ಕೆಆರ್’ಎಸ್ ಕಲಹ!: ಕೇವಲ ಮಾತನಾಡುವುದರಿಂದ ಯಾರೂ ಲೀಡರ್ ಆಗಲ್ಲ ಎಂದ ಜಿಟಿಡಿ

ಮೈಸೂರು, ಜುಲೈ 11, 2021 (www.justkannada.in): ಕೇವಲ ಮಾತನಾಡುವುದರಿಂದ ಯಾರೂ ಲೀಡರ್ ಆಗಲ್ಲ. ಕೆಆರ್​ಎಸ್ ವಿಚಾರ ಮಾತನಾಡಿದ್ರೆ ಸುಮಲತಾಗೂ ಡ್ಯಾಮೇಜ್ ಆಗುತ್ತೆ, ಜೆಡಿಎಸ್​ಗೂ ಡ್ಯಾಮೇಜ್ ಆಗುತ್ತೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಮಾತನಾಡುವುದರಿಂದಲೇ ಲೀಡರ್ ಆಗುತ್ತೇವೆ ಅಂದುಕೊಂಡರೆ ತಪ್ಪಾಗುತ್ತೆ. ಅದನ್ನು ಜನ ಒಪ್ಪೋದಿಲ್ಲ. ಡ್ಯಾಂ ಬಿರುಕು ಬಿಟ್ಟಿದೆ ಅಂತ ಸುಮಲತಾ ಆರೋಪ ಮಾಡಿದ್ರು. ಅದನ್ನು ಇಷ್ಟು ಬೆಳೆಸುವ ಅಗತ್ಯ ಇರಲಿಲ್ಲ. ಎರಡೂ ಕಡೆಯಿಂದ ವೈಯುಕ್ತಿಕ ವಿಚಾರಗಳ ಚರ್ಚೆ ನಡೆಯುತ್ತಿದೆ ಎಂದರು.

ಸದ್ಯಕ್ಕೆ ಇಬ್ಬರೂ ಚರ್ಚೆ ನಿಲ್ಲಿಸಿದ್ದಾರೆ. ಇಲ್ಲಿಗೇ ನಿಲ್ಲಿಸೋದು ಒಳ್ಳೆಯದು. ಇಲ್ಲದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತೆ. ಒಬ್ಬರ ಪರ ಹೆಚ್ಚು ಜನ ಇರಬಹುದು. ಮತ್ತೊಬ್ಬರ ಪರ ಕಡಿಮೆ ಜನ ಇರಬಹುದು. ಆದ್ರೆ ಜನ ರೊಚ್ಚಿಗೆದ್ದರೆ ಸಮಸ್ಯೆ ಆಗುತ್ತೆ ಎಂದು ಮೈಸೂರಿನಲ್ಲಿ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಮುಂದಿ‌ನ ಜಿಪಂ, ತಾಪಂ ಚುನಾವಣೆ ಹಿನ್ನಲೆಯಲ್ಲಿ ನಮ್ಮ ಬೆಂಬಲಿಗರನ್ನ ಪಕ್ಷೇತರವಾಗಿ ಕಣಕ್ಕೀಳಿಸುವ ಚಿಂತನೆ ಇದೆ. ಈ ಬಗ್ಗೆ ಮುಂದಿನ ವಾರದಿಂದ ಕ್ಷೇತ್ರ ಪ್ರವಾಸ ಕೈಗೊಳ್ಳುತ್ತೇನೆ. 2008ರ ಹುಣಸೂರು ಸೋಲಿನ ಅನುಭವ ನನ್ನ ಮುಂದೆ ಇದೆ. ಮತದಾರರ ಅಭಿಪ್ರಾಯ ಕೇಳದೆ 2008 ರಲ್ಲಿ ಸೋತಿದ್ದೇನೆ. ಈಗ ಮತದಾರರನ್ನ ಬಿಟ್ಟು ನಾನು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಮತದಾರರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ಜಿಟಿಡಿ ಹೇಳಿದರು,

ಮಾಜಿ ಪ್ರಧಾನಿ ಹೆಚ್‌ಡಿ.ದೇವೇಗೌಡ ನನ್ನನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಮಾತನ್ನಾಡಿದ್ದಾರೆ. ನೀನು, ಸಿಎಸ್.ಪುಟ್ಟರಾಜು, ವಾಸುವನ್ನು ಪಕ್ಷದಲ್ಲೇ ಉಳಿಸಿಕೊಳ್ಳುತ್ತೇನೆ. ನಾನು ಮತ್ತೊಮ್ಮೆ ಪಕ್ಷ ಕಟ್ಟುತ್ತೇನೆ. 2023ರಕ್ಕೆ ಪಕ್ಷ ಅಧಿಕಾರಕ್ಕೆ ತಂದು ನಿವೃತ್ತಿ ಆಗುತ್ತೇನೆ ಎಂದಿದ್ದಾರೆ ಎಂದಿದ್ದಾರೆ ಜಿಟಿಡಿ.