ಅಗತ್ಯ ವಸ್ತುಗಳ ಮೇಲೂ ಜಿಎಸ್ ಟಿ: ಇದೇನಾ ಮೋದಿ ಹೇಳಿರೋ ಅಚ್ಚೇ ದಿನ್..? ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ.

ಬೆಂಗಳೂರು,ಜುಲೈ,18,2022(www.justkannada.in):  ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ವಿಧಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದು, ಬೆಲೆ ಏರಿಕೆ ಮಾಡಿ ಜನರ ಮೇಲೆ ಬರೆ ಎಳೆದಿದ್ದಾರೆ. ಇದೇನಾ ಮೋದಿ ಹೇಳಿರೋ ಅಚ್ಚೇ ದಿನ್..? ಎಂದು ಗುಡುಗಿದ್ದಾರೆ.

ಈ ಕುರಿತು ಮಾತನಾಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ, ಅಗತ್ಯ ವಸ್ತುಗಳ ಮೇಲೂ ಜಿಎಸ್ ಟಿ ವಿಧಿಸುವ ಮೂಲಕ ಬಡವರ ಮೇಲೆ ಮತ್ತೊಂದು ಬರೆ ಎಳೆದಿದ್ದಾರೆ.  ಜನಸಾಮಾನ್ಯರು ಜೀವನ ಮಾಡೋದು ಹೇಗೆ..?  ಪೆಟ್ರೋಲ್ ಡೀಸೆಲ್, ಅಡುಗೆ ಎಣ್ಣೆ ಬೆಲೆ ಏರಿಕೆ ಆಯ್ತು ಈಗ ಅಗತ್ಯ ವಸ್ತುಗಳ ಮೇಲೂ ಜಿಎಸ್ ಟಿ. ಇದೇನಾ ಮೋದಿ ಹೇಳೀರೋ ಅಚ್ಚೇ ದಿನ್. ತೆರಿಗೆ ಹೆಸರಲ್ಲಿ ಬಡ ಮಧ್ಯಮ ಜನರ  ರಕ್ತ ಹೀರುತ್ತಿದ್ದಾರೆ ಎಂದು ಹರಿಹಾಯ್ದರು.

ಮೋದಿ ಅಧಿಕಾರಕ್ಕೆ ಬಂದು ಜನರಿಗೆ ಭ್ರಮೆ ಹುಟ್ಟಿಸಿದರು. ಬಡವರ ಹೊಟ್ಟೆಗೆ ಒದೆಯುವುದೇ ಅಚ್ಚೇ ದಿನ್ ಎಂದು ತಿಳಿದುಕೊಂಡಿರುವ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಊಟದ ತಟ್ಟೆಯಲ್ಲಿನ ಅಕ್ಕಿ, ಗೋಧಿ, ಹಾಲು, ಮೊಸರು, ಮಜ್ಜಿಗೆ, ಮೀನು, ಮಾಂಸ, ಮಂಡಕ್ಕಿ ಎಲ್ಲವನ್ನೂ ಕಿತ್ತುಕೊಳ್ಳಲು ಹೊರಟಿರುವುದು ಬಡವರ ಹತ್ಯೆಗೆ ಸಮನಾದ ಪಾಪ ಕರ್ಮ ಎಂದು  ಕಿಡಿಕಾರಿದ್ದಾರೆ.

Key words: GST –PM- Modi -Acche Din-Former CM -Siddaramaiah