್ಟೂ ಮಾಡ್ಲಿಲ್ಲ ಎಂದು ಟೀಕಿಸಿದರು.

ನೆರೆ ಸಂತ್ರಸ್ತರ ಅಕೌಂಟ್ ಗಳಿಗೆ ನೇರವಾಗಿ 10ಸಾವಿರ ಹಾಕಿದ್ದೇವೆ. ಮಂತ್ರಿಗಳೂ ಕೂಡ ಜಿಲ್ಲೆಗಳಲ್ಲಿ ಸಮೀಕ್ಷೆ ಮಾಡ್ತಿದ್ದಾರೆ. ಕೇಂದ್ರ ಸರ್ಕಾರದಿಂದಲೂ ತಂಡಗಳು ಬರ್ತಿವೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್  ಈ ಇಲಾಖೆ ಆಳ, ಅಂತ್ಯ ಇಲ್ಲದೇ ಇರೋ ಇಲಾಖೆ. ಬಡ ಜನರ ಜೀವನ ಹಸನು ಮಾಡುವಂತಹ ಇಲಾಖೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಎಂಟನೇ ತಾರೀಖು ಜಿಲ್ಲಾ ಪಂಚಾಯ್ತಿ ಸಿಇಓಗಳು ಸೇರಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಮಾರನೇ ದಿನ ಜಿ.ಪಂ ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರ ಜೊತೆ ಸಭೆ ನಡೆಸುತ್ತೇನೆ. ಬೆಳಗಾವಿಯ ಸುವರ್ಣಸೌಧದಲ್ಲಿ ಸಭೆ ನಡೆಸಲು ಉದ್ದೇಶಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಕುಡಿಯುವ ನೀರು ಪೂರೈಕೆ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಶುದ್ದ ಕುಡಿಯುವ ನೀರಿನ ಘಟಕಗಳ ಕಡೆ ಗಮನ ಹರಿಸುತ್ತೇವೆ. ತುರ್ತು ರಸ್ತೆ ಸಂಪರ್ಕಗಳು, ಉದ್ಯೋಗ ಸೃಷ್ಠಿ, ಕೂಲಿ ಪಾವತಿ, ಅಂತರ್ಜಲ ರಕ್ಷಣೆ, ಕೆರೆಗಳ ಪುನಶ್ಚೇತನ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಶೌಚಾಲಯಗಳ ನಿರ್ಮಾಣ ಹಾಗೂ ನಿರ್ವಹಣೆ ಬಗ್ಗೆ ಗಮನ ಕೊಡಲಾಗುವುದು. ಸ್ವಚ್ಛತೆ, ಕಸ ವಿಲೇವಾರಿ, ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣ, ಸ್ವಚ್ಛ ಭಾರತ್ ಯೋಜನೆಗೆ ಒತ್ತು. ಈ ವಿಚಾರಗಳ ಬಗ್ಗೆ ಎರಡು ದಿನ ಚಿಂತನಾ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಕಳೆದ ಬಾರಿ ಬಾಗಲಕೋಟೆಯಲ್ಲಿ ನಿರ್ಮಾಣವಾಗಿದ್ದ ಮನೆಗಳಿಗೆ ಯಾರೂ ಬರ್ತಿಲ್ಲ. ಹಾಗಾಗಿ ಈಗ ಹಳೆ ಮನೆಗಳನ್ನ ಡೆಮಾಲಿಶ್ ಮಾಡಿ , ಅವ್ರು ಸರ್ಕಾರ ನಿರ್ಮಾಣ ಮಾಡಿದ ಮನೆಗಳಿಗೆ ಬಂದ್ರೆ ಮಾತ್ರ ಕೀ ಕೋಡೋದು. ಇದರ ಬಗ್ಗೆ ಚಿಂತನೆ ಮಾಡ್ತಿದ್ದೇವೆ. ಎತ್ತರವಾದ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣಕ್ಕೆ ಚಿಂತನೆ ಮಾಡಲಾಗಿದೆ. ನೆರೆ ಪ್ರದೇಶಗಳಲ್ಲಿ ಸಾಕಷ್ಟು ಕ್ಲೀನಿಂಗ್ ಆಗಿದೆ. ರೋಗ ರುಜಿನಗಳು ಕಂಟ್ರೋಲ್ ಆಗಿವೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು. ಐದು ಲಕ್ಷ ವರೆಗೆ ಟೆಂಡರ್ ಇಲ್ಲದೇ ಕಾಮಗಾರಿಗೆ ಆದೇಶಿಸಲಾಗಿದೆ. ನೆರೆ, ಬರ ಇರುವ ಹಿನ್ನೆಲೆಯಲ್ಲಿ ಅಕ್ಟೋಬರ್ 31 ರ ತನಕ ಅದನ್ನ ವಿಸ್ತರಿಸಿದ್ದೇವೆ ಎಂದರು.

ಪಿಓಪಿ ಗಣೇಶ ಬ್ಯಾನ್ ಮಾಡಲು ಕಾನೂನಿನಿಂದ ಮಾತ್ರ ಸಾಧ್ಯವಾಗಲ್ಲ.ಪ್ಲಾಸ್ಟಿಕ್, ಶೌಚಾಲಯ ವಿಚಾರಗಳಲ್ಲೂ ಜನ ಜಾಗೃತಿ ಆಗಬೇಕು ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

Key words:  Minister- K,S Eshwarappa-singular -rebuke –against- Siddaramaiah.